Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - 2 ಸಮು - 2 ಸಮು 23

2 ಸಮು 23:1-17

Help us?
Click on verse(s) to share them!
1ದಾವೀದನ ಕೊನೆಯ ಮಾತುಗಳು - ಇಷಯನ ಮಗನಾದ ದಾವೀದನು, ಉನ್ನತ ಸ್ಥಾನದಲ್ಲಿ ಸ್ಥಾಪಿಸಲ್ಪಟ್ಟವನು, ಯಾಕೋಬನ ದೇವರಿಂದ ಅಭಿಷೇಕಿಸಲ್ಪಟ್ಟವನೂ, ಇಸ್ರಾಯೇಲ್ಯರ ವರಕವಿಯೂ ಆಗಿರುವವನ ನುಡಿಗಳು:
2“ಯೆಹೋವನ ಆತ್ಮವು ನನ್ನ ಮೂಲಕ ಮಾತನಾಡಿತು. ಆತನ ವಾಕ್ಯವು ನನ್ನ ಬಾಯಲ್ಲಿತ್ತು.
3ಇಸ್ರಾಯೇಲರ ಶರಣನೂ, ದೇವರೂ ಆಗಿರುವಾತನು ಹೇಳಿದ್ದೇನೆಂದರೆ, ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಜನರನ್ನು ನೀತಿಯಿಂದ ಆಳುವವನು,
4ಮೋಡಗಳಿಲ್ಲದ ಪ್ರಾತಃಕಾಲದಲ್ಲಿ ತೇಜೋಮಯನಾಗಿ ಉದಯಿಸಿ, ಮೋಡಗಳನ್ನು ಚದುರಿಸಿಬಿಟ್ಟು, ಮಳೆಬಿದ್ದ ಭೂಮಿಯಿಂದ ಹುಲ್ಲನ್ನು ಮೊಳೆಯಿಸುವ ಸೂರ್ಯನಿಗೆ ಸಮಾನನಾಗಿದ್ದಾನೆ.
5ನನ್ನ ಮನೆಯು ಯೆಹೋವನ ಸನ್ನಿಧಿಯಲ್ಲಿ ಹೀಗೆಯೇ ಸ್ಥಿರವಾಗಿರುತ್ತದಲ್ಲವೇ? ಆತನು ನನ್ನೊಡನೆ ಒಡಂಬಡಿಕೆ ಮಾಡಿಕೊಂಡಿದ್ದಾನಲ್ಲವೋ? ಅದು ಎಂದಿಗೂ ಬಿದ್ದುಹೋಗದೆ ಎಲ್ಲಾ ವಿಷಯಗಳಲ್ಲಿಯೂ ಖಚಿತವಾಗಿರುತ್ತದೆ. ನನ್ನ ರಕ್ಷಣೆಯ ಮೂಲವೂ, ನನ್ನ ಅಭಿಲಾಷೆಯನ್ನು ಪೂರ್ತಿಗೊಳಿಸುವವನೂ ಆತನೇ ಅಲ್ಲವೋ?
6ದುಷ್ಟರು ದೂರಕ್ಕೆ ಬಿಸಾಡಲ್ಪಟ್ಟ ಮುಳ್ಳುಗಳಂತಿರುತ್ತಾರೆ. ಅವುಗಳನ್ನು ಹಿಡಿಯಬೇಕೆಂದಿರುವವನು ತನ್ನ ಕೈಯಿಂದ ಹಿಡಿಯಲಾರದೆ,
7ಕಬ್ಬಿಣದ ಆಯುಧವನ್ನೂ, ಬರ್ಜಿಯ ಹಿಡಿಯನ್ನೂ ಉಪಯೋಗಿಸಬೇಕು. ಅವು ಬಿದ್ದಲ್ಲಿಯೇ ಬೆಂಕಿಯಿಂದ ಸುಟ್ಟುಹೋಗುವವು.”
8ದಾವೀದನೊಂದಿಗಿದ್ದ ರಣವೀರರ ಪಟ್ಟಿ: ತಹ್ಕೆಮೋನ್ಯನಾದ ಯೋಷಬ್ ಬಷ್ಬೆಬೆತನು ಸರದಾರರಲ್ಲಿ ಮುಖ್ಯಸ್ಥನು. ಎಚ್ನೀಯನಾದ ಅದೀನೋ ಅನ್ನಿಸಿಕೊಳ್ಳುವ ಇವನು ಒಂದೇ ಸಾರಿ ಎಂಟುನೂರು ಮಂದಿಯನ್ನು ಕೊಂದನು.
9ಎರಡನೆಯವನು ಅಹೋಹ್ಯನಾದ ದೋದೋ ಎಂಬುವವನ ಮಗನಾಗಿರುವ ಎಲ್ಲಾಜಾರನು. ಫಿಲಿಷ್ಟಿಯರು ಯುದ್ಧಕ್ಕೆ ಕೂಡಿಕೊಂಡಾಗ ಅವರನ್ನು ನಿಂದಿಸುವುದಕ್ಕೆ ದಾವೀದನ ಜೊತೆಯಲ್ಲಿ ಹೋದ ಮೂರು ಮಂದಿ ಶೂರರಲ್ಲಿ ಇವನೂ ಒಬ್ಬನಾಗಿದ್ದನು.
10ಇಸ್ರಾಯೇಲರು ಹೋದ ನಂತರ ಇವನು ನಿಂತುಕೊಂಡು, ಕತ್ತಿ ಹಿಡಿದು, ಕೈ ಸೋತು ಹೋಗುವ ತನಕ ಫಿಲಿಷ್ಟಿಯರನ್ನು ಕೊಲ್ಲುತ್ತಲೇ ಇದ್ದನು. ಆ ದಿನದಲ್ಲಿ ಯೆಹೋವನು ಮಹಾಜಯವನ್ನುಂಟುಮಾಡಲು ಇಸ್ರಾಯೇಲರು ಸುಲಿದುಕೊಳ್ಳುವುದಕ್ಕಾಗಿ ಹಿಂದಿರುಗಿದರು.
11ಮೂರನೆಯವನು ಹರಾರ್ಯನಾದ ಆಗೇಯನ ಮಗ ಶಮ್ಮ ಎಂಬುವವನು. ಫಿಲಿಷ್ಟಿಯರು ದೊಡ್ಡ ಗುಂಪಾಗಿ ಒಂದು ಅಲಸಂದಿಯ ಹೊಲಕ್ಕೆ ಬಂದರು.
12ಇಸ್ರಾಯೇಲ್ಯರು ಅವರ ಎದುರಿನಿಂದ ಓಡಿಹೋದಾಗ, ಇವನು ಆ ಹೊಲದ ಮಧ್ಯದಲ್ಲೇ ನಿಂತುಕೊಂಡು, ಫಿಲಿಷ್ಟಿಯರನ್ನು ಕೊಂದು, ಹೊಲವನ್ನು ಕಾಪಾಡಿದನು. ಹೀಗೆ ಯೆಹೋವನು ಮಹಾಜಯವನ್ನುಂಟುಮಾಡಿದನು.
13ಮೂವತ್ತು ಮಂದಿ ಪ್ರಸಿದ್ಧ ಶೂರರಲ್ಲಿ ದಾವೀದನು ಅದುಲ್ಲಾಮ್ ಗವಿಯಲ್ಲಿದ್ದಾಗ ಸುಗ್ಗಿಕಾಲದಲ್ಲಿ ಅವನ ಬಳಿಗೆ ಮೂವರು ಬಂದರು. ಫಿಲಿಷ್ಟಿಯರು ದಂಡೆತ್ತಿ ಬಂದು ರೆಫಾಯೀಮ್ ತಗ್ಗಿನಲ್ಲಿ ಪಾಳೆಯಮಾಡಿಕೊಂಡಾಗ,
14ದಾವೀದನು ಆ ಅದುಲ್ಲಾಮ್ ದುರ್ಗದಲ್ಲಿದ್ದನು. ಫಿಲಿಷ್ಟಿಯರು ಬೇತ್ಲೆಹೇಮಿನಲ್ಲಿ ಕಾವಲುದಂಡನ್ನಿಟ್ಟಿದ್ದರು.
15ಅದೇ ಸಮಯದಲ್ಲಿ ದಾವೀದನು ಲವಲವಿಕೆಯಿಂದ “ಬೇತ್ಲೆಹೇಮ್ ಊರಿನ ಬಾಗಿಲ ಬಳಿಯಲ್ಲಿರುವ ಬಾವಿಯ ನೀರನ್ನು ಯಾರಾದರೂ ನನಗೆ ತಂದುಕೊಡುವುದಾದರೆ ಎಷ್ಟೋ ಒಳ್ಳೆಯದು” ಎಂದೂ ಕೇಳಿದನು.
16ಕೂಡಲೇ ಆ ಮೂರು ಮಂದಿ ಪರಾಕ್ರಮಶಾಲಿಗಳು ಫಿಲಿಷ್ಟಿಯರ ದಂಡಿನಲ್ಲಿ ನುಗ್ಗಿ ಹೋಗಿ, ಬೇತ್ಲೆಹೇಮಿನ ಬಾಗಿಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ, ದಾವೀದನಿಗೆ ತಂದು ಕೊಟ್ಟರು.
17ಆದರೆ ಅವನು ಅದನ್ನು ಕುಡಿಯಲೊಲ್ಲದೆ, “ಯೆಹೋವನೇ, ಈ ನೀರನ್ನು ಕುಡಿಯುವುದು ನನಗೆ ದೂರವಾಗಿರಲಿ. ಜೀವದಾಶೆ ತೊರೆದವರ ರಕ್ತವನ್ನು ನಾನು ಕುಡಿಯಬೇಕೆ? ಇದನ್ನು ಕುಡಿಯುವುದೇ ಇಲ್ಲ” ಎಂದು ಹೇಳಿ, ಅದನ್ನು ಯೆಹೋವನ ಮುಂದೆ ಹೊಯ್ದನು. ಆ ಮೂರು ಜನರು ಪರಾಕ್ರಮಶಾಲಿಗಳಾಗಿದ್ದರು.

Read 2 ಸಮು 232 ಸಮು 23
Compare 2 ಸಮು 23:1-172 ಸಮು 23:1-17