Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಮತ್ತಾ - ಮತ್ತಾ 13

ಮತ್ತಾ 13:24-58

Help us?
Click on verse(s) to share them!
24ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕ ರಾಜ್ಯವು ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ.
25ಆದರೆ ಜನರು ನಿದ್ರೆ ಮಾಡುವ ಸಮಯದಲ್ಲಿ ಅವನ ವೈರಿಯು ಬಂದು ಗೋದಿಯ ನಡುವೆ ಕಳೆಯನ್ನು ಬಿತ್ತಿ ಹೋದನು.
26ಗೋದಿಯು ಬೆಳೆದು ಫಲ ಬಿಟ್ಟಾಗ ಕಳೆಯು ಸಹ ಕಾಣ ಬಂದಿತು.
27ಆಗ ಯಜಮಾನನ ಆಳುಗಳು ಅವನ ಬಳಿಗೆ ಬಂದು, ‘ಅಯ್ಯಾ ನೀನು ನಿನ್ನ ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದ್ದಿಯಲ್ಲಾ ಕಳೆ ಎಲ್ಲಿಂದ ಬಂದಿತು?’ ಎಂದು ಕೇಳಿದರು.
28ಅದಕ್ಕೆ ಅವನು, ‘ಇದು ವೈರಿ ಮಾಡಿದ ಕೆಲಸ’ ಎಂದು ಹೇಳಿದನು, ಅದಕ್ಕೆ ಆಳುಗಳು ಅವನಿಗೆ, ‘ಹಾಗಾದರೆ ನಾವು ಹೋಗಿ ಅದನ್ನು ಕಿತ್ತುಹಾಕುವುದು ನಿಮಗೆ ಇಷ್ಟವಿದೆಯೋ?’ ಎಂದು ಕೇಳಿದರು.
29ಅವರಿಗೆ ಅವನು, ‘ಬೇಡ, ಕಳೆಯನ್ನು ಕೀಳುವಾಗ ಅದರ ಸಂಗಡ ಗೋದಿಯನ್ನೆಲ್ಲಾದರೂ ಕಿತ್ತೀರಿ.
30ಸುಗ್ಗಿ ಕಾಲದ ತನಕ ಎರಡೂ ಒಟ್ಟಿಗೆ ಬೆಳೆಯಲಿ. ಸುಗ್ಗಿ ಕಾಲದಲ್ಲಿ ನಾನು ಕೊಯ್ಯುವವರಿಗೆ, ಮೊದಲು ಕಳೆಯನ್ನು ಕಿತ್ತು ತೆಗೆದು ಹೊರೆಕಟ್ಟಿ ಅದನ್ನು ಸುಡುವುದಕ್ಕೆ ಹಾಕಿ,ಗೋದಿಯನ್ನು ಕೂಡಿಸಿ ನನ್ನ ಕಣಜಕ್ಕೆ ತುಂಬಿರಿ ಎಂದು ಹೇಳುವೆನು’” ಅಂದನು.
31ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕರಾಜ್ಯವು ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ. ಒಬ್ಬ ಮನುಷ್ಯನು ಅದನ್ನು ತೆಗೆದುಕೊಂಡು ಹೋಗಿ ತನ್ನ ಹೊಲದಲ್ಲಿ ಬಿತ್ತಿದನು.
32ಅದು ಎಲ್ಲಾ ಬೀಜಗಳಿಗಿಂತಲೂ ಸಣ್ಣದಾಗಿದೆ. ಆದರೂ ಬೆಳೆದ ಮೇಲೆ ಎಲ್ಲಾ ಸಸ್ಯಗಳಿಗಿಂತ ದೊಡ್ಡದಾಗಿ ಮರವಾಗುತ್ತದೆ. ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ಗೂಡು ಕಟ್ಟಿ ವಾಸ ಮಾಡುತ್ತವೆ” ಎಂದು ಹೇಳಿದನು.
33ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕ ರಾಜ್ಯವು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಸ್ತ್ರೀ ತೆಗೆದುಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಸಿಡಲು ಆ ಹಿಟ್ಟೆಲ್ಲಾ ಹುಳಿಯಾಯಿತು.”
34ಯೇಸು ಈ ಸಂಗತಿಗಳನ್ನೆಲ್ಲಾ ಜನರ ಗುಂಪುಗಳಿಗೆ ಸಾಮ್ಯರೂಪವಾಗಿ ಹೇಳಿದನು. ಸಾಮ್ಯವಿಲ್ಲದೆ ಏನನ್ನೂ ಹೇಳಲಿಲ್ಲ.
35ಹೀಗೆ, “ನಾನು ಬಾಯಿದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು; ಲೋಕದ ಆರಂಭದಿಂದ ಮರೆಯಾಗಿದ್ದವುಗಳನ್ನು ಗೋಚರಪಡಿಸುವೆನು” ಎಂದು ಪ್ರವಾದಿಯ ಮುಖಾಂತರ ನುಡಿದ ಮಾತು ನೆರವೇರಿತು.
36ಅನಂತರ ಯೇಸು ಜನರ ಗುಂಪನ್ನು ಬಿಟ್ಟು ಮನೆಯೊಳಗೆ ಹೋದನು. ಆಗ ಆತನ ಶಿಷ್ಯರು ಆತನ ಬಳಿಗೆ ಬಂದು, ಹೊಲದ ಕಳೆಯ ಸಾಮ್ಯದ ಅರ್ಥವನ್ನು ನಮಗೆ ವಿವರಿಸು ಅಂದರು.
37ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಹೇಳಿದ್ದೇನೆಂದರೆ, “ಒಳ್ಳೆಯ ಬೀಜವನ್ನು ಬಿತ್ತುವವನು ಮನುಷ್ಯಕುಮಾರನು.
38ಹೊಲವೆಂದರೆ ಈ ಲೋಕ. ಒಳ್ಳೆಯ ಬೀಜವೆಂದರೆರಾಜ್ಯದ ಮಕ್ಕಳು.
39ಕಳೆಯೆಂದರೆ ದುಷ್ಟನ ಮಕ್ಕಳು. ಅದನ್ನು ಬಿತ್ತುವ ವೈರಿ ಎಂದರೆ ಸೈತಾನನು. ಸುಗ್ಗಿಯ ಕಾಲವೆಂದರೆ ಯುಗದ ಸಮಾಪ್ತಿ. ಕೊಯ್ಯುವವರು ಅಂದರೆ ದೇವದೂತರು.
40ಹೀಗಿರಲಾಗಿ ಹೇಗೆ ಕಳೆಯನ್ನು ಆರಿಸಿ ತೆಗೆದು ಸುಟ್ಟುಬಿಡುತ್ತಾರೋ ಹಾಗೆಯೇ ಯುಗದ ಸಮಾಪ್ತಿಯಲ್ಲಿ ಸಂಭವಿಸುವುದು.
41ಮನುಷ್ಯಕುಮಾರನು ತನ್ನ ದೂತರನ್ನು ಕಳುಹಿಸುವನು. ಅವರು ಆತನ ರಾಜ್ಯದೊಳಗಿಂದ ಪಾಪಕ್ಕೆ ಕಾರಣವಾದವರೆಲ್ಲರನ್ನೂ ಅಧರ್ಮಿಗಳನ್ನೂ ಕೂಡಿಸಿ ಬೆಂಕಿ ಕೊಂಡದಲ್ಲಿ ಹಾಕುವರು.
42ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು
43ಆಗ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕೇಳುವುದ್ದಕ್ಕೆ ಕಿವಿಗಳುಳ್ಳವನು ಕೇಳಿಸಿಕೊಳ್ಳಲಿ ಅಂದನು.
44“ಪರಲೋಕ ರಾಜ್ಯವು ಹೊಲದಲ್ಲಿ ಮುಚ್ಚಿಟ್ಟ ನಿಧಿಗೆ ಹೋಲಿಕೆಯಾಗಿದೆ. ಒಬ್ಬನು ಅದನ್ನು ಕಂಡುಕೊಂಡು ಮುಚ್ಚಿಟ್ಟು. ತನಗಾದ ಸಂತೋಷದಿಂದ ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಂಡನು.
45ಮತ್ತು ಪರಲೋಕ ರಾಜ್ಯವು ಉತ್ತಮವಾದ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ.
46ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡುಕೊಂಡು ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಬಂದು ಅದನ್ನು ಕೊಂಡುಕೊಂಡನು.
47“ಪರಲೋಕ ರಾಜ್ಯವು ಸಮುದ್ರದಲ್ಲಿ ಎಲ್ಲಾ ತರವಾದ ಮೀನುಗಳನ್ನು ಹಿಡಿಯುವ ಒಂದು ಬಲೆಗೆ ಹೋಲಿಕೆಯಾಗಿದೆ.
48ಅದು ತುಂಬಿದ ಮೇಲೆ ಬೆಸ್ತರು ಅದನ್ನು ದಡಕ್ಕೆ ಎಳೆದುತಂದು ಕುಳಿತುಕೊಂಡು ಒಳ್ಳೆಯ ಮೀನುಗಳನ್ನು ಪುಟ್ಟಿಗಳಲ್ಲಿ ತುಂಬಿಕೊಂಡು ಕೆಟ್ಟ ಮೀನುಗಳನ್ನು ಬಿಸಾಡಿಬಿಡುವರು.
49ಹಾಗೆಯೇ ಯುಗದ ಸಮಾಪ್ತಿಯಲ್ಲಿ ಆಗುವುದು. ದೇವದೂತರು ಹೊರಟು ಬಂದು ನೀತಿವಂತರೊಳಗಿಂದ ಕೆಟ್ಟವರನ್ನು ಬೇರೆ ಮಾಡಿ ಅವರನ್ನು ಬೆಂಕಿಯ ಕೊಂಡದಲ್ಲಿ ಹಾಕುವರು.
50ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.
51“ಈ ಎಲ್ಲಾ ಸಂಗತಿಗಳು ನಿಮಗೆ ಅರ್ಥವಾಯಿತೋ” ಎಂದು ಕೇಳಲು, ಶಿಷ್ಯರು, “ಅರ್ಥವಾಯಿತು” ಅಂದರು.
52ಆಗ ಆತನು ಅವರಿಗೆ, “ಹೀಗಿರಲಾಗಿ ಪರಲೋಕ ರಾಜ್ಯದ ವಿಷಯವಾಗಿ ಉಪದೇಶಹೊಂದಿ ಶಿಕ್ಷಿತನಾದ ಪ್ರತಿಯೊಬ್ಬ ಶಾಸ್ತ್ರೋಪದೇಶಕನು, ತನ್ನ ಬೊಕ್ಕಸದೊಳಗಿನಿಂದ ಹೊಸ ವಸ್ತುಗಳನ್ನೂ, ಹಳೆಯ ವಸ್ತುಗಳನ್ನೂ ಹೊರಗೆ ತೆಗೆಯುವಂಥ ಮನೆ ಯಜಮಾನನಿಗೆ ಹೋಲಿಕೆಯಾಗಿದ್ದಾನೆ” ಎಂದು ಹೇಳಿದನು.
53ಯೇಸು ಈ ಸಾಮ್ಯಗಳನ್ನು ಹೇಳಿ ಮುಗಿಸಿದ ಮೇಲೆ ಅಲ್ಲಿಂದ ಹೊರಟು ಹೋದನು.
54ತರುವಾಯ ಆತನು ತನ್ನ ಸ್ವಂತ ಊರಿಗೆ ಬಂದು ಅವರ ಸಭಾಮಂದಿರದಲ್ಲಿ ಜನರಿಗೆ ಉಪದೇಶಮಾಡುತ್ತಿದ್ದನು. ಅವರು ಅದನ್ನು ಕೇಳಿ ಆಶ್ಚರ್ಯ ಪಟ್ಟು, “ಇವನಿಗೆ ಈ ಜ್ಞಾನವೂ ಈ ಮಹತ್ಕಾರ್ಯಗಳೂ ಎಲ್ಲಿಂದ ಬಂದಿದ್ದಾವು?
55ಇವನು ಆ ಬಡಗಿಯ ಮಗನಲ್ಲವೇ? ಇವನ ತಾಯಿ ಮರಿಯಳೆಂಬುವವಳಲ್ಲವೇ? ಯಾಕೋಬ, ಯೋಸೇಫ, ಸೀಮೋನ, ಯೂದ ಇವರು ಇವನ ತಮ್ಮಂದಿರಲ್ಲವೇ?
56ಇವನ ತಂಗಿಯರೆಲ್ಲರೂ ನಮ್ಮಲ್ಲಿ ಇದ್ದಾರಲ್ಲವೇ? ಹಾಗಾದರೆ ಇವೆಲ್ಲವೂ ಇವನಿಗೆ ಎಲ್ಲಿಂದ ಬಂದಿದ್ದಾವು?” ಎಂದು ಅಂದುಕೊಂಡು ಆತನ ವಿಷಯದಲ್ಲಿ ತಿರಸ್ಕಾರವುಳ್ಳವರಾದರು.
57ಆದರೆ ಯೇಸುವು ಅವರಿಗೆ “ಪ್ರವಾದಿಯು ಬೇರೆ ಎಲ್ಲಿದ್ದರೂ ಅವನಿಗೆ ಗೌರವ ಉಂಟು. ಆದರೆ ಸ್ವದೇಶದಲ್ಲಿಯೂ ಸ್ವಂತ ಮನೆಯಲ್ಲಿಯೂ ಗೌರವ ಇರುವುದಿಲ್ಲ” ಅಂದನು.
58ಅವರ ಅಪನಂಬಿಕೆಯ ನಿಮಿತ್ತ ಆತನು ಅಲ್ಲಿ ಹೆಚ್ಚು ಮಹತ್ಕಾರ್ಯಗಳನ್ನು ಮಾಡಲಿಲ್ಲ.

Read ಮತ್ತಾ 13ಮತ್ತಾ 13
Compare ಮತ್ತಾ 13:24-58ಮತ್ತಾ 13:24-58