1ದಾವೀದನ ಪದ್ಯ. ಯಾರ ದ್ರೋಹವು ಪರಿಹಾರವಾಗಿದೆಯೋ, ಯಾರ ಪಾಪವು ಕ್ಷಮಿಸಲ್ಪಟ್ಟಿದೆಯೋ ಅವನೇ ಧನ್ಯನು.
2ಯೆಹೋವನು ಯಾರ ಲೆಕ್ಕಕ್ಕೆ ಅಪರಾಧವನ್ನು ಎಣಿಸುವುದಿಲ್ಲವೋ? ಯಾರ ಹೃದಯದಲ್ಲಿ ಕಪಟವಿರುವುದಿಲ್ಲವೋ ಅವನು ಧನ್ಯನು.
3ನಾನು ನನ್ನ ಪಾಪವನ್ನು ಅರಿಕೆಮಾಡದೆ ಇದ್ದಾಗ, ದಿನವೆಲ್ಲಾ ನರಳುವುದರಿಂದ ನನ್ನ ಎಲುಬುಗಳು ಸವೆದುಹೋಗುತ್ತಿದ್ದವು.
4ಹಗಲಿರುಳು ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿತ್ತು; ನನ್ನ ಶರೀರದ ಸಾರವೆಲ್ಲಾ ಬೇಸಿಗೆಯ ನೀರಿನಂತೆ ಬತ್ತಿಹೋಯಿತು. ಸೆಲಾ
5ಹೀಗಿರುವಲ್ಲಿ ಯೆಹೋವನ ಸನ್ನಿಧಿಯಲ್ಲಿ ನನ್ನ ದ್ರೋಹವನ್ನು ಒಪ್ಪಿಕೊಳ್ಳುವೆನು ಅಂದುಕೊಂಡು ನನ್ನ ಪಾಪವನ್ನು ಮರೆಮಾಡದೆ ನಿನಗೆ ನನ್ನ ದೋಷವನ್ನು ತಿಳಿಸಿದೆನು. ನೀನು ನನ್ನ ಪಾಪಗಳ ಅಪರಾಧವನ್ನು ಪರಿಹರಿಸಿಬಿಟ್ಟಿ. ಸೆಲಾ
6ಆದುದರಿಂದ ಭಕ್ತರೆಲ್ಲರು ಅಗತ್ಯಕಾಲದಲ್ಲಿ ನಿನ್ನನ್ನು ಪ್ರಾರ್ಥಿಸಲಿ; ಆಗ ಮಹಾಪ್ರವಾಹವು ಅಂಥವರನ್ನು ಮುಟ್ಟುವುದೇ ಇಲ್ಲ.
7ನೀನೇ ನನಗೆ ಮರೆಯು; ನಿರಪಾಯವಾಗಿ ನನ್ನನ್ನು ಕಾಯುವಿ; ವಿಮೋಚನಧ್ವನಿಯಿಂದ ನನ್ನನ್ನು ಆವರಿಸಿಕೊಳ್ಳುತ್ತೀ. ಸೆಲಾ
8ಯೆಹೋವನು, “ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆ ಹೇಳುವೆನು” ಎಂದು ಅನ್ನುತ್ತಾನಲ್ಲಾ.