Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯೆಹೋ

ಯೆಹೋ 22

Help us?
Click on verse(s) to share them!
1ಯೆಹೋಶುವನು ರೂಬೇನ್ಯರನ್ನೂ ಗಾದ್ಯರನ್ನೂ ಮನಸ್ಸೆಯ ಕುಲದ ಅರ್ಧ ಜನರನ್ನು ಕರೆಸಿ ಅವರಿಗೆ,
2“ನೀವು ಯೆಹೋವನ ಸೇವಕನಾದ ಮೋಶೆಯ ಆಜ್ಞೆಗಳೆಲ್ಲವನ್ನು ಕೈಕೊಂಡಿದ್ದೀರಿ. ನಾನು ಆಜ್ಞಾಪಿಸಿದ್ದನ್ನೆಲ್ಲಾ ನೆರವೇರಿಸಿದ್ದೀರಿ.
3ಈ ಕಾಲದಲ್ಲೆಲ್ಲಾ ನೀವು ನಿಮ್ಮ ಸಹೋದರರಿಂದ ಬೇರ್ಪಡದೆ ನಿಮ್ಮ ದೇವರಾದ ಯೆಹೋವನ ಆಜ್ಞೆಗಳನ್ನು ಪಾಲಿಸುತ್ತಾ ಬಂದಿದ್ದೀರಿ.
4ಈಗ ನಿಮ್ಮ ದೇವರಾದ ಯೆಹೋವನು ತನ್ನ ವಾಗ್ದಾನಕ್ಕನುಸಾರವಾಗಿ ನಿಮ್ಮ ಸಹೋದರರಿಗೆ ವಿಶ್ರಾಂತಿಯನ್ನು ದಯಪಾಲಿಸಿರುವುದರಿಂದ, ಆತನ ಸೇವಕನಾದ ಮೋಶೆಯು ಯೊರ್ದನಿನ ಆಚೆಯಲ್ಲಿ ನಿಮಗೆ ಕೊಟ್ಟಿರುವ ಸ್ವತ್ತಿನಲ್ಲಿರುವ ನಿಮ್ಮ ನಿಮ್ಮ ನಿವಾಸಗಳಿಗೆ ಹೋಗಬಹುದು.
5ಆದರೆ ಯೆಹೋವನ ಸೇವಕನಾದ ಮೋಶೆಯು ನಿಮಗೆ ಕೊಟ್ಟ ಧರ್ಮೋಪದೇಶದ ವಿಧಿಗಳನ್ನು ಜಾಗರೂಕತೆಯಿಂದ ಪಾಲಿಸಿರಿ; ಹಾಗೆಯೇ ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನ ಮಾರ್ಗದಲ್ಲೇ ನಡೆದು, ಆತನ ಆಜ್ಞೆಗಳನ್ನು ಕೈಕೊಂಡು ಆತನೊಂದಿಗೆ ಸೇರಿಕೊಂಡು ಪೂರ್ಣಮನಸ್ಸಿನಿಂದಲೂ, ಪೂರ್ಣಹೃದಯದಿಂದಲೂ ಆತನನ್ನು ಸೇವಿಸಿರಿ,” ಎಂದು ಹೇಳಿ
6ಅವರನ್ನು ಆಶೀರ್ವದಿಸಿ ಕಳುಹಿಸಿದನು. ಅವರು ತಮ್ಮ ನಿವಾಸಗಳಿಗೆ ಹೋದರು.
7ಮೋಶೆಯು ಮನಸ್ಸೆ ಕುಲದ ಅರ್ಧ ಜನರಿಗೆ ಬಾಷಾನಿನಲ್ಲಿ ಸ್ವತ್ತನ್ನು ಕೊಟ್ಟಿದ್ದನು. ಉಳಿದ ಅರ್ಧಜನರಿಗೆ ಯೆಹೋಶುವನು ಯೊರ್ದನಿನ ಪಶ್ಚಿಮದಲ್ಲಿ ಬೇರೆ ಕುಲದವರೊಂದಿಗೆ ಪಾಲುಕೊಟ್ಟಿದ್ದನು. ಇದಲ್ಲದೆ ಯೆಹೋಶುವನು ಅವರನ್ನು ಹೀಗೆ ಆಶೀರ್ವದಿಸಿ ತಮ್ಮ ಸ್ವಂತ ಸ್ಥಳಗಳಿಗೆ ಕಳುಹಿಸುವಾಗ
8ಅವರನ್ನು ಆಶೀರ್ವದಿಸಿ “ನೀವು ಬಹಳ ಸಮೃದ್ಧಿಯುಳ್ಳವರಾಗಿ ದನಕುರಿ, ಬೆಳ್ಳಿಬಂಗಾರ, ತಾಮ್ರ, ಕಬ್ಬಿಣ, ವಸ್ತ್ರ, ಮೊದಲಾದ ವಸ್ತುಗಳನ್ನು ತೆಗೆದುಕೊಂಡು ನಿಮ್ಮನಿಮ್ಮ ನಿವಾಸಗಳಿಗೆ ಹೋಗಿರಿ. ನಿಮ್ಮ ಶತ್ರುಗಳಿಂದ ತೆಗೆದುಕೊಂಡ ಕೊಳ್ಳೆಯಲ್ಲಿ ನಿಮ್ಮ ಸಹೋದರರಿಗೂ ಪಾಲು ಕೊಡಿರಿ” ಎಂದನು
9ಆಗ ರೂಬೇನ್ಯರೂ ಗಾದ್ಯರೂ ಮನಸ್ಸೆ ಕುಲದ ಅರ್ಧ ಜನರೂ ಕಾನಾನ್ ದೇಶದ ಶೀಲೋವಿನಲ್ಲಿದ್ದ ಇಸ್ರಾಯೇಲರನ್ನು ಬಿಟ್ಟು ಯೆಹೋವನ ಆಜ್ಞೆಗನುಸಾರವಾಗಿ ಮೋಶೆಯಿಂದ ತಮಗೆ ಸಿಕ್ಕಿದ ಸ್ವತ್ತಾದ ಗಿಲ್ಯಾದ್ ದೇಶಕ್ಕೆ ಹೊರಟು ಹೋದರು.
10ರೂಬೇನ್ಯರೂ ಗಾದ್ಯರೂ ಹಾಗೂ ಮನಸ್ಸೆ ಕುಲದ ಅರ್ಧ ಜನರೂ ಕಾನಾನ್ ದೇಶದಲ್ಲಿರುವ ಯೊರ್ದನಿನ ತೀರಪ್ರದೇಶಕ್ಕೆ ಬಂದಾಗ ಅಲ್ಲಿ ಒಂದು ದೊಡ್ಡ ಯಜ್ಞವೇದಿಯನ್ನು ಕಟ್ಟಿದರು.
11ರೂಬೇನ್ಯರು, ಗಾದ್ಯರು ಹಾಗೂ ಮನಸ್ಸೆಯ ಅರ್ಧ ಜನರು ಇಸ್ರಾಯೇಲ ದೇಶವಾದ ಕಾನಾನಿನ ಪೂರ್ವಕ್ಕಿರುವ ಯೊರ್ದನ್ ನದಿಯ ತೀರಪ್ರದೇಶದಲ್ಲಿ ಯಜ್ಞವೇದಿಯನ್ನು ಕಟ್ಟಿದ್ದಾರೆಂಬ ವರ್ತಮಾನವು ಮಿಕ್ಕ ಇಸ್ರಾಯೇಲರಿಗೂ ತಿಳಿದಾಗ,
12ಅವರೆಲ್ಲರೂ ಶೀಲೋವಿನಲ್ಲಿ ಒಟ್ಟಿಗೆ ಸೇರಿ ಅವರೊಡನೆ ಹೋರಾಡಲು ಸಿದ್ಧರಾದರು.
13ಅದಕ್ಕೆ ಮೊದಲು ಗಿಲ್ಯಾದಿನಲ್ಲಿರುವ ರೂಬೇನ್ಯರ, ಗಾದ್ಯರ ಹಾಗೂ ಮನಸ್ಸೆ ಕುಲದ ಅರ್ಧಜನರ ಬಳಿಗೆ ಮಹಾಯಾಜಕ ಎಲಿಯಾಜರನ ಮಗನಾದ ಫೀನೆಹಾಸನನ್ನು
14ಮತ್ತು ಕುಲಕ್ಕೆ ಒಬ್ಬನಂತೆ ಹತ್ತು ಮಂದಿ ನಾಯಕರನ್ನು ಕಳುಹಿಸಿದರು. ಇವರಲ್ಲಿ ಪ್ರತಿಯೊಬ್ಬನು ತನ್ನ ತನ್ನ ಕುಲಗೋತ್ರ ಕುಟುಂಬಗಳಲ್ಲಿ ಮುಖ್ಯಸ್ಥನಾಗಿದ್ದನು.
15ಇವರು ಗಿಲ್ಯಾದನಲ್ಲಿದ್ದ ರೂಬೇನ್ಯರ, ಗಾದ್ಯರ ಹಾಗೂ ಮನಸ್ಸೆ ಕುಲದ ಅರ್ಧಜನರ ಬಳಿಗೆ ಬಂದು,
16“ಯೆಹೋವನ ಸರ್ವ ಸಭೆಯ ಮಾತನ್ನು ಕೇಳಿರಿ; ನೀವು ಇಸ್ರಾಯೇಲಿನ ದೇವರಿಗೆ ವಿರುದ್ಧವಾಗಿ ಇಂಥ ದ್ರೋಹ ಮಾಡಿದ್ದೇಕೆ? ನಿಮಗೋಸ್ಕರ ಯಜ್ಞವೇದಿಯನ್ನು ಕಟ್ಟಿಕೊಂಡದ್ದರಿಂದ ನೀವು ಯೆಹೋವನಿಗೆ ದ್ರೋಹ ಮಾಡಿದಂತಾಯಿತು; ನೀವು ಈ ಹೊತ್ತು ಯೆಹೋವನಿಗೆ ವಿರೋಧವಾಗಿ ತಿರುಗಿ ಬಿದ್ದಂತಾಯಿತು.
17ನಾವು ಪೆಗೋರದಲ್ಲಿ ಅಪರಾಧಿಗಳಾದದ್ದು ಸಾಕಾಗಲಿಲ್ಲವೋ? ಅದರ ದೆಸೆಯಿಂದ ಯೆಹೋವನ ಸಭೆಗೆ ವ್ಯಾಧಿ ಬಂದರೂ ನಾವು ಇನ್ನೂ ಅದರಿಂದ ಪೂರ್ಣ ಶುದ್ಧರಾಗಲಿಲ್ಲ.
18ಈಗ ನೀವು ಪುನಃ ಯೆಹೋವನನ್ನು ತಳ್ಳಿ ಬಿಡುತ್ತಿದ್ದೀರೋ? ನೀವು ಈ ಹೊತ್ತು ಯೆಹೋವನಿಗೆ ವಿರೋಧವಾಗಿ ತಿರುಗಿ ಬಿದ್ದರೆ, ನಾಳೆಯೇ ಯೆಹೋವನ ಕೋಪಾಗ್ನಿಯು ಇಸ್ರಾಯೇಲ್ ಸರ್ವಸಭೆಯ ಮೇಲೆ ಉರಿಯ ತೊಡಗುವುದು.

19ನಿಮ್ಮ ದೇಶವು ಅಶುದ್ಧವಾಗಿದೆ ಎಂದು ತೋರಿದರೆ ಯೆಹೋವನ ಗುಡಾರವಿರುವ ಆತನ ಸ್ವಂತ ಸೀಮೆಗೆ ಬಂದು ನಮ್ಮ ಮಧ್ಯದಲ್ಲಿರುವ ಸ್ವತ್ತನ್ನು ತೆಗೆದುಕೊಳ್ಳಿ. ನಮ್ಮ ದೇವರಾದ ಯೆಹೋವನ ಯಜ್ಞವೇದಿಯ ಹೊರತು ನಿಮಗೋಸ್ಕರ ಇನ್ನೊಂದನ್ನು ಕಟ್ಟಿಕೊಂಡು ಯೆಹೋವನಿಗೂ ನಮಗೂ ವಿರೋಧವಾಗಿ ತಿರುಗಿ ಬೀಳಬೇಡಿರಿ.
20ಜೆರಹನ ಮಗನಾದ ಆಕಾನನು ಯೆಹೋವನ ಸೊತ್ತನ್ನು ಕದ್ದುಕೊಂಡು ದ್ರೋಹಿಯಾದಾಗ ಯೆಹೋವನ ಕೋಪವು ಇಸ್ರಾಯೇಲ್ಯರ ಸರ್ವಸಭೆಯ ಮೇಲೆ ಬಂದಿತು. ಅವನ ಪಾಪದ ದೆಸೆಯಿಂದ ಅವನೊಡನೆ ಅನೇಕರು ಸಾಯಬೇಕಾಯಿತಲ್ಲಾ” ಎಂದು ಹೇಳಿದನು.
21ಆಗ ರೂಬೇನ್ಯರು, ಗಾದ್ಯರು ಮತ್ತು ಮನಸ್ಸೆ ಕುಲದ ಅರ್ಧ ಜನರು ಇಸ್ರಾಯೇಲ್ ಕುಲಾಧಿಪತಿಗಳಿಗೆ ಹೀಗೆಂದು ಉತ್ತರಿಸಿದರು:
22“ದೇವಾಧಿದೇವನಾದ ಯೆಹೋವನು ಇದಕ್ಕೆ ಸಾಕ್ಷಿ; ಆ ದೇವಾಧಿದೇವನಾದ ಯೆಹೋವನಿಗೆ ಇದು ಗೊತ್ತಿದೆ. ಇಸ್ರಾಯೇಲರಿಗೂ ಗೊತ್ತಾಗುವುದು. ನಾವು ದ್ರೋಹಿಗಳು, ಯೆಹೋವನ ವಿರುದ್ಧವಾಗಿ ಪಾಪಮಾಡಿದವರು ಆಗಿದ್ದರೆ ಯೆಹೋವನು ನಮ್ಮನ್ನು ಈ ಹೊತ್ತೇ ನಮ್ಮ ಜೀವವನ್ನು ತೆಗೆದುಬಿಡಲಿ.
23ನಾವು ಯೆಹೋವನಿಂದ ವಿಮುಖರಾಗಿ ಸರ್ವಾಂಗಹೋಮ, ಸಮಾಧಾನಯಜ್ಞ, ಧಾನ್ಯ ನೈವೇದ್ಯ ಇವುಗಳನ್ನು ಸಮರ್ಪಿಸುವುದಕ್ಕೋಸ್ಕರ ಈ ಯಜ್ಞವೇದಿಯನ್ನು ಕಟ್ಟಿದ್ದರೆ ಯೆಹೋವನು ತಾನೇ ನಮ್ಮನ್ನು ಶಿಕ್ಷಿಸಲಿ.
24ಒಂದು ವಿಶೇಷವಾದ ಉದ್ದೇಶದಿಂದ ಈ ಕೆಲಸವನ್ನು ಮಾಡಿದ್ದೇವಷ್ಟೇ, ಮುಂದೆ ನಿಮ್ಮ ಮಕ್ಕಳು ನಮ್ಮ ಮಕ್ಕಳಿಗೆ, ‘ಇಸ್ರಾಯೇಲ್ ದೇವರಾದ ಯೆಹೋವನಲ್ಲಿ ನಿಮಗೇನು ಪಾಲಿದೆ?’
25ರೂಬೇನ್ಯರೇ, ಗಾದ್ಯರೇ, ಯೆಹೋವನು ನಿಮಗೂ ನಮಗೂ ನಡುವೆ ಈ ಯೊರ್ದನ್ ನದಿಯನ್ನು ಮೇರೆಯಾಗಿ ಇಟ್ಟಿದ್ದಾನೆ. ಯೆಹೋವನಲ್ಲಿ ನಿಮಗೆ ಯಾವ ಪಾಲೂ ಇಲ್ಲ ಎಂದು ಹೇಳಿ ನಿಮ್ಮ ಮಕ್ಕಳು ನಮ್ಮ ಮಕ್ಕಳನ್ನು ದೈವಭಕ್ತಿಯಿಂದ ಬೇರ್ಪಡಿಸಿಯಾರೆಂದು ಭಯಪಟ್ಟೆವು.
26ಈ ಕಾರಣದಿಂದಲೇ, ‘ಬನ್ನಿ, ಒಂದು ಯಜ್ಞವೇದಿಯನ್ನು ಕಟ್ಟೋಣ. ಅದು ಸರ್ವಾಂಗಹೋಮಯಜ್ಞಗಳನ್ನು ಸಮರ್ಪಿಸುವುದಕ್ಕಲ್ಲ,’
27ಆದರೆ ಯೆಹೋವನ ಸನ್ನಿಧಿಯಲ್ಲಿ ಸರ್ವಾಂಗಹೋಮಯಜ್ಞ, ಸಮಾಧಾನಯಜ್ಞ, ಮೊದಲಾದವುಗಳನ್ನು ಸಮರ್ಪಿಸಿ ಆರಾಧಿಸುವುದಕ್ಕೋಸ್ಕರ ನಮಗೂ ಹಕ್ಕಿದೆ ಎಂಬುದಕ್ಕೆ ಇದು ನಮಗೂ, ನಿಮಗೂ, ನಮ್ಮ ಸಂತಾನಕ್ಕೂ ನಿಮ್ಮ ಸಂತಾನಕ್ಕೂ ಸಾಕ್ಷಿಯಾಗಿರುವುದು. ಇದರಿಂದ ಮುಂದೆ ನಿಮ್ಮ ಮಕ್ಕಳು ನಮ್ಮ ಮಕ್ಕಳಿಗೆ ಯೆಹೋವನಲ್ಲಿ ನಿಮಗೆ ಪಾಲಿಲ್ಲವೆಂದು ಹೇಳುವುದಕ್ಕೆ ಆಸ್ಪದವಿರುವುದಿಲ್ಲ.
28ಅವರು ಮುಂದೆ ನಮಗಾಗಲಿ, ನಮ್ಮ ಸಂತಾನದವರಿಗಾಗಲಿ ಈ ರೀತಿಯಾಗಿ ಹೇಳಿದರೆ ನಾವು ಅವರಿಗೆ ‘ಯೆಹೋವನ ಯಜ್ಞವೇದಿಯ ಮಾದರಿಯನ್ನು ನೋಡಿರಿ: ನಮ್ಮ ಪೂರ್ವಿಕರು ಇದನ್ನು ಸರ್ವಾಂಗಹೋಮ ಯಜ್ಞಗಳನ್ನು ಸಮರ್ಪಿಸುವುದಕ್ಕೋಸ್ಕರ ಕಟ್ಟಲಿಲ್ಲ; ಇದು ನಮ್ಮ ನಿಮ್ಮ ಮಧ್ಯದಲ್ಲಿ ಒಂದು ಸಾಕ್ಷಿಯಾಗಿದೆಯಷ್ಟೆ’ ಎಂದು ಹೇಳುವೆವು.
29ನಮ್ಮ ದೇವರಾದ ಯೆಹೋವನ ಗುಡಾರದ ಮುಂದಿರುವ ಯಜ್ಞವೇದಿಯ ಹೊರತು ಸರ್ವಾಂಗಹೋಮ, ಧಾನ್ಯನೈವೇದ್ಯ, ಸಮಾಧಾನಯಜ್ಞ, ಮೊದಲಾದವುಗಳನ್ನು ಸಮರ್ಪಿಸುವುದಕ್ಕೋಸ್ಕರ ಬೇರೊಂದು ಯಜ್ಞವೇದಿಯನ್ನು ಕಟ್ಟಿ ಯೆಹೋವನಿಗೆ ವಿರುದ್ಧವಾಗಿ ದ್ರೋಹಿಗಳಾಗಿರದಂತಾಗಲಿ. ಹಾಗೆ ನಮಗೆ ಎಂದಿಗೂ ಆಗದಿರಲಿ” ಎಂದರು.
30ಯಾಜಕನಾದ ಫೀನೆಹಾಸನೂ ಅವನ ಜೊತೆಯಲ್ಲಿ ಬಂದ ಕುಲಾಧಿಪತಿಗಳಾಗಿರುವ ಇಸ್ರಾಯೇಲ್ ಪ್ರಭುಗಳು, ರೂಬೇನ್, ಗಾದ್, ಮನಸ್ಸೆಯ ಕುಲಗಳವರ ಮಾತುಗಳನ್ನು ಕೇಳಿ ಸಂತೋಷಪಟ್ಟರು.
31ಮಹಾಯಾಜಕನಾದ ಎಲ್ಲಾಜಾರನ ಮಗನಾದ ಫೀನೆಹಾಸನು ರೂಬೇನ್, ಗಾದ್, ಮನಸ್ಸೆ ಕುಲಗಳವರಿಗೆ “ನೀವು ಯೆಹೋವನಿಗೆ ವಿರುದ್ಧವಾಗಿ ಅಂಥ ದ್ರೋಹವನ್ನು ಮಾಡಲಿಲ್ಲವಾದ್ದರಿಂದ ಆತನು ನಮ್ಮ ಮಧ್ಯದಲ್ಲಿದ್ದಾನೆಂಬುದು ಈಗ ನಮಗೆ ತಿಳಿಯಿತು. ಹೀಗಿರಲಾಗಿ ನೀವು ಇಸ್ರಾಯೇಲರನ್ನು ಯೆಹೋವನ ಶಿಕ್ಷಾಹಸ್ತದಿಂದ ತಪ್ಪಿಸಿದ್ದೀರಿ” ಎಂದನು.
32ಮಹಾಯಾಜಕನಾದ ಎಲ್ಲಾಜಾರನ ಮಗನಾದ ಫೀನೆಹಾಸನು, ಪ್ರಭುಗಳು, ಗಿಲ್ಯಾದ್ ಸೀಮೆಯಲ್ಲಿದ್ದ ರೂಬೇನ್ಯರು, ಗಾದ್ಯರು ಇವರ ಬಳಿಯಿಂದ ಕಾನಾನ್ ದೇಶದಲ್ಲಿದ್ದ ಇಸ್ರಾಯೇಲರ ಬಳಿಗೆ ಬಂದು, ಅವರಿಗೆ ಈ ವರ್ತಮಾನವನ್ನು ತಿಳಿಸಲು
33ಅವರು ಬಹು ಸಂತೋಷಪಟ್ಟು ದೇವರನ್ನು ಕೊಂಡಾಡಿ ರೂಬೇನ್ ಗಾದ್ ಕುಲಗಳೊಡನೆ ಯುದ್ಧ ಮಾಡಿ ಅವರ ದೇಶವನ್ನು ಹಾಳುಮಾಡಬೇಕೆಂಬ ಆಲೋಚನೆಯನ್ನು ಬಿಟ್ಟರು.
34ರೂಬೇನ್ಯರೂ ಗಾದ್ಯರೂ ಯೆಹೋವನೇ ದೇವರು ಎಂಬುದಕ್ಕೆ ಈ ಯಜ್ಞವೇದಿಯೇ ಸಾಕ್ಷಿ ಎಂದು ಹೇಳಿ ಅದಕ್ಕೆ ಏದ್ ಎಂಬ ಹೆಸರಿಟ್ಟರು.