Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಅ. ಕೃ. - ಅ. ಕೃ. 1

ಅ. ಕೃ. 1:3-24

Help us?
Click on verse(s) to share them!
3ಯೇಸುವು ಬಾಧೆಪಟ್ಟು ಸತ್ತ ನಂತರ ತಾನು ಜೀವಂತನಾಗಿ ಎದ್ದು ಬಂದಿದ್ದೇನೆ ಎಂದು ಅನೇಕ ಸಂಭವಗಳ ಮೂಲಕ ತಾನು ಆರಿಸಿಕೊಂಡಿದ್ದ ಅಪೊಸ್ತಲರಿಗೆ ಸ್ಪಷ್ಟಪಡಿಸಿದನು. ಸತತವಾಗಿ ನಲವತ್ತು ದಿನಗಳ ತನಕ ಅವರಿಗೆ ಕಾಣಿಸಿಕೊಳ್ಳುತ್ತಾ ದೇವರ ರಾಜ್ಯದ ವಿಷಯವನ್ನು ಕುರಿತು ಅವರಿಗೆ ಬೋಧಿಸಿದನು.
4ಒಮ್ಮೆ ಅವರೆಲ್ಲರೂ ಒಂದುಗೂಡಿದ್ದ ಸಂದರ್ಭದಲ್ಲಿ, “ನೀವು ಯೆರೂಸಲೇಮನ್ನು ಬಿಟ್ಟುಹೋಗದೆ, ನನ್ನಿಂದ ಕೇಳಿದಂಥ ಮತ್ತು ತಂದೆಯು ಮಾಡಿದ ವಾಗ್ದಾನಗಳಿಗಾಗಿ ಇಲ್ಲೇ ಕಾದುಕೊಂಡಿರಿ,
5ಏಕೆಂದರೆ, ಯೋಹಾನನಂತೂ ನೀರಿನಿಂದ ದೀಕ್ಷಾಸ್ನಾನ ಮಾಡಿಸುತ್ತಿದ್ದನು ಆದರೆ ಇನ್ನು ಕೆಲವೇ ದಿನಗಳಲ್ಲಿ ನಿಮಗೆ ಪವಿತ್ರಾತ್ಮನಿಂದ ದೀಕ್ಷಾಸ್ನಾನವಾಗುವುದು” ಎಂದು ಅಪ್ಪಣೆ ಕೊಟ್ಟನು.
6ಕೂಡಿಬಂದವರು ಆತನನ್ನು,, “ಕರ್ತನೇ, ನೀನು ಇದೇ ಕಾಲದಲ್ಲಿ ಇಸ್ರಾಯೇಲ್ ಜನರಿಗೆ ರಾಜ್ಯವನ್ನು ಪುನಃ ಸ್ಥಾಪಿಸಿಕೊಡುವಿಯೋ?” ಎಂದು ಕೇಳಲು
7ಆತನು ಅವರಿಗೆ, “ತಂದೆಯು ತನ್ನ ಅಧಿಕಾರದಲ್ಲಿಟ್ಟುಕೊಂಡಿರುವ ಕಾಲಗಳನ್ನೂ, ಸಮಯಗಳನ್ನೂ ತಿಳಿದುಕೊಳ್ಳುವುದು ನಿಮ್ಮ ಕಾರ್ಯವಲ್ಲ.
8ಆದರೆ ಪವಿತ್ರಾತ್ಮನು ನಿಮ್ಮ ಮೇಲೆ ಬರಲು ನೀವು ಶಕ್ತಿಯನ್ನು ಹೊಂದಿದವರಾಗಿ ಯೆರೂಸಲೇಮಿನಲ್ಲಿಯೂ, ಯೂದಾಯದ ಎಲ್ಲಾ ಸ್ಥಳದಲ್ಲಿಯು, ಸಮಾರ್ಯ ಸೀಮೆಗಳಲ್ಲಿಯೂ, ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರುವಿರಿ” ಅಂದನು.
9ಈ ಮಾತುಗಳನ್ನು ಅವನು ಹೇಳಿದ ಬಳಿಕ ಅವರು ನೋಡುತ್ತಿದ್ದ ಹಾಗೆಯೇ ಆತನು ಪರಲೋಕಕ್ಕೆ ಎತ್ತಲ್ಪಟ್ಟನು, ಮೋಡವೊಂದು ಆತನನ್ನು ಕವಿದುಕೊಂಡಿದ್ದರಿಂದ, ಯೇಸುವು ಅವರ ಕಣ್ಣಿಗೆ ಮರೆಯಾದನು.
10ಆತನು ಹೋಗುತ್ತಿರುವಾಗ ಅವರು ಆಕಾಶದ ಕಡೆಗೆ ದೃಷ್ಟಿಸಿ ನೋಡುತ್ತಾ ಇರಲಾಗಿ ಶುಭ್ರ ವಸ್ತ್ರಧಾರಿಗಳಾದ ಇಬ್ಬರು ಪುರುಷರು ಫಕ್ಕನೆ ಅವರ ಹತ್ತಿರ ನಿಂತುಕೊಂಡರು.
11“ಗಲಿಲಾಯದವರೇ, ನೀವು ಏಕೆ ಹೀಗೆ ಆಕಾಶದ ಕಡೆಗೆ ನೋಡುತ್ತಾ ನಿಂತಿದ್ದೀರಿ? ನಿಮ್ಮ ಬಳಿಯಿಂದ ಆಕಾಶದೊಳಗೆ ಸೇರಿಸಲ್ಪಟ್ಟಿರುವ ಈ ಯೇಸುವು ಯಾವ ರೀತಿಯಲ್ಲಿ ಆಕಾಶದೊಳಗೆ ಹೋಗಿರುವುದನ್ನು ನೀವು ಕಂಡಿರೋ ಹಾಗೆಯೇ ಆತನು ಹಿಂತಿರುಗಿ ಬರುವನು” ಎಂದು ಹೇಳಿದರು.
12ಆಗ ಅವರು ಆಲೀವ್ ಮರಗಳ ಗುಡ್ಡದಿಂದ ಯೆರೂಸಲೇಮಿಗೆ ಹಿಂತಿರುಗಿ ಬಂದರು. ಆ ಗುಡ್ಡಕ್ಕೂ ಯೆರೂಸಲೇಮಿಗೂ ಸಬ್ಬತ್ ದಿನದಲ್ಲಿ ಪ್ರಯಾಣಮಾಡುವಷ್ಟು ದೂರವಿತ್ತು.
13ಅವರು ಅಲ್ಲಿಗೆ ಬಂದು ತಾವು ವಾಸಮಾಡುತ್ತಿದ್ದ ಮೇಲಂತಸ್ತಿಗೆ ಹೋದರು; ಅವರು ಯಾರಾರೆಂದರೆ, ಪೇತ್ರ, ಯೋಹಾನ, ಯಾಕೋಬ, ಅಂದ್ರೆಯ, ಫಿಲಿಪ್ಪ, ತೋಮ, ಬಾರ್ತೊಲೊಮಾಯ, ಮತ್ತಾಯ, ಅಲ್ಫಾಯನ ಮಗ ಯಾಕೋಬ, ಮತಾಭಿಮಾನಿ ಎನಿಸಿಕೊಂಡ ಸೀಮೋನ, ಯಾಕೋಬನ ಸಹೋದರನಾದ ಯೂದ, ಇವರೇ.
14ಅಲ್ಲಿ ಕೆಲವು ಮಂದಿ ಸ್ತ್ರೀಯರೂ, ಯೇಸುವಿನ ತಾಯಿಯಾದ ಮರಿಯಳೂ, ಆತನ ತಮ್ಮಂದಿರೂ ಅವರ ಸಂಗಡ ಇದ್ದರು, ಇವರೆಲ್ಲರೂ ಏಕಮನಸ್ಸಿನಿಂದ ಪ್ರಾರ್ಥನೆಯಲ್ಲಿ ನಿರತರಾಗಿದ್ದರು.
15ಆ ದಿನಗಳಲ್ಲಿ ಸುಮಾರು ನೂರಿಪ್ಪತ್ತು ಮಂದಿ ವಿಶ್ವಾಸಿಗಳು ಕೂಡಿಬಂದಿರಲಾಗಿ ಪೇತ್ರನು ಅವರ ಮಧ್ಯದಲ್ಲಿ ಎದ್ದು ನಿಂತು ಹೀಗೆಂದನು,
16“ಸಹೋದರರೇ, ಯೇಸುವನ್ನು ಬಂಧಿಸಿದವರಿಗೆ ದಾರೀತೋರಿಸಿದ ಯೂದನ ವಿಷಯವಾಗಿ ಪವಿತ್ರಾತ್ಮನು ದಾವೀದನ ಬಾಯಿಂದ ಮೊದಲೇ ಹೇಳಿಸಿದ ಶಾಸ್ತ್ರವಚನವು ನೆರವೇರುವುದು ಅವಶ್ಯವಾಗಿತ್ತು.
17ಯೂದನು ನಮ್ಮೊಂದಿಗೆ ಸೇರಿ ಈ ಸೇವೆಯಲ್ಲಿ ಪಾಲು ಹೊಂದಿದವನಾಗಿದ್ದನು.”
18(ಈ ಮನುಷ್ಯನು ತನ್ನ ದ್ರೋಹದ ಪ್ರತಿಫಲವಾಗಿ ಹೊಲವನ್ನು ಪಡೆದನು ಮತ್ತು ತಲೆಕೆಳಗಾಗಿ ಬಿದ್ದು ಹೊಟ್ಟೆ ಒಡೆದು ಕರುಳುಗಳೆಲ್ಲಾ ಹೊರಗೆ ಚೆಲ್ಲಿದವು.
19ಇದು ಯೆರೂಸಲೇಮ್ ಪಟ್ಟಣದ ನಿವಾಸಿಗಳಿಗೆಲ್ಲಾ ತಿಳಿದುಬಂದುದರಿಂದ ಆ ಹೊಲಕ್ಕೆ ಅವರ ಭಾಷೆಯಲ್ಲಿ ‘ಅಕೆಲ್ದಾಮಾ,’ ಅಂದರೆ ರಕ್ತದ ಹೊಲ ಎಂಬ ಹೆಸರು ಬಂದಿತು.)
20ಅವನ ವಿಷಯವಾಗಿ, ಅವನ ಮನೆ ಹಾಳಾಗಲಿ, ಅದು ಜನರಿಲ್ಲದೆ ಪಾಳುಬೀಳಲಿ ಎಂತಲೂ ಅವನ ನಾಯಕತ್ವದ ಹುದ್ದೆಯು ಮತ್ತೊಬ್ಬನಿಗಾಗಲಿ ಎಂತಲೂ ಕೀರ್ತನೆಗಳ ಗ್ರಂಥದಲ್ಲಿ ಬರೆದಿದೆಯಲ್ಲಾ.
21ಆದುದರಿಂದ ಕರ್ತನಾದ ಯೇಸು ನಮ್ಮಲ್ಲಿ ಬರುತ್ತಾ ಹೋಗುತ್ತಾ ಇದ್ದಕಾಲವೆಲ್ಲಾ, ಅಂದರೆ ಯೋಹಾನನು ದೀಕ್ಷಾಸ್ನಾನ ಮಾಡಿಸಿದ್ದು ಮೊದಲುಗೊಂಡು ಯೇಸು ನಮ್ಮ ಬಳಿಯಿಂದ ಪರಲೋಕವನ್ನೇರಿ ಹೋದ ದಿನದ ವರೆಗೂ ನಮ್ಮ ಜೊತೆಯಲ್ಲಿದ್ದವರೊಳಗೆ ಒಬ್ಬನು ನಮ್ಮೊಂದಿಗೆ ಆತನ ಪುನರುತ್ಥಾನದ ವಿಷಯದಲ್ಲಿ ಸಾಕ್ಷಿಹೇಳುವವನಾಗಬೇಕು ಅಂದನು
23ಈ ಮಾತುಗಳನ್ನು ಕೇಳಿ ಅವರು ಯೂಸ್ತನೆನಿಸಿಕೊಳ್ಳುವ ಬಾರ್ನಬನೆಂಬ ಯೋಸೇಫನನ್ನೂ ಮತ್ತೀಯನನ್ನೂ ನಿಲ್ಲಿಸಿ,
24“ಕರ್ತನೇ, ಎಲ್ಲರ ಹೃದಯವನ್ನು ಬಲ್ಲಾತನೇ, ಯೂದನು ಅಪೊಸ್ತಲತನವೆಂಬ ಈ ಸೇವಾಸ್ಥಾನದಿಂದ ಭ್ರಷ್ಟನಾಗಿ ತಾನು ಹೋಗ ತಕ್ಕ ಸ್ಥಳಕ್ಕೆ ಹೋಗಿರುವುದರಿಂದ ಆ ಸ್ಥಾನವನ್ನು ಹೊಂದುವುದಕ್ಕೆ ಈ ಇಬ್ಬರಲ್ಲಿ ನೀನು ಆರಿಸಿ ಕೊಂಡವನನ್ನು ತೋರಿಸಿಕೊಡು” ಎಂದು ಪ್ರಾರ್ಥಿಸಿದರು.

Read ಅ. ಕೃ. 1ಅ. ಕೃ. 1
Compare ಅ. ಕೃ. 1:3-24ಅ. ಕೃ. 1:3-24