Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಲೂಕ - ಲೂಕ 9

ಲೂಕ 9:16-52

Help us?
Click on verse(s) to share them!
16ಆ ಮೇಲೆ ಯೇಸುವು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ಅವುಗಳನ್ನು ಆಶೀರ್ವದಿಸಿ, ಮುರಿದು ಶಿಷ್ಯರ ಕೈಗೆ ಕೊಟ್ಟು, ಇದನ್ನು ಜನರ ಗುಂಪಿಗೆ ಹಂಚಿರಿ ಅಂದನು.
17ಅವರೆಲ್ಲರು ಊಟಮಾಡಿ ತೃಪ್ತರಾದರು; ನಂತರ ಉಳಿದ ತುಂಡುಗಳನ್ನು ಕೂಡಿಸಲಾಗಿ ಅವು ಹನ್ನೆರಡು ಪುಟ್ಟಿ ಆದವು.
18ಒಂದು ದಿನ ಯೇಸುವು ಏಕಾಂತವಾಗಿ ಪ್ರಾರ್ಥನೆಮಾಡುತ್ತಿರುವಾಗ ಆತನ ಶಿಷ್ಯರು ಆತನ ಸಂಗಡ ಇದ್ದರು. ಅನಂತರ ಆತನು ಅವರಿಗೆ, “ಜನರು ನನ್ನನ್ನು ಕುರಿತು ಏನು ಹೇಳುತ್ತಾರೆ?” ಎಂದು ಶಿಷ್ಯರನ್ನು ಕೇಳಲು,
19ಅವರು, “ನಿನ್ನನ್ನು ಸ್ನಾನಿಕನಾದ ಯೋಹಾನನು ಎಂದೂ, ಕೆಲವರು ಎಲೀಯನು ಎಂದೂ, ಇನ್ನು ಕೆಲವರು ಪೂರ್ವದ ಪ್ರವಾದಿಗಳಲ್ಲಿ ಯಾರೋ ಒಬ್ಬನು ಜೀವದಿಂದ ಎದ್ದಿದ್ದಾನೆ ಎಂದು ಅನ್ನುತ್ತಿದ್ದಾರೆ” ಎಂದು ಹೇಳಿದರು.
20ಯೇಸು ಅವರನ್ನು, “ಆದರೆ ನೀವು ನನ್ನನ್ನು ಯಾರು ಅನ್ನುತ್ತೀರಿ?” ಎಂದು ಕೇಳಲಾಗಿ ಪೇತ್ರನು, “ನೀನು ದೇವರಿಂದ ಬರಬೇಕಾಗಿರುವ ಕ್ರಿಸ್ತನು” ಎಂದು ಉತ್ತರ ಕೊಟ್ಟನು.
21ಆಗ ಯೇಸುವು, ಇದನ್ನು ಯಾರಿಗೂ ಹೇಳಬೇಡಿರಿ ಎಂದು ಬಹು ಖಂಡಿತವಾಗಿ ಅವರಿಗೆ ಅಪ್ಪಣೆ ಕೊಟ್ಟನು.
22ಯೇಸು ಅವರಿಗೆ, “ಮನುಷ್ಯಕುಮಾರನು ಬಹು ಕಷ್ಟಗಳನ್ನನುಭವಿಸಿ, ಹಿರಿಯರಿಂದಲೂ ಮುಖ್ಯಯಾಜಕರಿಂದಲೂ ಶಾಸ್ತ್ರಿಗಳಿಂದಲೂ ನಿರಾಕರಿಸಲ್ಪಟ್ಟು ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಜೀವಿತನಾಗಿ ಎಬ್ಬಿಸಲ್ಪಡಬೇಕಾಗಿದೆ” ಎಂದು ಹೇಳಿದನು.
23ಇದಲ್ಲದೆ ಆತನು ಎಲ್ಲರಿಗೂ ಹೇಳಿದ್ದೇನಂದರೆ, “ಯಾವನಿಗಾದರೂ ನನ್ನ ಹಿಂದೆ ಬರುವುದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ತಾನು ನಿರಾಕರಿಸಿ ಪ್ರತಿದಿನವು ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.
24ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು, ಆದರೆ ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಉಳಿಸಿಕೊಳ್ಳುವನು.
25ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ತನ್ನನ್ನೇ ತಾನು ಹಾಳುಮಾಡಿಕೊಂಡರೆ ಅಥವಾ ನಷ್ಟಪಡಿಸಿಕೊಂಡರೆ ಅವನಿಗೆ ಪ್ರಯೋಜನವೇನು?
26ಯಾವನು ನನಗೂ ನನ್ನ ಮಾತುಗಳಿಗೂ ನಾಚಿಕೊಳ್ಳುತ್ತಾನೋ, ಅವನಿಗೆ ಮನುಷ್ಯಕುಮಾರನು ತನಗೂ ತನ್ನ ತಂದೆಗೂ ಪರಿಶುದ್ಧ ದೂತರಿಗೂ ಇರುವ ಮಹಾಪ್ರಭಾವದೊಡನೆ ಬರುವಾಗ ಅವನ ಕುರಿತು ನಾಚಿಕೊಳ್ಳುವನು.
27ನಿಮಗೆ ಸತ್ಯವಾಗಿ ಹೇಳುತ್ತೇನೆ, ಇಲ್ಲಿ ನಿಂತಿರುವವರೊಳಗೆ ಕೆಲವರು ದೇವರ ರಾಜ್ಯವನ್ನು ನೋಡುವ ತನಕ ಮರಣಹೊಂದುವುದಿಲ್ಲ” ಎಂದು ಹೇಳಿದನು.
28ಯೇಸು ಈ ಮಾತುಗಳನ್ನು ಹೇಳಿ ಸುಮಾರು ಎಂಟು ದಿನಗಳಾದ ಮೇಲೆ ಪೇತ್ರ ಯೋಹಾನ ಯಾಕೋಬರನ್ನು ಕರೆದುಕೊಂಡು ಪ್ರಾರ್ಥನೆಮಾಡುವುದಕ್ಕೆ ಬೆಟ್ಟವನ್ನು ಹತ್ತಿದನು.
29ಆತನು ಪ್ರಾರ್ಥನೆಮಾಡುತ್ತಿರಲಾಗಿ ಆತನ ಮುಖಭಾವವು ಬದಲಾಯಿತು. ಆತನ ಉಡುಪು ಬೆಳ್ಳಗಾಗಿ ಮಿಂಚುತ್ತಾ ಬಂದಿತು.
30ಇದಲ್ಲದೆ ಇಬ್ಬರು ಪುರುಷರು ಆತನ ಸಂಗಡ ಮಾತನಾಡುತ್ತಿದ್ದರು. ಅವರು ಯಾರೆಂದರೆ ಮೋಶೆಯೂ ಎಲೀಯನೂ.
31ಅವರು ವೈಭವದೊಡನೆ ಕಾಣಿಸಿಕೊಂಡು ಯೆರೂಸಲೇಮಿನಲ್ಲಿ ಆತನು ಹೊಂದಬೇಕಾಗಿದ್ದ ಮರಣದ ವಿಷಯವಾಗಿ ಮಾತನಾಡುತ್ತಿದ್ದರು.
32ಇಷ್ಟರಲ್ಲಿ ಪೇತ್ರನಿಗೂ ಅವನ ಸಂಗಡ ಇದ್ದವರಿಗೂ ನಿದ್ರೆಯಿಂದ ಮೈಭಾರವಾಗಿತ್ತು. ಆದರೆ ಎಚ್ಚರವಾದ ಮೇಲೆ ಅವರು ಆತನ ಮಹಿಮೆಯನ್ನೂ ಆತನ ಸಂಗಡ ನಿಂತಿದ್ದ ಆ ಇಬ್ಬರು ಪುರುಷರನ್ನೂ ಕಂಡರು.
33ಅವರು ಯೇಸುವನ್ನು ಬಿಟ್ಟುಹೋಗುತ್ತಿರುವಾಗ ಪೇತ್ರನು ಯೇಸುವಿಗೆ, “ಗುರುವೇ ನಾವು ಇಲ್ಲೇ ಇರುವುದು ಒಳ್ಳೆಯದು, ಮೂರು ಗುಡಾರಗಳನ್ನು ಕಟ್ಟುವೆವು; ನಿನಗೊಂದು ಎಲೀಯನಿಗೊಂದು ಹಾಗೂ ಮೋಶೆಗೊಂದು” ಎಂದು ಹೇಳಿದನು. ತಾನು ಏನು ಹೇಳುತ್ತಿದ್ದೇನೆಂದು ತನಗೇ ಗೊತ್ತಾಗಲಿಲ್ಲ.
34ಅವನು ಇದನ್ನು ಹೇಳುತ್ತಿರುವಲ್ಲಿ ಮೋಡವು ಬಂದು ಅವರ ಮೇಲೆ ಕವಿಯಿತು. ಮೋಡವು ಅವರನ್ನು ಆವರಿಸಿಕೊಂಡಾಗ ಅವರು ಹೆದರಿದರು.
35ಆಗ ಆ ಮೋಡದೊಳಗಿಂದ, “ಈತನು ನನ್ನ ಮಗನು. ನಾನು ಆರಿಸಿಕೊಂಡವನು, ಈತನ ಮಾತನ್ನು ಕೇಳಿರಿ” ಎಂಬ ವಾಣಿ ಆಯಿತು.
36ಆ ವಾಣಿ ಆದ ಮೇಲೆ ಯೇಸುವನ್ನು ಮಾತ್ರ ಕಂಡರು. ತಾವು ಕಂಡ ಈ ಸಂಗತಿಗಳಲ್ಲಿ ಒಂದನ್ನಾದರೂ ಆ ದಿನಗಳಲ್ಲಿ ಯಾರಿಗೂ ತಿಳಿಸದೆ ಸುಮ್ಮನಿದ್ದರು.
37ಮರುದಿನ ಅವರು ಬೆಟ್ಟದಿಂದ ಇಳಿದು ಬಂದಾಗ ಜನರ ದೊಡ್ಡ ಗುಂಪೊಂದು ಆತನನ್ನು ಎದುರುಗೊಂಡಿತು.
38ಆಗ ಆ ಗುಂಪಿನಲ್ಲಿದ್ದ ಒಬ್ಬನು, “ಬೋಧಕನೇ, ನನ್ನ ಮಗನನ್ನು ಕಟಾಕ್ಷಿಸು ಎಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. ನನಗೆ ಇವನೊಬ್ಬನೇ ಮಗನು.
39ಇವನನ್ನು ದೆವ್ವಹಿಡಿಯುತ್ತದೆ, ಹಿಡಿಯುತ್ತಲೇ ಕೂಗಿಕೊಳ್ಳುತ್ತಾನೆ. ಅದು ಬಾಯಲ್ಲಿ ನೊರೆ ಬರುವಷ್ಟು ಇವನನ್ನು ಒದ್ದಾಡಿಸುತ್ತದೆ ಮತ್ತು ಬಹು ಕಷ್ಟಕೊಟ್ಟು ತೊಂದರೆಪಡಿಸಿದ ಹೊರತು ಬಿಟ್ಟುಬಿಡುವುದಿಲ್ಲ.
40ಅದನ್ನು ಬಿಡಿಸಬೇಕೆಂದು ನಿನ್ನ ಶಿಷ್ಯರನ್ನು ಬೇಡಿಕೊಂಡೆನು. ಆದರೆ ಅವರಿಂದ ಆಗದೆಹೋಯಿತು” ಎಂದು ಹೇಳಿದನು.
41ಅದಕ್ಕೆ ಯೇಸು, “ಎಲಾ ಅಪನಂಬಿಕೆಯುಳ್ಳಂಥ ಮೂರ್ಖಸಂತಾನವೇ, ನಾನು ಇನ್ನೆಷ್ಟು ದಿನ ನಿಮ್ಮ ಸಂಗಡ ಇದ್ದು ನಿಮ್ಮನ್ನು ಸಹಿಸಿಕೊಳ್ಳಲಿ?” ಎಂದು ಹೇಳಿದನು. ಮತ್ತು ಆ ಮನುಷ್ಯನಿಗೆ “ನಿನ್ನ ಮಗನನ್ನು ಇಲ್ಲಿಗೆ ಕರೆದುಕೊಂಡು ಬಾ” ಅಂದನು.
42ಆ ಹುಡುಗನು ಇನ್ನೂ ಬರುತ್ತಿರುವಾಗಲೇ ಆ ದೆವ್ವವು ಅವನನ್ನು ನೆಲಕ್ಕೆ ಅಪ್ಪಳಿಸಿ ಬಹಳವಾಗಿ ಒದ್ದಾಡಿಸಿತು. ಆದರೆ ಯೇಸು ಆ ದೆವ್ವವನ್ನು ಗದರಿಸಿ ಆ ಹುಡುಗನಿಗೆ ವಾಸಿಮಾಡಿ ಅವನ ತಂದೆಗೆ ಒಪ್ಪಿಸಿದನು.
43ಅದನ್ನು ನೋಡಿ ಎಲ್ಲರು ದೇವರ ಮಹತ್ಕಾರ್ಯಕ್ಕೆ ಬೆರಗಾದರು. ಯೇಸುಮಾಡಿದ ಎಲ್ಲಾ ಮಹತ್ಕಾರ್ಯಗಳಿಗೆ ಎಲ್ಲರೂ ಆಶ್ಚರ್ಯಪಡುತ್ತಿರಲಾಗಿ, ಆತನು ತನ್ನ ಶಿಷ್ಯರಿಗೆ,
44“ನೀವಂತೂ ಈ ಮಾತುಗಳನ್ನು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಿರಿ, ಏಕೆಂದರೆ ಮನುಷ್ಯಕುಮಾರನು ಮನುಷ್ಯರ ಕೈಗೆ ಒಪ್ಪಿಸಲ್ಪಡುವನು” ಎಂದು ಹೇಳಿದನು.
45ಅವರು ಈ ಮಾತನ್ನು ಗ್ರಹಿಸಲಿಲ್ಲ. ಅದು ಅವರಿಗೆ ಮರೆಯಾಗಿದ್ದುದರಿಂದ ಅದರ ಅರ್ಥವನ್ನು ಅವರು ತಿಳಿಯದೆ ಹೋದರು. ಆ ಮಾತಿನ ವಿಷಯದಲ್ಲಿ ಅವರು ಆತನನ್ನು ಕೇಳುವುದಕ್ಕೆ ಅಂಜಿದರು.
46ತರುವಾಯ ಶಿಷ್ಯರೊಳಗೆ, ತಮ್ಮಲ್ಲಿ ಯಾವನು ಹೆಚ್ಚಿನವನು ಎಂಬ ವಿಚಾರಹುಟ್ಟಿತು.
47ಯೇಸು ಅವರ ಮನಸ್ಸಿನ ವಿಚಾರವನ್ನು ತಿಳಿದವನಾಗಿ, ಒಂದು ಚಿಕ್ಕಮಗುವನ್ನು ತನ್ನ ಪಕ್ಕದಲ್ಲಿ ನಿಲ್ಲಿಸಿ,
48ಅವರಿಗೆ, “ಯಾವನಾದರೂ ನನ್ನ ಹೆಸರಿನಲ್ಲಿ ಈ ಚಿಕ್ಕ ಮಗುವನ್ನು ಸೇರಿಸಿಕೊಂಡರೆ ನನ್ನನ್ನು ಸೇರಿಸಿಕೊಂಡ ಹಾಗಾಯಿತು ಮತ್ತು ಯಾವನಾದರೂ ನನ್ನನ್ನು ಸೇರಿಸಿಕೊಂಡರೆ ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸೇರಿಸಿಕೊಂಡ ಹಾಗಾಯಿತು, ಏಕೆಂದರೆ ನಿಮ್ಮೆಲ್ಲರಲ್ಲಿ ಯಾವನು ಚಿಕ್ಕವನೋ ಅವನೇ ದೊಡ್ಡವನು” ಎಂದು ಹೇಳಿದನು.
49ಅದಕ್ಕೆ ಯೋಹಾನನು, “ಗುರುವೇ, ಯಾವನೋ ಒಬ್ಬನು ನಿನ್ನ ಹೆಸರನ್ನು ಹೇಳಿ ದೆವ್ವಬಿಡಿಸುವುದನ್ನು ನಾವು ಕಂಡು ಅವನು ನಮಗೆ ಸೇರಿದವನಲ್ಲವಾದ್ದರಿಂದ ಅವನಿಗೆ ಅಡ್ಡಿಮಾಡಿದೆವು” ಅನ್ನಲು,
50ಯೇಸು ಅವನಿಗೆ, “ಅಡ್ಡಿಮಾಡಬೇಡಿರಿ; ನಿಮಗೆ ವಿರುದ್ಧವಲ್ಲದವನು ನಿಮ್ಮ ಪಕ್ಷದವನೇ” ಎಂದು ಹೇಳಿದನು.
51ಯೇಸು ತಾನು ಪರಲೋಕಕ್ಕೆ ಏರಿಹೋಗುವ ದಿನಗಳು ಸಮೀಪಿಸುತ್ತಿರುವಾಗ ಯೆರೂಸಲೇಮಿಗೆ ಹೋಗುವುದಕ್ಕೆ ಮನಸ್ಸನ್ನು ದೃಢಮಾಡಿಕೊಂಡನು.
52ತನ್ನ ಮುಂದಾಗಿ ದೂತರನ್ನು ಕಳುಹಿಸಿದನು. ಇವರು ಹೊರಟು ಆತನಿಗೆ ಬೇಕಾದದ್ದನ್ನು ಸಿದ್ಧಮಾಡುವುದಕ್ಕಾಗಿ ಸಮಾರ್ಯದವರ ಒಂದು ಹಳ್ಳಿಗೆ ಬಂದರು.

Read ಲೂಕ 9ಲೂಕ 9
Compare ಲೂಕ 9:16-52ಲೂಕ 9:16-52