Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಅರಣ್ಯ - ಅರಣ್ಯ 16

ಅರಣ್ಯ 16:1-35

Help us?
Click on verse(s) to share them!
1ಆಗ ಲೇವಿಯನ ಮರಿಮಗನೂ, ಕೆಹಾತನ ಮೊಮ್ಮಗನೂ, ಇಚ್ಚಾರನ ರೂಬೇನ್ ಕುಲದವರಲ್ಲಿ ಎಲೀಯಾಬನ ಮಕ್ಕಳಾದ ದಾತಾನನೂ, ಅಬೀರಾಮನೂ ಮತ್ತು ಪೆಲೆತನ ಮಗನಾದ ಓನನೂ ಕರೆದುಕೊಂಡು, ಕೆಲವು ಜನರನ್ನು ಕೂಡಿಸಿದರು.
2ಇಸ್ರಾಯೇಲರ ಸಮೂಹದವರಲ್ಲಿದ್ದ ಮುಖ್ಯಸ್ಥರೂ, ಪ್ರಸಿದ್ಧರಾಗಿ ಹೆಸರು ಹೊಂದಿದ ಇನ್ನೂರೈವತ್ತು ಜನರು ಮೋಶೆಗೆ ವಿರುದ್ಧವಾಗಿ ಪ್ರತಿಭಟಿಸಿ ತಿರುಗಿಬಿದ್ದರು.
3ಅವರು ಒಟ್ಟಾಗಿ ಕೂಡಿಕೊಂಡು ಮೋಶೆ ಮತ್ತು ಆರೋನರ ಬಳಿಗೆ ಬಂದು ಅವರಿಗೆ, “ನೀವು ಹೆಚ್ಚು ಅಧಿಕಾರ ನಡೆಸುತ್ತೀರಿ. ಈ ಸಮೂಹದವರಲ್ಲಿ ಪ್ರತಿಯೊಬ್ಬನು ದೇವರಿಗೆ ಪ್ರತಿಷ್ಠಿತನಾದವನು, ಯೆಹೋವನು ಇವರೆಲ್ಲರ ಮಧ್ಯದಲ್ಲಿ ಇದ್ದಾನೆ. ಹೀಗಿರಲಾಗಿ ಯೆಹೋವನ ಸಮೂಹದವರಿಗಿಂತಲೂ ನಿಮ್ಮನ್ನು ನೀವೇ ಹೆಚ್ಚಿಸಿಕೊಳ್ಳುವುದು ಏಕೆ?” ಎಂದು ಕೇಳಿದರು.
4ಮೋಶೆ ಆ ಮಾತನ್ನು ಕೇಳಿ ಬೋರಲುಬಿದ್ದನು.
5ಮೋಶೆಯು ಕೋರಹನಿಗೂ ಮತ್ತು ಅವನ ಎಲ್ಲಾ ಸಮೂಹದವರಿಗೂ, “ತನ್ನವರು ಯಾರು ಎಂಬುದನ್ನು ಯೆಹೋವನು ನಾಳೆ ತಿಳಿಸುವನು. ಯಾರನ್ನು ಯೆಹೋವನು ಪ್ರತಿಷ್ಠಿಸಿದ್ದಾನೋ, ಯಾರನ್ನು ಆದುಕೊಂಡಿದ್ದಾನೋ ಅವರನ್ನು ಮಾತ್ರ ಆತನು ತನ್ನ ಹತ್ತಿರಕ್ಕೆ ಬರಗೊಡಿಸುವನು.
6ನೀವು ಇದನ್ನು ಮಾಡಿರಿ, ಕೋರಹನೂ ಮತ್ತು ಅವನ ಸಮೂಹದವರೆಲ್ಲರೂ ಧೂಪಾರತಿಗಳನ್ನು ತೆಗೆದುಕೊಂಡು,
7ಅವುಗಳಲ್ಲಿ ಕೆಂಡಗಳನ್ನಿಟ್ಟು ನಾಳೆ ಯೆಹೋವನ ಸನ್ನಿಧಿಯಲ್ಲಿ ಧೂಪಹಾಕಿರಿ. ಆಗ ಯೆಹೋವನು ಯಾರನ್ನು ಮೆಚ್ಚುವನೋ ಅವನೇ ದೇವರಿಗೆ ಪ್ರತಿಷ್ಠಿತನೆಂದು ತಿಳಿದುಕೊಳ್ಳುವಿರಿ. ಲೇವಿಯರೇ, ನಿಮ್ಮ ವರ್ತನೆ ಅತಿಯಾಯಿತು” ಎಂದು ಹೇಳಿದನು.
8ಪುನಃ ಮೋಶೆ ಕೋರಹನಿಗೆ, “ಲೇವಿಯ ಸಂತಾನದವರೇ, ಈಗ ಕೇಳಿರಿ,
9ಇಸ್ರಾಯೇಲರ ದೇವರಾದ ಯೆಹೋವನು ತನ್ನ ಗುಡಾರದ ಸೇವಾಕಾರ್ಯವನ್ನು ಮಾಡುವುದಕ್ಕೂ, ಸರ್ವಸಮೂಹದವರಿಗೋಸ್ಕರ ಸೇವೆಯನ್ನು ಮಾಡುವುದಕ್ಕೂ ನಿಮ್ಮನ್ನು ಹತ್ತಿರ ಬರಮಾಡಿಕೊಂಡು, ಸಮೂಹದವರಿಂದ ನಿಮ್ಮನ್ನು ಪ್ರತ್ಯೇಕಿಸಿದ್ದು ನಿಮಗೆ ಅಲ್ಪವಾಗಿ ತೋರುತ್ತದೋ?
10ಆತನು ನಿನ್ನನ್ನೂ, ನಿನ್ನ ಸ್ವಕುಲದವರಾದ ಲೇವಿಯರನ್ನೂ ತನ್ನ ಹತ್ತಿರ ಬರಮಾಡಿಕೊಂಡಿದ್ದಾನೆ. ನೀವು ಸಹ ಯಾಜಕತ್ವವನ್ನು ಬಯಸುತ್ತಿರೋ?
11ನೀನು ಮತ್ತು ನಿನ್ನ ಸಮೂಹದವರೆಲ್ಲರು ಯೆಹೋವನಿಗೆ ವಿರುದ್ಧವಾಗಿ ಕೂಡಿಕೊಂಡಿರಿ, ನನಗೆ ವಿಧೇಯನಾಗಿ ನಡೆಯುವ ಆರೋನನ ವಿರುದ್ಧವಾಗಿ ನೀವು ಗುಣಗುಟ್ಟುವುದೇಕೆ?” ಎಂದು ಕೇಳಿದನು.
12ಮೋಶೆಯು, ಎಲೀಯಾಬನ ಮಕ್ಕಳಾದ ದಾತಾನ್ ಮತ್ತು ಅಬೀರಾಮರನ್ನು ಕರೆದುಕೊಂಡು ಬರಲು ಹೇಳಿದರು ಅವರು ಅವನಿಗೆ, “ನಾವು ಬರುವುದಿಲ್ಲ.
13ನೀನು ಹಾಲೂ ಮತ್ತು ಜೇನೂ ಹರಿಯುವ ದೇಶದಿಂದ ಕರೆದುಕೊಂಡು ಬಂದು ನಮ್ಮನ್ನು ಮರುಭೂಮಿಯಲ್ಲಿ ಸಾಯಿಸುವುದು ನಿನಗೆ ಸಾಕಾಗಲಿಲ್ಲವೋ? ನೀನು ನಮ್ಮ ಮೇಲೆ ದೊರೆತನ ಮಾಡಬೇಕು ಎಂದು ಕೋರುತ್ತಿಯೋ?
14ಅಷ್ಟು ಮಾತ್ರವೇ ಅಲ್ಲ, ನೀನು ಹಾಲೂ ಜೇನೂ ಹರಿಯುವ ದೇಶಕ್ಕೆ ನಮ್ಮನ್ನು ಸೇರಿಸಲಿಲ್ಲ; ಹೊಲಗಳನ್ನೂ, ದ್ರಾಕ್ಷಿತೋಟಗಳನ್ನೂ ನಮಗೆ ಸ್ವಂತಕ್ಕೆ ಕೊಡಲೇ ಇಲ್ಲ; ಈ ಜನರ ಕಣ್ಣಿಗೆ ಮಣ್ಣು ಹಾಕಬೇಕೆಂದಿದ್ದೀಯೋ? ನಾವು ಬರುವುದಿಲ್ಲ” ಎಂದು ಹೇಳಿದನು.
15ಅದಕ್ಕೆ ಮೋಶೆಯು ಬಹಳ ಕೋಪಗೊಂಡು ಯೆಹೋವನಿಗೆ, “ನೀನು ಅವರ ನೈವೇದ್ಯವನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳಬೇಡ; ನಾನು ಅವರಿಂದ ಒಂದು ಕತ್ತೆಯನ್ನಾದರೂ ತೆಗೆದುಕೊಂಡವನಲ್ಲ; ಅವರಲ್ಲಿ ಒಬ್ಬನಿಗಾದರೂ ಹಾನಿ ಮಾಡಿದವನಲ್ಲ” ಎಂದು ಮನವಿಮಾಡಿದನು.
16ಮೋಶೆ ಕೋರಹನಿಗೆ, “ನಾಳೆ ನೀನೂ, ನಿನ್ನ ಸಮೂಹದವರೆಲ್ಲರೂ ಮತ್ತು ಆರೋನನೂ ಯೆಹೋವನ ಸನ್ನಿಧಿಗೆ ಬರಬೇಕು.
17ಅವರಲ್ಲಿ ಒಬ್ಬೊಬ್ಬನು ತನ್ನ ತನ್ನ ಧೂಪಾರತಿಗಳನ್ನು, ಒಟ್ಟಾಗಿ ಇನ್ನೂರೈವತ್ತು ಧೂಪಾರತಿಯನ್ನು ತೆಗೆದುಕೊಂಡು ಧೂಪಹಾಕಿ ಯೆಹೋವನ ಸನ್ನಿಧಿಗೆ ಬರಬೇಕು. ಹಾಗೆಯೇ ನೀನು ಮತ್ತು ಆರೋನನು ನಿಮ್ಮ ನಿಮ್ಮ ಧೂಪಾರತಿಗಳನ್ನು ತೆಗೆದುಕೊಂಡು ಬರಬೇಕು” ಎಂದು ಹೇಳಿದನು.
18ಅದಕ್ಕೆ ಅನುಸಾರವಾಗಿ ಅವರೆಲ್ಲರೂ ತಮ್ಮ ತಮ್ಮ ಧೂಪಾರತಿಗಳನ್ನು ಕೈಯಲ್ಲಿ ತೆಗೆದುಕೊಂಡು ಅವುಗಳಲ್ಲಿ ಕೆಂಡಗಳನ್ನಿಟ್ಟು ಧೂಪದ್ರವ್ಯಗಳನ್ನು ಹಾಕಿ ಮೋಶೆ ಮತ್ತು ಆರೋನರ ಜೊತೆಯಲ್ಲಿ ದೇವದರ್ಶನದ ಗುಡಾರದ ಬಾಗಿಲಿನಲ್ಲಿ ನಿಂತುಕೊಂಡರು.
19ಅದಲ್ಲದೆ ಕೋರಹನು ತಮಗೆ ಎದುರಾದ ಸರ್ವಸಮೂಹದವರನ್ನು ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರಕ್ಕೆ ಕೂಡಿಸಿದನು. ಆಗ ಯೆಹೋವನ ತೇಜಸ್ಸು ಸಮೂಹದವರೆಲ್ಲರಿಗೂ ಕಾಣಿಸಿತು.
20ಯೆಹೋವನು ಮೋಶೆ ಮತ್ತು ಆರೋನನ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
21“ನೀವು ಈ ಸರ್ವಸಮೂಹದವರಿಂದ ಪ್ರತ್ಯೇಕವಾಗಿ ನಿಲ್ಲಿರಿ; ನಾನು ಇವರನ್ನು ಒಂದು ಕ್ಷಣದಲ್ಲಿ ದಹಿಸಿಬಿಡುತ್ತೇನೆ” ಎಂದು ಆಜ್ಞಾಪಿಸಿದನು.
22ಅವರು ಬೋರಲುಬಿದ್ದು, “ದೇವರೇ, ಎಲ್ಲಾ ಮನುಷ್ಯರ ಆತ್ಮಗಳಿಗೆ ದೇವರಾಗಿರುವವನೇ, ಇವರಲ್ಲಿ ದೋಷಿಯಾದವನು ಒಬ್ಬನೇ ಆಗಿರಲಾಗಿ ಸರ್ವಸಮೂಹದವರೆಲ್ಲರ ಮೇಲೆ ಕೋಪಗೊಳ್ಳಬಹುದೋ?” ಎಂದು ಬಿನ್ನೈಸಿದನು.
23ಆಗ ಯೆಹೋವನು ಮೋಶೆಗೆ ಉತ್ತರವಾಗಿ,
24“ಇಸ್ರಾಯೇಲರ ಸಮೂಹದವರಿಗೆ, ‘ಕೋರಹ, ದಾತಾನ್ ಮತ್ತು ಅಬೀರಾಮರ ಗುಡಾರದಿಂದ ದೂರವಿರಬೇಕು’ ಎಂದು ಅವರಿಗೆ ಆಜ್ಞಾಪಿಸು” ಎಂದು ಹೇಳಿದನು.
25ಆಗ ಮೋಶೆ ಎದ್ದು ದಾತಾನ್ ಮತ್ತು ಅಬೀರಾಮರ ಬಳಿಗೆ ಹೋದನು; ಇಸ್ರಾಯೇಲರ ಹಿರಿಯರು ಅವನ ಹಿಂದೆ ಹೋದರು.
26ಅವನು ಇಸ್ರಾಯೇಲರ ಸಮೂಹದವರಿಗೆ, “ನೀವು ಈ ದುಷ್ಟರ ಡೇರೆಗಳ ಬಳಿಯಲ್ಲಿ ಇರದೆ ದೂರ ಹೋಗಬೇಕು; ಇವರ ಸೊತ್ತಿನಲ್ಲಿ ಯಾವುದನ್ನೂ ಮುಟ್ಟಬಾರದು; ಇವರ ದೋಷಗಳಿಗಾಗಿ ಉಂಟಾಗುವ ಶಿಕ್ಷೆ ನಿಮ್ಮನ್ನೂ ಕೊಚ್ಚಿಕೊಂಡು ಹೋದೀತು” ಎಂದು ಹೇಳಿದನು.
27ಆದಕಾರಣ ಅವರೆಲ್ಲರೂ ಕೋರಹ, ದಾತಾನ್ ಮತ್ತು ಅಬೀರಾಮರ ಗುಡಾರದಿಂದ ದೂರ ಹೋದರು. ದಾತಾನ್ ಮತ್ತು ಅಬೀರಾಮರೂ ಅವರ ಹೆಂಡತಿ, ಮಕ್ಕಳು ಮತ್ತು ಅವರಿಗೆ ಸಂಬಂಧಪಟ್ಟವರೆಲ್ಲರೂ ಹೊರಗೆ ಬಂದು ತಮ್ಮ ತಮ್ಮ ಡೇರೆಗಳ ಬಾಗಿಲುಗಳಲ್ಲಿ ನಿಂತುಕೊಂಡರು.
28ಆಗ ಮೋಶೆ ಜನರಿಗೆ, “ಈ ಕಾರ್ಯಗಳೆಲ್ಲಾ ನನ್ನ ಆಲೋಚನೆಯಿಂದ ಆಗಲಿಲ್ಲವೆಂದೂ ಮತ್ತು ಯೆಹೋವನೇ ಇವುಗಳನ್ನು ನಡಿಸುವುದಕ್ಕೆ ನನ್ನನ್ನು ಕಳುಹಿಸಿದನೆಂದೂ ನೀವೇ ತಿಳಿದುಕೊಳ್ಳುವಿರಿ.
29ಹೇಗೆಂದರೆ, ಎಲ್ಲರೂ ಸಾಯುವ ರೀತಿಯಲ್ಲೇ ಇವರು ಸತ್ತರೆ, ಇಲ್ಲವೆ ಎಲ್ಲರಿಗೂ ಸಂಭವಿಸುವ ಗತಿ ಇವರಿಗುಂಟಾದರೆ ಯೆಹೋವನು ನನ್ನನ್ನು ಕಳುಹಿಸಲಿಲ್ಲವೆಂದು ತಿಳಿದುಕೊಳ್ಳಬೇಕು.
30ಆದರೆ ಯೆಹೋವನು ಇವರಿಗೋಸ್ಕರ ಭೂಮಿಯು ಬಾಯ್ದೆರೆದು ಇವರನ್ನೂ, ಇವರ ಸರ್ವಸ್ವವನ್ನೂ ನುಂಗಿ, ಇವರು ಸಜೀವಿಗಳಾಗಿ ಪಾತಾಳಕ್ಕೆ ಹೋಗಿಬಿಟ್ಟರೆ, ಇವರು ಯೆಹೋವನನ್ನು ತಿರಸ್ಕರಿಸಿದವರೆಂದು ನೀವು ತಿಳಿದುಕೊಳ್ಳಬೇಕು” ಎಂದು ಹೇಳಿದನು.
31ಮೋಶೆ ಈ ಮಾತುಗಳನ್ನು ಹೇಳಿ ಮುಗಿಸಿದ ಕೂಡಲೆ ಆ ಮನುಷ್ಯರ ಕೆಳಗಿದ್ದ ನೆಲವು ಸೀಳಿತು.
32ಭೂಮಿಯು ಬಾಯ್ದೆರೆದು ಅವರನ್ನೂ ಮತ್ತು ಕೋರಹನಿಗೆ ಸೇರಿದ ಮನುಷ್ಯರೆಲ್ಲರನ್ನೂ, ಅವರ ಸರ್ವಸ್ವವನ್ನೂ ನುಂಗಿಬಿಟ್ಟಿತು.
33ಅವರು ಸಜೀವಿಗಳಾಗಿ ತಮ್ಮ ಸರ್ವಸ್ವ ಸಹಿತವಾಗಿ ಪಾತಾಳಕ್ಕೆ ಹೋಗಿಬಿಟ್ಟರು, ಭೂಮಿಯು ಅವರನ್ನು ಮುಚ್ಚಿಕೊಂಡಿತು. ಹೀಗೆ ಅವರು ಸಮೂಹದವರೊಳಗಿಂದ ನಾಶವಾದರು.
34ಅವರ ಸುತ್ತಲಿದ್ದ ಇಸ್ರಾಯೇಲರೆಲ್ಲರೂ ಹೆದರಿಕೊಂಡು, “ಭೂಮಿಯು ನಮ್ಮನ್ನೂ ಸಹ ನುಂಗಿಬಿಟ್ಟೀತು!” ಎಂದು ಹೇಳಿ ಓಡಿಹೋದರು.
35ನಂತರ ಯೆಹೋವನ ಬಳಿಯಿಂದ ಬೆಂಕಿಹೊರಟು, ಧೂಪವನ್ನು ಅರ್ಪಿಸುತ್ತಿದ್ದ ಆ ಇನ್ನೂರೈವತ್ತು ಮಂದಿಯನ್ನು ದಹಿಸಬಿಟ್ಟಿತು.

Read ಅರಣ್ಯ 16ಅರಣ್ಯ 16
Compare ಅರಣ್ಯ 16:1-35ಅರಣ್ಯ 16:1-35