18ಬಿರುಗಾಳಿ ಬೀಸುತ್ತಿದ್ದುದರಿಂದ ಸಮುದ್ರವು ಅಲ್ಲೋಲಕಲ್ಲೋಲವಾಯಿತು.
19ಹೀಗಿರಲಾಗಿ ಅವರು ಹುಟ್ಟು ಹಾಕುತ್ತಾ ಸುಮಾರು ಒಂದು ಹರದಾರಿ ದೂರ ಹೋದ ಬಳಿಕ ಯೇಸು ನೀರಿನ ಮೇಲೆ ನಡೆಯುತ್ತಾ ದೋಣಿಯ ಸಮೀಪಕ್ಕೆ ಬರುವುದನ್ನು ನೋಡಿ ಭಯಪಟ್ಟರು.
20ಆದರೆ ಯೇಸು ಅವರಿಗೆ, “ಭಯಪಡಬೇಡಿರಿ, ನಾನೇ!” ಎಂದನು.
21ಆಗ ಆತನನ್ನು ದೋಣಿಯಲ್ಲಿ ಸೇರಿಸಿಕೊಳ್ಳಬೇಕೆಂದಿದ್ದರು. ಆ ಕ್ಷಣವೇ ದೋಣಿಯು ಅವರು ಹೋಗಬೇಕಾಗಿದ್ದ ದಡಕ್ಕೆ ಮುಟ್ಟಿತು.
22ಮರುದಿನ ಸಮುದ್ರದ ಆಚೇಕಡೆಯಲ್ಲಿ ನಿಂತಿದ್ದ ಜನರು ಅಲ್ಲಿ ಒಂದೇ ದೋಣಿ ಲಭ್ಯವಿದೆ ಇದೆ, ಮತ್ತು ಯೇಸು ತನ್ನ ಶಿಷ್ಯರ ಸಂಗಡ ಆ ದೋಣಿಯಲ್ಲಿ ಹತ್ತಲಿಲ್ಲವೆಂದೂ ಅವರಿಗೆ ಅರಿವಾಯಿತು. ಏಕೆಂದರೆ, ಶಿಷ್ಯರು ಮಾತ್ರ ಆ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು.
23ಅಷ್ಟರೊಳಗೆ ತಿಬೇರಿಯಾದಿಂದ ಬೇರೆ ದೋಣಿಗಳು ಹೊರಟು, ಕರ್ತನು ದೇವರಿಗೆ ಕೃತಜ್ಞತೆ ಸಲ್ಲಿಸಿ, ಜನರಿಗೆ ರೊಟ್ಟಿಯನ್ನು ಊಟಮಾಡಿಸಿದ ಸ್ಥಳದ ಸಮೀಪಕ್ಕೆ ಬಂದವು.
24ಹೀಗಿರಲಾಗಿ ಯೇಸು ಮತ್ತು ಆತನ ಶಿಷ್ಯರು ಅಲ್ಲಿ ಇಲ್ಲದಿರುವುದನ್ನು ಜನರು ಅರಿತು ತಾವೇ ದೋಣಿಗಳನ್ನು ಹತ್ತಿ ಯೇಸುವನ್ನು ಹುಡುಕುತ್ತಾ ಕಪೆರ್ನೌಮಿಗೆ ಬಂದರು.
25ಮತ್ತು ಸಮುದ್ರದ ಆಚೆಕಡೆಯಲ್ಲಿ ಆತನನ್ನು ಕಂಡು “ಗುರುವೇ, ಯಾವಾಗ ಇಲ್ಲಿಗೆ ಬಂದಿ?” ಎಂದು ಕೇಳಿದರು.
26ಯೇಸು ಅವರಿಗೆ “ನಿಮಗೆ ಸತ್ಯವಾಗಿ ಹೇಳುತ್ತೇನೆ. ನೀವು ನನ್ನನ್ನು ಹುಡುಕುವುದು ಸೂಚಕಕಾರ್ಯಗಳನ್ನು ನೋಡಿದ್ದರಿಂದಲ್ಲ, ಆ ರೊಟ್ಟಿ ತಿಂದು ಹೊಟ್ಟೆ ತುಂಬಿಸಿಕೊಂಡಿದ್ದರಿಂದಲೇ.
27ನಾಶವಾಗುವ ಆಹಾರಕ್ಕಾಗಿ ದುಡಿಯಬೇಡಿರಿ. ನಿತ್ಯಜೀವಕ್ಕಾಗಿ ಉಳಿಯುವ ಆಹಾರಕ್ಕಾಗಿ ದುಡಿಯಿರಿ, ಇಂಥಾ ಆಹಾರವನ್ನು ಮನುಷ್ಯಕುಮಾರನು ನಿಮಗೆ ಕೊಡುವನು. ಇದಕ್ಕಾಗಿ ತಂದೆಯಾದ ದೇವರು ಆತನ ಮೇಲೆ ಮುದ್ರೆ ಹಾಕಿ ನೇಮಿಸಿದ್ದಾನೆ” ಎಂದನು.
28ಅವರು ಆತನಿಗೆ “ದೇವರ ಕ್ರಿಯೆಗಳನ್ನು ನಾವು ಮಾಡಬೇಕಾದರೆ ಏನು ಮಾಡಬೇಕೆಂದು” ಕೇಳಿದ್ದಕ್ಕೆ,
29ಯೇಸುವು, “ದೇವರ ಕ್ರಿಯೆ ಯಾವುದೆಂದರೆ, ಆತನು ಕಳುಹಿಸಿಕೊಟ್ಟಾತನನ್ನು ನೀವು ನಂಬುವುದೇ” ಎಂದನು.