Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - 2 ಸಮು

2 ಸಮು 3

Help us?
Click on verse(s) to share them!
1ಬಹು ದಿನಗಳವರೆಗೆ ಸೌಲನ ವಂಶದವರಿಗೂ ಮತ್ತು ದಾವೀದನ ವಂಶದವರಿಗೂ ಯುದ್ಧ ನಡೆಯಿತು. ದಾವೀದನು ಬಲಗೊಳ್ಳುತ್ತಾ ಬಂದನು. ಸೌಲನ ವಂಶವು ದುರ್ಬಲವಾಗುತ್ತಾ ಬಂತು.
2ಹೆಬ್ರೋನಿನಲ್ಲಿರುವಾಗ ದಾವೀದನಿಗೆ ಹುಟ್ಟಿದ ಮಕ್ಕಳು; ಚೊಚ್ಚಲ ಮಗನು ಅಮ್ನೋನನು, ಇವನು ಇಜ್ರೇಲಿನವಳಾದ ಅಹೀನೋವಮಳಲ್ಲಿ ಹುಟ್ಟಿದವನು.
3ಎರಡನೆಯವನು ಕಿಲಾಬನು. ಇವನು ಕರ್ಮೆಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳಲ್ಲಿ ಹುಟ್ಟಿದವನು. ಮೂರನೆಯವನು ಅಬ್ಷಾಲೋಮನು. ಇವನು ಗೆಷೂರಿನ ಅರಸನಾದ ತಲ್ಮೈ ಎಂಬುವನ ಮಗಳಾದ ಮಾಕಳ ಪುತ್ರನು.
4ನಾಲ್ಕನೆಯವನು ಅದೋನೀಯನು. ಇವನು ಹಗ್ಗೀತಳ ಮಗನು. ಐದನೆಯವನು ಶೆಫಟ್ಯನು, ಇವನು ಅಬೀಟಲಳ ಮಗನು.
5ಆರನೆಯವನು ಇತ್ರಾಮನು. ಇವನು ದಾವೀದನಿಗೆ ಅವನ ಹೆಂಡತಿಯಾದ ಎಗ್ಲಳಲ್ಲಿ ಹುಟ್ಟಿದವನು. ಹೆಬ್ರೋನಿನಲ್ಲಿರುವಾಗ ದಾವೀದನಿಗೆ ಹುಟ್ಟಿದ ಮಕ್ಕಳು ಇವರೇ.
6ಸೌಲನ ವಂಶದವರಿಗೂ ದಾವೀದನ ವಂಶದವರಿಗೂ ಯುದ್ಧ ನಡೆಯುತ್ತಿರುವಾಗ ಸೌಲನ ವಂಶದವರಲ್ಲಿ ಅಬ್ನೇರನೇ ಬಲಿಷ್ಠನಾಗಿದ್ದನು.
7ಅಯಾಹನ ಮಗಳಾದ ರಿಚ್ಪಳು ಸೌಲನ ಉಪಪತ್ನಿಯಾಗಿದ್ದಳು. ಒಂದು ದಿನ ಈಷ್ಬೋಶೆತನು ಅಬ್ನೇರನನ್ನು, “ನೀನು ನನ್ನ ತಂದೆಯ ಉಪಪತ್ನಿಯರನ್ನು ಕೂಡಿದ್ದೇಕೆ?” ಎಂದು ಕೇಳಿದನು.
8ಅಬ್ನೇರನು ಈ ಮಾತನ್ನು ಕೇಳಿ ಕೋಪಗೊಂಡು ಈಷ್ಬೋಶೆತನಿಗೆ, “ಈ ವರೆಗೆ ನಾನು ನಿನ್ನ ತಂದೆಯಾದ ಸೌಲನ ಕುಟುಂಬಕ್ಕೂ ಅವನ ಬಂಧು ಮಿತ್ರರಿಗೂ ದಯೆತೋರಿಸುತ್ತಿದ್ದೇನಲ್ಲಾ. ನಿನ್ನನ್ನು ದಾವೀದನ ಕೈಗೆ ಒಪ್ಪಿಸಿಕೊಡಲಿಲ್ಲವಷ್ಟೆ. ಈಗ ಈ ಹೆಂಗಸಿನ ದೆಸೆಯಿಂದ ನನ್ನಲ್ಲಿ ತಪ್ಪುಹಿಡಿಯುವುದಕ್ಕೆ ನಾನೇನು ಯೆಹೂದ ನಾಯಿಯ ತಲೆಯೋ?
9ನಾನು ಅರಸುತನವನ್ನು ಸೌಲನ ಕುಟುಂಬದಿಂದ ತೆಗೆದು ದಾನಿನಿಂದ ಬೇರ್ಷೆಬದ ವರೆಗಿರುವ ಎಲ್ಲಾ ಇಸ್ರಾಯೇಲರಲ್ಲಿಯೂ, ಯೆಹೂದ್ಯರಲ್ಲಿಯೂ ದಾವೀದನ ಸಿಂಹಾಸನವನ್ನು ಸ್ಥಿರಪಡಿಸಿ,
10ಯೆಹೋವನಾದ ದೇವರು ದಾವೀದನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸದೆ ಹೋದರೆ, ಆತನು ನನಗೆ ಬೇಕಾದದ್ದನ್ನು ಮಾಡಲಿ” ಅಂದನು.
11ಈಷ್ಬೋಶೆತನು ಅವನಿಗೆ ಹೆದರಿ ಏನೂ ಉತ್ತರಕೊಡಲಾರದೆ ಹೋದನು.
12ಅನಂತರ ಅಬ್ನೇರನು ದಾವೀದನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ದೇಶವು ಯಾರದು? ನೀನು ನನ್ನೊಡನೆ ಒಡಂಬಡಿಕೆ ಮಾಡಿಕೊಂಡರೆ ಇಸ್ರಾಯೇಲರನ್ನೆಲ್ಲಾ ನಿನ್ನ ಕಡೆಗೆ ತಿರುಗಿಸುವ ಪ್ರಯತ್ನದಲ್ಲಿ ನಾನು ನಿನ್ನ ಸಂಗಡ ಕೈಜೋಡಿಸುತ್ತೇನೆ” ಎಂದು ಹೇಳಿಸಿದನು.
13ಅದಕ್ಕೆ ದಾವೀದನು, “ಒಳ್ಳೆಯದು, ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳುತ್ತೇನೆ. ಆದರೆ ನಿನ್ನಿಂದ ನನಗೆ ಒಂದು ಸಹಾಯ ಬೇಕು. ನನ್ನನ್ನು ನೋಡುವುದಕ್ಕೆ ಬರುವಾಗ ಸೌಲನ ಮಗಳಾದ ಮೀಕಲಳನ್ನು ಕರೆದುಕೊಂಡು ಬರಬೇಕು. ಹಾಗೆ ಕರೆದುಕೊಂಡು ಬಾರದಿದ್ದರೆ, ನೀನು ನನ್ನ ಮುಖವನ್ನು ನೋಡಕೂಡದು” ಎಂದು ಉತ್ತರಕೊಟ್ಟನು.
14ಆಗ ದಾವೀದನು ಸೌಲನ ಮಗನಾದ ಈಷ್ಬೋಶೆತನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ನಾನು ನೂರು ಮಂದಿ ಫಿಲಿಷ್ಟಿಯರ ಮುಂದೊಗಲನ್ನು ತಂದು ಕೊಟ್ಟು ವರಿಸಿದ ನನ್ನ ಹೆಂಡತಿಯಾದ ಮೀಕಲಳನ್ನು ನನಗೊಪ್ಪಿಸು” ಎಂಬುದಾಗಿ ಆಜ್ಞಾಪಿಸಿದನು.
15ಈಷ್ಬೋಶೆತನು ಲಯಿಷನ ಮಗನೂ ಆಕೆಯ ಗಂಡನೂ ಆದ ಪಲ್ಟೀಯೇಲನ ಮನೆಗೆ ಆಳುಗಳನ್ನು ಕಳುಹಿಸಿ ಆಕೆಯನ್ನು ಕರೆಯಿಸಿದನು.
16ಆಗ ಪಲ್ಟೀಯೇಲನು ಬಹುರೀಮಿನವರೆಗೆ ಅಳುತ್ತಾ ಆಕೆಯ ಹಿಂದೆ ಹೋದನು. ಅನಂತರ ಅಬ್ನೇರನು ಅವನಿಗೆ, “ಹಿಂದಿರುಗಿ ಮನೆಗೆ ಹೋಗು” ಎಂದು ಹೇಳಲು ಅವನು ಹಿಂದಿರುಗಿ ಹೋದನು.
17ಅಬ್ನೇರನು ಇಸ್ರಾಯೇಲರ ಹಿರಿಯರಿಗೆ, “ದಾವೀದನು ನಮ್ಮ ಅರಸನಾಗಬೇಕೆಂದು ನೀವು ಮೊದಲು ಅಪೇಕ್ಷಿಸಿದಂತೆಯೇ ಈಗ ಮಾಡಿರಿ.
18ಯೆಹೋವನು ದಾವೀದನ ವಿಷಯವಾಗಿ ನನ್ನ ಸೇವಕನಾದ ದಾವೀದನ ಮುಖಾಂತರವಾಗಿ ನನ್ನ ಪ್ರಜೆಗಳಾದ ಇಸ್ರಾಯೇಲ್ಯರನ್ನು ಫಿಲಿಷ್ಟಿಯರ ಕೈಗೂ ಬೇರೆ ಎಲ್ಲಾ ಶತ್ರುಗಳ ಕೈಗೂ ತಪ್ಪಿಸುವನೆಂದು ನುಡಿದಿದ್ದಾನಲ್ಲಾ” ಎಂದು ಹೇಳಿದನು.

19ಅವನು ಬೆನ್ಯಾಮೀನ್ಯರಿಗೂ ಇದೇ ಪ್ರಕಾರ ಹೇಳಿದನು. ತರುವಾಯ ಅವನು ಇಸ್ರಾಯೇಲರೂ ಬೆನ್ಯಾಮೀನ್ಯರೆಲ್ಲರೂ ಒಪ್ಪಿಕೊಂಡು ಹೇಳಿದ ಮಾತುಗಳನ್ನು ದಾವೀದನಿಗೆ ತಿಳಿಸುವುದಕ್ಕೋಸ್ಕರ ಹೆಬ್ರೋನಿಗೆ ಹೊರಟನು.
20ಅವನು ಹೆಬ್ರೋನಿಗೆ ಬಂದಾಗ ದಾವೀದನು ಅವನಿಗೂ ಅವನ ಸಂಗಡ ಬಂದಿದ್ದ ಇಪ್ಪತ್ತು ಜನರಿಗೂ ಔತಣ ಮಾಡಿಸಿದನು.
21ಅಬ್ನೇರನು ದಾವೀದನಿಗೆ, “ನಾನು ಹೊರಟುಹೋಗಿ ಇಸ್ರಾಯೇಲರನ್ನೆಲ್ಲಾ ಕೂಡಿಸಿ, ನನ್ನ ಒಡೆಯನಾದ ಅರಸನ ಬಳಿಗೆ ಕರೆದುಕೊಂಡು ಬರುವೆನು. ಅವರು ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳುವರು. ನೀನು ನಿನ್ನ ಅಪೇಕ್ಷೆಯಂತೆ ಎಲ್ಲರ ಮೇಲೆ ದೊರೆತನಮಾಡಬಹುದು” ಎಂದು ಹೇಳಲು ದಾವೀದನು ಅವನನ್ನು ಸಮಾಧಾನದಿಂದ ಕಳುಹಿಸಿಕೊಟ್ಟನು.
22ಸುಲಿಗೆ ಮಾಡುವುದಕ್ಕಾಗಿ ಹೋಗಿದ್ದ ದಾವೀದನ ಭಟರು ಯೋವಾಬನೂ ದೊಡ್ಡ ಕೊಳ್ಳೆಯೊಡನೆ ಅಷ್ಟರಲ್ಲಿ ಹಿಂತಿರುಗಿ ಬಂದರು. ಅವನು ಹೆಬ್ರೋನಿಗೆ ಬಂದಾಗ ಅಬ್ನೇರನು ದಾವೀದನ ಹತ್ತಿರ ಇರಲಿಲ್ಲ. ದಾವೀದನು ಅವನನ್ನು ಸುರಕ್ಷಿತವಾಗಿ ಕಳುಹಿಸಿಬಿಟ್ಟಿದ್ದನು.
23ಸೈನ್ಯಸಹಿತವಾಗಿ ಹಿಂದಿರುಗಿ ಬಂದ ಯೋವಾಬನು ನೇರನ ಮಗನಾದ ಅಬ್ನೇರನು ಬಂದಿದ್ದನೆಂದೂ, ಅರಸನು ಅವನನ್ನು ಸುರಕ್ಷಿತವಾಗಿ ಕಳುಹಿಸಿದನೆಂದೂ ತಿಳಿದು, ಅರಸನ ಬಳಿಗೆ ಹೋಗಿ,
24“ನೀನು ಮಾಡಿದ್ದೇನು? ಅಬ್ನೇರನು ನಿನ್ನ ಬಳಿಗೆ ಬಂದಿದ್ದನಂತೆ. ನೀನು ಅವನನ್ನು ಸುರಕ್ಷಿತವಾಗಿ ಕಳುಹಿಸಿಬಿಟ್ಟಿದ್ದೇಕೆ?
25ನೇರನ ಮಗನಾದ ಅಬ್ನೇರನ ಸಂಗತಿ ನಿನಗೆ ಗೊತ್ತಿಲ್ಲವೋ? ಅವನು ನಿನ್ನನ್ನು ವಂಚಿಸುವುದಕ್ಕೂ ನಿನ್ನ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವುದಕ್ಕೂ ನೀನು ಏನೇನು ಮಾಡುತ್ತಿರುತ್ತೀ ಎಂಬುದನ್ನು ಕಂಡುಹಿಡಿಯುವುದಕ್ಕೂ ಬಂದಿದ್ದನಷ್ಟೇ” ಎಂದು ಹೇಳಿ,
26ಯೋವಾಬನು ದಾವೀದನನ್ನು ಬಿಟ್ಟು, ಹೊರಗೆ ಹೋಗಿ, ಅಬ್ನೇರನನ್ನು ಕರೆತರುವಂತೆ ದೂತರನ್ನು ಕಳುಹಿಸಿದನು. ಇವರು ಹೋಗಿ ಸಿರಾ ಬಾವಿಯ ಬಳಿಯಿಂದ ಅವನನ್ನು ಕರೆದುಕೊಂಡು ಬಂದರು. ಇದು ದಾವೀದನಿಗೆ ಗೊತ್ತಿರಲಿಲ್ಲ.
27ಅಬ್ನೇರನು ಹೆಬ್ರೋನಿಗೆ ಬಂದಾಗ ಯೋವಾಬನು ಅವನನ್ನು ರಹಸ್ಯ ಸಂಭಾಷಣೆಗೋ ಎಂಬಂತೆ ಊರಬಾಗಿಲಿನೊಳಗೆ ಕರೆದುಕೊಂಡು ಹೋಗಿ ತನ್ನ ತಮ್ಮನಾದ ಅಸಾಹೇಲನನ್ನು ಕೊಂದದ್ದಕ್ಕೆ ಪ್ರತಿಯಾಗಿ ಅವನನ್ನು ಹೊಟ್ಟೆಯಲ್ಲಿ ತಿವಿದು ಕೊಂದನು.
28ಸ್ವಲ್ಪ ಹೊತ್ತಾದ ಮೇಲೆ ಈ ವರ್ತಮಾನವು ದಾವೀದನಿಗೆ ಮುಟ್ಟಿತು. ಆಗ ಅವನು, “ನೇರನ ಮಗನಾದ ಅಬ್ನೇರನ ರಕ್ತಾಪರಾಧಕ್ಕೆ ನಾನೂ, ನನ್ನ ರಾಜ್ಯವೂ ಯೆಹೋವನ ಮುಂದೆ ಸದಾ ನಿರ್ದೋಷಿಗಳು.
29ಈ ಅಪರಾಧವು ಯೋವಾಬನ ಮೇಲೆಯೂ ಅವನ ಸಂತಾನದವರ ಮೇಲೆಯೂ ಇರಲಿ. ಅವನ ಮನೆಯಲ್ಲಿ ಮೇಹಸ್ರಾವವುಳ್ಳವರೂ (ರಕ್ತ, ಕೀವುಸ್ರವಿಸುವ ಚರ್ಮ ರೋಗ), ಕುಷ್ಠರೋಗಿಗಳೂ, ಕುಂಟರೂ, ಕತ್ತಿಯಿಂದ ಹತರಾಗುವವರೂ, ಭಿಕ್ಷೇ ಬೇಡುವವರು ಇದ್ದೇ ಇರಲಿ” ಅಂದನು.
30ಅಬ್ನೇರನು ಗಿಬ್ಯೋನಿನ ಸಮೀಪದಲ್ಲಾದ ಯುದ್ಧದಲ್ಲಿ ಯೋವಾಬ ಅಬೀಷೈಯರ ತಮ್ಮನಾದ ಅಸಾಹೇಲನನ್ನು ಸಾಯಿಸಿದ್ದರಿಂದ ಅವರು ಇವನನ್ನು ಕೊಂದು ಹಾಕಿದರು.
31ಅರಸನಾದ ದಾವೀದನು ಯೋವಾಬನಿಗೂ ಅವನ ಸಂಗಡ ಇದ್ದ ಜನರಿಗೂ, “ನಿಮ್ಮ ಬಟ್ಟೆಗಳನ್ನು ಹರಿದುಕೊಂಡು, ಗೋಣಿತಟ್ಟುಗಳನ್ನು ಕಟ್ಟಿಕೊಂಡು, ಗೋಳಾಡುತ್ತಾ ಅಬ್ನೇರನ ಶವದ ಮುಂದೆ ನಡೆಯಿರಿ” ಎಂದು ಆಜ್ಞಾಪಿಸಿ ತಾನು ಶವಯಾತ್ರೆ ಹಿಂದೆ ಹೋದನು.
32ಅಬ್ನೇರನ ಶವವನ್ನು ಹೆಬ್ರೋನಿನಲ್ಲಿ ಸಮಾಧಿಮಾಡಿದರು. ಅರಸನು ಅವನ ಸಮಾಧಿಯ ಹತ್ತಿರ ನಿಂತು ಗಟ್ಟಿಯಾಗಿ ಅತ್ತನು. ಜನರೆಲ್ಲರೂ ಅತ್ತರು.
33ದಾವೀದನು ಅಬ್ನೇರನನ್ನು ಕುರಿತು, “ಅಬ್ನೇರನೇ ನಿನಗೆ ಮೂರ್ಖರಿಗಾಗುವಂತೆ ದುರ್ಮರಣವಾಯಿತೋ?
34ನಿನ್ನ ಕೈಗಳು ಕಟ್ಟಲ್ಪಡಲಿಲ್ಲ. ನಿನ್ನ ಕಾಲುಗಳಿಗೆ ಬೇಡಿಗಳು ಹಾಕಿರಲಿಲ್ಲ. ನೀನು ದುಷ್ಟರಿಂದ ಹತನಾದಂತೆ ಹತನಾದಿ” ಎಂದು ಶೋಕಗೀತೆಯನ್ನು ಹಾಡಲು ಜನರು ತಿರುಗಿ ಅತ್ತರು.
35ಸೂರ್ಯಸ್ತಮಾನಕ್ಕೆ ಮೊದಲೇ ಜನರೆಲ್ಲರೂ ದಾವೀದನ ಬಳಿಗೆ ಬಂದು ಅವನನ್ನು ಊಟಕ್ಕೆ ಎಬ್ಬಿಸಬೇಕೆಂದು ಪ್ರಯತ್ನಿಸಿದರು. ಆದರೆ ಅವನು, “ಸೂರ್ಯನು ಮುಣುಗುವ ಮೊದಲು ನಾನು ರೊಟ್ಟಿಯನ್ನಾಗಲಿ, ಬೇರೆ ಯಾವುದನ್ನಾಗಲಿ ಬಾಯಲ್ಲಿ ಹಾಕಿದರೆ ದೇವರು ನನಗೆ ಬೇಕಾದದ್ದನ್ನು ಮಾಡಲಿ” ಎಂದು ಆಣೆಯಿಟ್ಟು ಹೇಳಿದನು.
36ಜನರು ಇದನ್ನು ಕಂಡು ಮೆಚ್ಚಿದರು. ಅರಸನು ಮಾಡಿದ್ದೆಲ್ಲವೂ ಅವರಿಗೆ ಒಪ್ಪಿಗೆಯಾಯಿತು.

37ನೇರನ ಮಗನಾದ ಅಬ್ನೇರನ ಕೊಲೆಯಲ್ಲಿ ಅರಸನು ಕೈಹಾಕಲಿಲ್ಲವೆಂಬುದು ಅವನ ಎಲ್ಲಾ ಜನರಿಗೂ ಇಸ್ರಾಯೇಲರಿಗೂ ಅದೇ ದಿನ ಗೊತ್ತಾಯಿತು.
38ಅರಸನು ತನ್ನ ಸೇವಕರಿಗೆ, “ಈ ದಿನ ಇಸ್ರಾಯೇಲರಲ್ಲಿ ಹತವಾದವನು, ಪ್ರಭುವೂ, ಮಹಾಪುರುಷನೂ ಆಗಿದ್ದಾನೆಂಬುದು ನಿಮಗೆ ಗೊತ್ತಿದೆಯಲ್ಲಾ.
39ನಾನು ರಾಜ್ಯಾಭಿಷೇಕ ಹೊಂದಿದವನಾಗಿದ್ದರೂ ಈಗ ಏನೂ ಮಾಡಲಾರದವನಾಗಿದ್ದೇನೆ. ಚೆರೂಯಳ ಮಕ್ಕಳಾದ ಇವರು ನನ್ನ ಹತೋಟಿಗೆ ಬಾರದವರು ಯೆಹೋವನೇ ಕೆಡುಕರಿಗೆ ಮುಯ್ಯಿ ತೀರಿಸಲಿ” ಎಂದು ಹೇಳಿದನು.