28ಅವು ಯಾವುವೆಂದರೆ, ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ, ರಕ್ತವನ್ನೂ, ಕುತ್ತಿಗೆ ಹಿಸುಕಿ ಕೊಂದದ್ದನ್ನೂ, ಅನೈತಿಕತೆಯನ್ನೂ ವಿಸರ್ಜಿಸುವುದು ಅಗತ್ಯವಾಗಿದೆ.
29ಇದಕ್ಕಿಂತ ಹೆಚ್ಚಿನ ಹೊರೆಯನ್ನು ನಿಮ್ಮ ಮೇಲೆ ಹೊರಿಸಬಾರದೆಂದು ಪವಿತ್ರಾತ್ಮನಿಗೂ ನಮಗೂ ಹಿತವಾಗಿ ತೋರಿತು; ನೀವು ಎಚ್ಚರವಾಗಿದ್ದು ಇವುಗಳ ಗೊಡವೆಗೆ ಹೋಗದಿದ್ದರೆ ನಿಮಗೆ ಒಳ್ಳೆಯದಾಗುವುದು. ಶುಭವಾಗಲಿ.”
30ಹೀಗೆ ಅವರು ಅಪ್ಪಣೆ ತೆಗೆದುಕೊಂಡು ಅಂತಿಯೋಕ್ಯಕ್ಕೆ ಬಂದು ಸಭೆಯನ್ನು ಸೇರಿಸಿ ಆ ಪತ್ರವನ್ನು ಅವರಿಗೆ ಒಪ್ಪಿಸಿದರು.
31ಅವರು ಓದಿ ಅದರಿಂದ ಧೈರ್ಯ ತಂದುಕೊಂಡು ಸಂತೋಷಪಟ್ಟರು.
32ಯೂದನೂ, ಸೀಲನೂ ತಾವೇ ಪ್ರವಾದಿಗಳಾಗಿದ್ದುದರಿಂದ ಸಹೋದರರನ್ನು ಅನೇಕ ಮಾತುಗಳಿಂದ ಉತ್ತೇಜಿಸಿ ದೃಢಪಡಿಸಿದರು.
33ಅಲ್ಲಿ ಕೆಲವು ಕಾಲ ಕಳೆದ ನಂತರ ತಮ್ಮನ್ನು ಕಳುಹಿಸಿದವರ ಬಳಿಗೆ ಪುನಃ ಹೋಗುವುದಕ್ಕೆ ಸಹೋದರರಿಂದ ಅಪ್ಪಣೆ ತೆಗೆದುಕೊಂಡರು.
34ಆದರೆ ಸೀಲನಿಗೆ ಅಲ್ಲೇ ಇರುವುದು ಒಳ್ಳೆಯದೆಂದು ತೋಚಿತು.
35ಆದರೆ ಪೌಲನೂ ಮತ್ತು ಬಾರ್ನಬನೂ ಅಂತಿಯೋಕ್ಯದಲ್ಲಿಯೇ ನಿಂತು ಬೇರೆ ಅನೇಕರೊಂದಿಗೆ ಉಪದೇಶಮಾಡುತ್ತಾ ಕರ್ತನ ವಾಕ್ಯವೆಂಬ ಸುವಾರ್ತೆಯನ್ನು ಸಾರುತ್ತಾ ಇದ್ದರು.
36ಕೆಲವು ದಿನಗಳಾದ ಮೇಲೆ ಪೌಲನು ಬಾರ್ನಬನಿಗೆ; “ನಾವು ಕರ್ತನ ವಾಕ್ಯವನ್ನು ಸಾರಿದ ಎಲ್ಲಾ ಊರುಗಳಿಗೆ ಪುನಃ ಹೋಗಿ ಅಲ್ಲಿರುವ ಸಹೋದರರು ಹೇಗಿದ್ದಾರೆಂದು ನೋಡೋಣ ಬಾ” ಎಂದು ಹೇಳಿದನು.