7ಆದುದರಿಂದ ಜನರು ಮೋಶೆಯ ಬಳಿಗೆ ಬಂದು, “ನಾವು ನಿನಗೂ ಮತ್ತು ಯೆಹೋವನಿಗೂ ವಿರುದ್ಧವಾಗಿ ಮಾತನಾಡಿ ದ್ರೋಹಿಗಳಾದೆವು. ಈ ಸರ್ಪಗಳು ನಮ್ಮ ಬಳಿಯಿಂದ ತೊಲಗಿಹೋಗುವಂತೆ ನೀನು ಯೆಹೋವನಿಗೆ ಪ್ರಾರ್ಥನೆಮಾಡಬೇಕು” ಎಂದು ಬೇಡಿಕೊಂಡರು.
8ಮೋಶೆ ಜನರಿಗೋಸ್ಕರ ಪ್ರಾರ್ಥಿಸಲಾಗಿ ಯೆಹೋವನು ಅವನಿಗೆ, “ನೀನು ತಾಮ್ರದಿಂದ ವಿಷಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಎತ್ತಿ ನಿಲ್ಲಿಸಬೇಕು. ಸರ್ಪಗಳಿಂದ ಗಾಯಪಟ್ಟವರು ಅದನ್ನು ನೋಡಿ ಬದುಕಿಕೊಳ್ಳುವರು” ಎಂದು ಆಜ್ಞಾಪಿಸಿದನು.
9ಆದಕಾರಣ ಮೋಶೆ ತಾಮ್ರದಿಂದ ಸರ್ಪವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಇಟ್ಟನು. ಸರ್ಪದಿಂದ ಗಾಯಪಟ್ಟವರಲ್ಲಿ ಯಾರು ಆ ತಾಮ್ರದ ಸರ್ಪವನ್ನು ಲಕ್ಷ್ಯವಿಟ್ಟು ನೋಡಿದರೋ ಅವರೆಲ್ಲರೂ ಬದುಕಿಕೊಂಡರು.
10ತರುವಾಯ ಇಸ್ರಾಯೇಲರು ಅಲ್ಲಿಂದ ಹೊರಟು ಓಬೋತಿನಲ್ಲಿ ಇಳಿದುಕೊಂಡರು.
11ಓಬೋತಿನಿಂದ ಹೊರಟು ಮೋವಾಬ್ ದೇಶದ ಮೂಡಲ ದಿಕ್ಕಿನ ಅರಣ್ಯದಲ್ಲಿರುವ ಇಯ್ಯೇ ಅಬಾರೀಮಿನಲ್ಲಿ ಇಳಿದುಕೊಂಡರು.
12ಅಲ್ಲಿಂದ ಹೊರಟು ಜೆರೆದ್ ತಗ್ಗಿನಲ್ಲಿ ಇಳಿದುಕೊಂಡರು.
13ಅಲ್ಲಿಂದ ಹೊರಟು ಅರ್ನೋನ್ ನದಿಯ ಆಚೆ ಕಡೆಯಲ್ಲಿ ಇಳಿದುಕೊಂಡರು. ಅರ್ನೋನ್ ನದಿಯು ಅಮೋರಿಯರ ಪ್ರದೇಶದಿಂದಾಚೆ ಇರುವ ಅರಣ್ಯದಲ್ಲಿ ಮೋವಾಬ್ಯರಿಗೂ, ಅಮೋರಿಯರಿಗೂ ನಡುವೆ ಇದ್ದು ಮೋವಾಬ್ಯರ ಗಡಿಯಾಗಿದೆ.
14ಅದಕ್ಕೆ ಅನುಗುಣವಾಗಿ ಯೆಹೋವವಿಜಯ ಎಂಬ ಗ್ರಂಥದಲ್ಲಿ, “ಸೂಫಕ್ಕೆ ಸೇರಿದ ವಾಹೇಬನ್ನೂ, ಮತ್ತು ಅರ್ನೋನ್ ನದಿಗೆ ಕೂಡುವ ಹಳ್ಳಗಳನ್ನೂ,
15ಆರ್ ಪಟ್ಟಣದ ತನಕ ಮೋವಾಬಿನ ಮೇರೆಯಾಗಿರುವ ಕೊರಕಲನ್ನೂ ದಾಟಿದ್ದಾಯಿತು” ಎಂದು ಬರೆದದೆ.
16ಅಲ್ಲಿಂದ ಅವರು ಬೇರ್ ಸ್ಥಳಕ್ಕೆ ಬಂದರು. ಯೆಹೋವನು ಮೋಶೆಗೆ ಹೇಳಿದ ಮಾತು ಇಲ್ಲಿನ ಬಾವಿಯ ವಿಷಯವೇ. ಯೆಹೋವನು ಮೋಶೆಗೆ, “ಜನರನ್ನು ಸೇರಿಸು. ನಾನು ಅವರಿಗೆ ನೀರನ್ನು ಕೊಡುವೆನು” ಅಂದನು.
17ಆಗ ಇಸ್ರಾಯೇಲರು ಈ ಹಾಡನ್ನು ಗಾನಮಾಡಿದರು; “ಬಾವಿಯೇ, ಉಕ್ಕುತ್ತಾ ಬಾ! ಜನರೇ, ಉಲ್ಲಾಸದಿಂದ ಗಾನಮಾಡಿರಿ
18ಇದು ಪ್ರಧಾನರು ಕೋಲುಗಳಿಂದ ತೋಡಿದ ಬಾವಿ, ಇದು ಜನಾಧಿಪತಿಗಳು ಕೋಲುಗಳಿಂದ ಅಗೆದ ಬಾವಿ” ಎಂಬುವುದೇ. ಅವರು ಅರಣ್ಯವನ್ನು ಬಿಟ್ಟು ಮತ್ತಾನಕ್ಕೂ,
19ಮತ್ತಾನದಿಂದ ನಹಲೀಯೇಲಿಗೂ, ನಹಲೀಯೇಲಿನಿಂದ ಬಾಮೋತಿಗೂ ಬಂದರು.
20ಬಾಮೋತಿನಿಂದ ಮೋವಾಬ್ಯರ ಬಯಲಿನಲ್ಲಿರುವ ತಗ್ಗಿನಿಂದ ಪಿಸ್ಗಾ ಎಂಬ ಬೆಟ್ಟದ ತುದಿಗೆ ಬಂದರು. ಅಲ್ಲಿಂದ ಯೆಷೀಮೋನ್ ಮರಳುಗಾಡು ಕಾಣಿಸುತ್ತದೆ.
21ಇಸ್ರಾಯೇಲರು ಅಮೋರಿಯರ ಅರಸನಾದ ಸೀಹೋನನ ಬಳಿಗೆ ದೂತರನ್ನು ಕಳುಹಿಸಿ,