1ಯೆರೂಸಲೇಮಿನಲ್ಲಿ ಅರಸನಾಗಿದ್ದ ದಾವೀದನ ಮಗನಾದ ಪ್ರಸಂಗಿಯ ಮಾತುಗಳು.
2ಪ್ರಸಂಗಿಯು ಹೀಗೆ ಹೇಳುತ್ತಾನೆ. “ವ್ಯರ್ಥವೇ ವ್ಯರ್ಥ, ವ್ಯರ್ಥವೇ ವ್ಯರ್ಥ, ಸಮಸ್ತವೂ ವ್ಯರ್ಥ.
3ಈ ಲೋಕದಲ್ಲಿ ಮನುಷ್ಯನು ಪಡುವ ಎಲ್ಲಾ ಪ್ರಯಾಸದಿಂದ ಅವನಿಗೆ ಲಾಭವೇನು?
4ಒಂದು ಸಂತತಿಯು ಹೋಗುವುದು, ಇನ್ನೊಂದು ಸಂತತಿಯು ಬರುವುದು, ಆದರೆ ಭೂಮಿಯು ಶಾಶ್ವತವಾಗಿ ನಿಲ್ಲುವುದು.
5ಸೂರ್ಯನು ಉದಯಿಸುತ್ತಾನೆ. ಸೂರ್ಯನು ಮುಳುಗುತ್ತಾನೆ. ತಾನು ಉದಯಿಸುವ ಸ್ಥಾನಕ್ಕೆ ಅವಸರವಾಗಿ ಹಿಂತಿರುಗಿ ಹೋಗುತ್ತಾನೆ.
6ಗಾಳಿಯು ದಕ್ಷಿಣದ ಕಡೆಗೆ ಬೀಸುತ್ತದೆ. ಉತ್ತರದ ಕಡೆಗೆ ತಿರುಗುವುದು. ಅದು ಸುತ್ತುತ್ತಾ ಸುತ್ತುತ್ತಾ ಹೋಗಿ, ಗಾಳಿ ಸುತ್ತಳತೆಯ ಪ್ರಕಾರ ಹಿಂದಿರುಗುತ್ತವೆ.
7ನದಿಗಳೆಲ್ಲಾ ಸಮುದ್ರಕ್ಕೆ ಹರಿದು ಹೋಗುತ್ತವೆ. ಆದರೂ ಸಮುದ್ರವು ತುಂಬುವುದಿಲ್ಲ. ನದಿಗಳು ಎಲ್ಲಿಂದ ಬಂದಿವೆಯೋ ಅದೇ ಸ್ಥಳಕ್ಕೆ ಹಿಂತಿರುಗುತ್ತವೆ.
8ಎಲ್ಲಾ ಕಾರ್ಯಗಳು ಪ್ರಯಾಸದಿಂದ ತುಂಬಿದೆ. ಇದನ್ನು ಮನುಷ್ಯನು ವಿವರಿಸಲಾರನು. ನೋಡುವುದರಿಂದ ಕಣ್ಣು ತೃಪ್ತಿಗೊಳ್ಳದು, ಕೇಳುವುದರಿಂದ ಕಿವಿಯು ದಣಿಯದು.
9ಇದ್ದದ್ದೇ ಇರುವುದು, ನಡೆದದ್ದೇ ನಡೆಯುವುದು. ಸೂರ್ಯನ ಕೆಳಗೆ ಹೊಸದಾದದ್ದು ಯಾವುದೂ ಇಲ್ಲ.
10‘ನೋಡು, ಇದು ಹೊಸದು’ ಎಂದು ಯಾವ ವಿಷಯದಲ್ಲಾದರೂ ಹೇಳಬಹುದೋ? ನಮಗಿಂತ ಮೊದಲು ಇದ್ದದ್ದು, ಪುರಾತನ ಕಾಲದಿಂದ ಇದ್ದದ್ದೇ.
11ಪುರಾತನ ಕಾಲದಲ್ಲಿ ನಡೆದ ಸಂಗತಿಗಳ ಜ್ಞಾಪಕವು ಈಗಿನ ಜನರಿಗೆ ಇಲ್ಲ. ಮುಂದಿನ ಕಾಲದಲ್ಲಿ ನಡೆಯುವ ಸಂಗತಿಗಳ ಜ್ಞಾಪಕವು ಮುಂದಿನ ಕಾಲದ ಜನರಿಗೆ ಇರುವುದಿಲ್ಲ.”