Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - 1 ಅರಸು - 1 ಅರಸು 2

1 ಅರಸು 2:4-30

Help us?
Click on verse(s) to share them!
4ಮತ್ತು ಯೆಹೋವನು, ‘ನಿನ್ನ ಸಂತಾನದವರು ನಂಬಿಗಸ್ತರಾಗಿ, ಪೂರ್ಣಮನಸ್ಸಿನಿಂದಲೂ, ಪೂರ್ಣಪ್ರಾಣದಿಂದಲೂ ನನಗೆ ನಡೆದುಕೊಳ್ಳುವುದರಲ್ಲಿ ಜಾಗರೂಕರಾಗಿರುವುದಾದರೆ, ಅವರು ತಪ್ಪದೆ ಇಸ್ರಾಯೇಲರ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು’ ಎಂಬುದಾಗಿ ತಾನು ನನಗೆ ಮಾಡಿದ ವಾಗ್ದಾನವನ್ನು ಸ್ಥಿರಪಡಿಸುವನು,
5ಚೆರೂಯಳ ಮಗನಾದ ಯೋವಾಬನು ನನಗೆ ಮಾಡಿರುವುದನ್ನು ಬಲ್ಲೆಯಲ್ಲಾ ಅವನು ಇಬ್ಬರು ಇಸ್ರಾಯೇಲರ ಸೇನಾಧಿಪತಿಗಳಾದ ನೇರನ ಮಗನಾದ ಅಬ್ನೇರನನ್ನೂ ಮತ್ತು ಯೆತೆರನ ಮಗನಾದ ಅಮಾಸನನ್ನೂ ಕೊಂದುಹಾಕಿದನು. ಯುದ್ಧ ಕಾಲದಲ್ಲಿಯೋ ಎಂಬಂತೆ ಸಮಾಧಾನ ಕಾಲದಲ್ಲಿಯೂ ರಕ್ತಸುರಿಸಿ ಅದನ್ನು ತನ್ನ ನಡುಕಟ್ಟಿಗೂ ಪಾದರಕ್ಷೆಗಳಿಗೂ ಹಚ್ಚಿಕೊಂಡನು.
6ಅವನಿಗೇನು ಮಾಡಬೇಕೆಂಬುದು ಬುದ್ಧಿವಂತನಾದ ನಿನಗೆ ತಿಳಿದಿದೆಯಲ್ಲಾ. ಅವನ ಮುದಿ ತಲೆಯು ಸಮಾಧಿಯನ್ನು ಸಮಾಧಾನದಿಂದ ಸೇರದಂತೆ ಮಾಡು.
7ಆದರೆ ನೀನು ಗಿಲ್ಯಾದ್ಯನಾದ ಬರ್ಜಿಲ್ಲೈಯ ಮಕ್ಕಳಿಗೆ ಉಪಕಾರಮಾಡಬೇಕು. ಅವರು ನಿತ್ಯವೂ ನಿನ್ನ ಪಂಕ್ತಿಯಲ್ಲಿ ಊಟಮಾಡುತ್ತಿರಬೇಕು. ಯಾಕೆಂದರೆ ನಾನು ನಿನ್ನ ಸಹೋದರನಾದ ಅಬ್ಷಾಲೋಮನ ಬಳಿಯಿಂದ ಓಡಿಹೋದಾಗ ಅವರು ನನ್ನನ್ನು ಉಪಚರಿಸಿದರು.
8ಬೆನ್ಯಾಮೀನ್ಯನಾದ ಗೇರನ ಮಗನೂ ಬಹುರೀಮ್ ಊರಿನವನೂ ಆದ ಶಿಮ್ಮೀಯು ನಿನ್ನ ಬಳಿಯಲ್ಲಿರುತ್ತಾನಲ್ಲಾ. ನಾನು ಮಹನಯಿಮಿಗೆ ಹೋದಾಗ ಅವನು ನನ್ನನ್ನು ಬಹು ಕ್ರೂರವಾಗಿ ಶಪಿಸಿದನು. ಅವನು ನನ್ನನ್ನು ಎದುರುಗೊಳ್ಳುವುದಕ್ಕೆ ಯೊರ್ದನಿಗೆ ಬಂದಾಗ ನಾನು ಅವನಿಗೆ, ‘ನಿನ್ನನ್ನು ಕತ್ತಿಯಿಂದ ಕೊಲ್ಲುವುದಿಲ್ಲ’ ಎಂದು ಯೆಹೋವನ ಹೆಸರಿನಲ್ಲಿ ಪ್ರಮಾಣಮಾಡಿದೆನು.
9ನೀನಾದರೋ ಅವನನ್ನು ಶಿಕ್ಷಿಸದೆ ಬಿಡಬೇಡ. ನೀನು ಬುದ್ಧಿವಂತನಲ್ಲವೋ. ಅವನ ಮುದಿತಲೆಯು ರಕ್ತಮಯವಾಗಿ ಸಮಾಧಿ ಸೇರುವಂತೆ ಏನು ಮಾಡಬೇಕೆಂದು ನಿನಗೆ ಗೊತ್ತಿರುತ್ತದೆ” ಎಂದು ಹೇಳಿದನು.
10ಅನಂತರ ದಾವೀದನು ತನ್ನ ಪೂರ್ವಿಕರ ಬಳಿಗೆ ಸೇರಿದನು. ಅವನ ಶವವನ್ನು ದಾವೀದನಗರದಲ್ಲಿ ಸಮಾಧಿಮಾಡಿದರು.
11ದಾವೀದನು ಇಸ್ರಾಯೇಲರನ್ನು ಆಳಿದ್ದು ಒಟ್ಟು ನಲ್ವತ್ತು ವರ್ಷ. ಹೇಗೆಂದರೆ, ಹೆಬ್ರೋನಿನಲ್ಲಿ ಏಳು ವರ್ಷ ಮತ್ತು ಯೆರೂಸಲೇಮಿನಲ್ಲಿ ಮೂವತ್ತಮೂರು ವರ್ಷ ಆಳ್ವಿಕೆ ಮಾಡಿದನು.
12ಸೊಲೊಮೋನನು ತನ್ನ ತಂದೆಯಾದ ದಾವೀದನ ಸಿಂಹಾಸನವನ್ನು ಏರಿದನು. ಅವನ ರಾಜ್ಯವು ಬಹಳವಾಗಿ ಬಲಗೊಂಡಿತು.
13ಹಗ್ಗೀತಳ ಮಗನಾದ ಅದೋನೀಯನು ಸೊಲೊಮೋನನ ತಾಯಿಯಾದ ಬತ್ಷೆಬೆಯ ದರ್ಶನಕ್ಕೆ ಬಂದನು. ಆಕೆಯು ಅವನನ್ನು, “ನೀನು ಸಮಾಧಾನದಿಂದ ಬಂದಿರುವೆಯೋ?” ಎಂದು ಕೇಳಿದಳು. ಅವನು, “ಹೌದು ಸಮಾಧಾನದಿಂದ ಬಂದೆನು” ಎಂದನು.
14ಆಮೇಲೆ ಅವನು, “ನಿನಗೊಂದು ಮಾತು ಹೇಳಬೇಕೆಂದು ಬಂದಿದ್ದೇನೆ” ಎಂದನು. ಅದಕ್ಕೆ ಆಕೆಯು, “ಹೇಳು” ಎಂದಳು.
15ಆಗ ಅವನು, “ಈ ರಾಜ್ಯವು ನನಗೆ ಬರಬೇಕಾಗಿತ್ತು. ನಾನೇ ಅರಸನಾಗುವೆನೆಂದು ಇಸ್ರಾಯೇಲರೆಲ್ಲರೂ ಎದುರುನೋಡುತ್ತಿದ್ದರೆಂಬುದು ನೀನು ಬಲ್ಲೆಯಷ್ಟೇ. ಆದರೆ ಅದು ತಪ್ಪಿ ನನ್ನ ತಮ್ಮನಿಗೆ ಹೋಯಿತು. ಅದು ಯೆಹೋವನಿಂದಲೇ ಅವನಿಗೆ ದೊರಕಿತು. ಅದಿರಲಿ, ಒಂದು ಬಿನ್ನಹವಿದೆ.
16ಅದನ್ನು ತಿರಸ್ಕರಿಸಬೇಡ” ಎನ್ನಲು ಆಕೆಯು, “ಅದೇನು ಹೇಳು” ಎಂದಳು.
17ಆಗ ಅವನು, “ದಯವಿಟ್ಟು ಶೂನೇಮ್ಯಳಾದ ಅಬೀಷಗ್ ಎಂಬಾಕೆಯನ್ನು ನನಗೆ ಹೆಂಡತಿಯನ್ನಾಗಿ ಕೊಡಬೇಕೆಂದು ಅರಸನಾದ ಸೊಲೊಮೋನನಿಗೆ ಹೇಳು. ಅವನು ನಿನ್ನ ಮಾತನ್ನು ತಳ್ಳಿಹಾಕುವುದಿಲ್ಲ” ಎಂದನು.
18ಆಗ ಬತ್ಷೆಬೆಯು, “ಒಳ್ಳೇಯದು, ನಾನು ನಿನಗೋಸ್ಕರ ಅರಸನ ಸನ್ನಿಧಿಯಲ್ಲಿ ಅರಿಕೆಮಾಡುತ್ತೇನೆ” ಎಂದು ಹೇಳಿದಳು.
19ಆಕೆಯು ಅದೋನೀಯನಿಗಾಗಿ ಮಾತನಾಡುವುದಕ್ಕೋಸ್ಕರ ಅರಸನಾದ ಸೊಲೊಮೋನನ ಬಳಿಗೆ ಬರುತ್ತಿರುವಾಗ ಅರಸನು ಎದ್ದುಹೋಗಿ ಆಕೆಯನ್ನು ಎದುರುಗೊಂಡು ನಮಸ್ಕರಿಸಿದನು. ಅನಂತರ ತಾನು ಸಿಂಹಾಸನದ ಮೇಲೆ ಕುಳಿತು, ರಾಜ ಮಾತೆಗೋಸ್ಕರ ಒಂದು ಆಸನವನ್ನು ತರಿಸಲು ಆಕೆಯು ಅವನ ಬಲಗಡೆಯಲ್ಲಿ ಕುಳಿತುಕೊಂಡಳು.
20ಆಗ ಆಕೆಯು, “ಒಂದು ಸಣ್ಣ ಬಿನ್ನಹ ಉಂಟು. ಅದನ್ನು ತಿರಸ್ಕರಿಸಬೇಡ” ಎಂದು ಹೇಳಿದಳು. ಅರಸನು, “ನನ್ನ ತಾಯಿಯೇ ಏನು ಬೇಕು ಕೇಳು, ನಾನು ಆಗದು ಅನ್ನುವುದಿಲ್ಲ” ಎಂದನು.
21ಆಗ ಆಕೆಯು, “ಶೂನೇಮ್ಯಳಾದ ಅಬೀಷಗ್ ಎಂಬಾಕೆಯು ನಿನ್ನ ಅಣ್ಣನಾದ ಅದೋನೀಯನಿಗೆ ಮದುವೆ ಮಾಡಿಕೊಡು” ಎಂದಳು.
22ಆಗ ಅರಸನಾದ ಸೊಲೊಮೋನನು ತನ್ನ ತಾಯಿಗೆ, “ಅದೋನೀಯನಿಗೋಸ್ಕರ ಶೂನೇಮ್ಯಳಾದ ಅಬೀಷಗ್ ಎಂಬಾಕೆಯನ್ನು ಮಾತ್ರ ಕೇಳುವುದೇಕೆ ಅವನಿಗೆ ರಾಜ್ಯವನ್ನೂ ಕೊಡಬೇಕೆಂದು ಕೇಳು. ಅವನು ನನ್ನ ಅಣ್ಣನಲ್ಲವೇ. ಯಾಜಕನಾದ ಎಬ್ಯಾತಾರನೂ ಚೆರೂಯಳ ಮಗನಾದ ಯೋವಾಬನೂ ಅವನ ಪಕ್ಷದವರಾಗಿದ್ದಾರೆ” ಎಂದು ಉತ್ತರಕೊಟ್ಟನು.
23ಇದಲ್ಲದೆ ಅರಸನಾದ ಸೊಲೊಮೋನನು, “ಯೆಹೋವನಾಣೆ, ಅದೋನೀಯನ ಈ ಮಾತಿಗೋಸ್ಕರ ನಾನು ಅವನನ್ನು ಮರಣಕ್ಕೆ ಪಾತ್ರನೆಂದು ಎಣಿಸದಿದ್ದರೆ ದೇವರು ನನಗೆ ಬೇಕಾದದ್ದನ್ನು ಮಾಡಲಿ.
24ನನ್ನ ತಂದೆಯಾದ ದಾವೀದನ ಸಿಂಹಾಸನದ ಮೇಲೆ ನನ್ನನ್ನು ಕುಳ್ಳಿರಿಸಿ, ಬಲಪಡಿಸಿ, ತಾನು ವಾಗ್ದಾನ ಮಾಡಿದಂತೆ ನನಗೆ ಮನೆಯನ್ನು ಕಟ್ಟಿದ ಯೆಹೋವನಾಣೆ, ಅದೋನೀಯನು ಈ ಹೊತ್ತೇ ಸಾಯಬೇಕು” ಎಂದು ಹೇಳಿದನು.
25ಆಮೇಲೆ ಅರಸನು ಯೆಹೋಯಾದಾವನ ಮಗನಾದ ಬೆನಾಯನಿಗೆ ಆಜ್ಞಾಪಿಸಿದ್ದರಿಂದ ಅವನು ಹೋಗಿ ಅದೋನೀಯನನ್ನು ಹೊಡೆದು ಕೊಂದುಹಾಕಿದನು.
26ತರುವಾಯ ಅರಸನು ಯಾಜಕನಾದ ಎಬ್ಯಾತಾರನಿಗೆ, “ನೀನು ಅಣತೋತಿನಲ್ಲಿರುವ ನಿನ್ನ ಮನೆಗೆ ಹೋಗು, ನೀನು ಮರಣಕ್ಕೆ ಪಾತ್ರನು. ಆದರೆ ನೀನು ಕರ್ತನಾದ ಯೆಹೋವನ ಮಂಜೂಷವನ್ನು ಹೊತ್ತುಕೊಂಡು ನನ್ನ ತಂದೆಯಾದ ದಾವೀದನೊಡನೆ ಸಂಚರಿಸುತ್ತಾ ಅವನ ಎಲ್ಲಾ ಕಷ್ಟಗಳಲ್ಲಿ ಪಾಲುಗಾರನಾಗಿದ್ದುದ್ದರಿಂದ ಈ ಹೊತ್ತು ನಿನ್ನನ್ನು ಕೊಲ್ಲಿಸುವುದಿಲ್ಲ” ಎಂದು ಹೇಳಿದನು.
27ಸೊಲೊಮೋನನು ಅವನನ್ನು ಯೆಹೋವನ ಯಾಜಕೋದ್ಯೋಗದಿಂದ ತೆಗೆದುಹಾಕಿದನು. ಹೀಗೆ ಯೆಹೋವನು ಶೀಲೋವಿನಲ್ಲಿದ್ದ ಏಲಿಯ ಮನೆಯನ್ನು ಕುರಿತು ಹೇಳಿದ ಮಾತು ನೆರವೇರಿತು.
28ಈ ವರ್ತಮಾನವು ಯೋವಾಬನಿಗೆ ಮುಟ್ಟಿದ ಕೂಡಲೆ ಅವನು ಯೆಹೋವನ ಗುಡಾರಕ್ಕೆ ಓಡಿಹೋಗಿ ಯಜ್ಞವೇದಿಯ ಕೊಂಬುಗಳನ್ನು ಹಿಡಿದನು. ಅವನು ಅಬ್ಷಾಲೋಮನ ಪಕ್ಷವನ್ನು ಬೆಂಬಲಿಸದಿದ್ದರು ಅದೋನೀಯನ ಪಕ್ಷವನ್ನು ಬೆಂಬಲಿಸಿದ್ದನು.
29ಯೋವಾಬನು ಯೆಹೋವನ ಗುಡಾರಕ್ಕೆ ಓಡಿಹೋಗಿ ಯಜ್ಞವೇದಿಯ ಹತ್ತಿರ ಇದ್ದಾನೆ ಎಂಬ ಸುದ್ದಿಯು ಅರಸನಾದ ಸೊಲೊಮೋನನಿಗೆ ತಲುಪಿದಾಗ ಅವನು ಯೆಹೋಯಾದಾವನ ಮಗನಾದ ಬೆನಾಯನಿಗೆ, “ಹೋಗಿ ಅವನನ್ನು ಕೊಂದು ಹಾಕು” ಎಂದು ಆಜ್ಞಾಪಿಸಿದನು.
30ಬೆನಾಯನು ಯೆಹೋವನ ಗುಡಾರಕ್ಕೆ ಹೋಗಿ ಯೋವಾಬನಿಗೆ, “ಅರಸನು ನಿನಗೆ ಹೊರಗೆ ಬರಬೇಕೆಂದು ಆಜ್ಞಾಪಿಸುತ್ತಾನೆ” ಎಂದು ಹೇಳಲು ಅವನು “ಬರುವುದಿಲ್ಲ, ನಾನು ಇಲ್ಲಿಯೇ ಸಾಯುತ್ತೇನೆ” ಎಂದು ಉತ್ತರಕೊಟ್ಟನು. ಬೆನಾಯನು ಅರಸನ ಬಳಿಗೆ ಹೋಗಿ ಯೋವಾಬನು ಹೇಳಿದ್ದನ್ನು ತಿಳಿಸಿದನು.

Read 1 ಅರಸು 21 ಅರಸು 2
Compare 1 ಅರಸು 2:4-301 ಅರಸು 2:4-30