Text copied!
Bibles in Kannada

ನ್ಯಾಯ 20:4-34 in Kannada

Help us?

ನ್ಯಾಯ 20:4-34 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಹತಳಾದ ಸ್ತ್ರೀಯ ಗಂಡನಾದ ಆ ಲೇವಿಯನು, “ನಾನು ನನ್ನ ಉಪಪತ್ನಿಯ ಸಹಿತವಾಗಿ ಬೆನ್ಯಾಮೀನ್ಯರ ಊರಾದ ಗಿಬೆಯದಲ್ಲಿ ಒಂದು ರಾತ್ರಿ ಉಳಿದುಕೊಂಡೆನು.
5 ಆ ಊರಿನ ಜನರು ನನ್ನನ್ನು ಕೊಲ್ಲಬೇಕೆಂದು ಅದೇ ರಾತ್ರಿ ನಾನು ಇಳಿದುಕೊಂಡಿದ್ದ ಮನೆಯನ್ನು ಸುತ್ತಿಕೊಂಡರು, ಮತ್ತು ನನ್ನ ಉಪಪತ್ನಿಯನ್ನು ಭಂಗಪಡಿಸಿದರು, ಆಕೆಯು ಸತ್ತುಹೋದಳು.
6 ಅವರು ಇಸ್ರಾಯೇಲರಲ್ಲಿ ನಡೆಸಿದ ಇಂಥ ಕೆಟ್ಟ ಮತ್ತು ಕ್ರೂರ ಕೆಲಸವು ಎಲ್ಲರಿಗೂ ಗೊತ್ತಾಗಲೆಂದು ನಾನು ಆಕೆಯ ಶವವನ್ನು ತುಂಡುಮಾಡಿ ಇಸ್ರಾಯೇಲರ ಎಲ್ಲಾ ಪ್ರಾಂತ್ಯಗಳಿಗೆ ಕಳುಹಿಸಿದೆನು.
7 ಇಲ್ಲಿ ಕೂಡಿರುವ ಎಲ್ಲಾ ಇಸ್ರಾಯೇಲರೇ, ಈಗ ನಿಮ್ಮ ಆಲೋಚನೆ ಮತ್ತು ಅಭಿಪ್ರಾಯಗಳನ್ನು ಹೇಳಿರಿ” ಅಂದನು.
8 ಇದನ್ನು ಕೇಳಿ ಜನರು ಏಕಮನಸ್ಸಿನಿಂದ, “ನಮ್ಮಲ್ಲಿ ಯಾವನೂ ತನ್ನ ಗುಡಾರಕ್ಕೆ ಹೋಗಬಾರದು; ತನ್ನ ಮನೆಗೆ ಹಿಂದಿರುಗದಿರಲಿ.
9 ನಾವು ಚೀಟು ಹಾಕೋಣ; ಅದು ಬಿದ್ದ ಪ್ರಕಾರವೇ ಗಿಬೆಯದವರಿಗೆ ವಿರೋಧವಾಗಿ ಯುದ್ಧಕ್ಕೆ ಹೋಗೋಣ.
10 ಇಸ್ರಾಯೇಲ್ಯರ ಕುಲಗಳಲ್ಲಿ ನೂರಕ್ಕೆ ಹತ್ತು, ಸಾವಿರಕ್ಕೆ ನೂರು, ಹತ್ತು ಸಾವಿರಕ್ಕೆ ಸಾವಿರ ಈ ಪ್ರಕಾರ ಜನರನ್ನು ಆರಿಸಿಕೊಂಡು ಅವರನ್ನು ಆಹಾರ ತರುವುದಕ್ಕಾಗಿ ಕಳುಹಿಸೋಣ. ಅವರು ಬಂದ ಮೇಲೆ ಬೆನ್ಯಾಮೀನ್ಯರಾದ ಗಿಬೆಯದವರು ಇಸ್ರಾಯೇಲರಲ್ಲಿ ನಡೆಸಿದ ದುಷ್ಟ ಕಾರ್ಯಕ್ಕಾಗಿ ಅವರಿಗೆ ದಂಡನೆಮಾಡೋಣ” ಅಂದುಕೊಂಡರು.
11 ಹೀಗೆ ಅವರೆಲ್ಲರೂ ಏಕಮನಸ್ಸಿನಿಂದ ಆ ಪಟ್ಟಣಕ್ಕೆ ವಿರೋಧವಾಗಿ ಕೂಡಿಕೊಂಡರು.
12 ಅವರು ಬೆನ್ಯಾಮೀನ್ಯರ ಸಮಸ್ತ ಕುಲದವರ ಬಳಿಗೆ ದೂತರನ್ನು ಕಳುಹಿಸಿ ಅವರಿಗೆ, “ನಿಮ್ಮಲ್ಲಿ ನಡೆದ ಈ ದುಷ್ಕೃತ್ಯ ಎಂಥದು?
13 ಈಗ ಗಿಬೆಯ ಊರಲ್ಲಿರುವ ಆ ದುಷ್ಟರನ್ನು ನಮಗೆ ಒಪ್ಪಿಸಿರಿ; ನಾವು ಅವರನ್ನು ಕೊಂದು ಇಸ್ರಾಯೇಲರ ಮಧ್ಯದಿಂದ ಇಂಥ ದುಷ್ಟತನವನ್ನು ತೆಗೆದುಹಾಕುತ್ತೇವೆ” ಎಂದು ಹೇಳಿದರು.
14 ಆದರೆ ಬೆನ್ಯಾಮೀನ್ಯರು ತಮ್ಮ ಬಂಧುಗಳ ಮಾತಿಗೆ ಕಿವಿಗೊಡದೆ ತಮ್ಮ ಎಲ್ಲಾ ಊರುಗಳಿಂದ ಗಿಬೆಯಕ್ಕೆ ಬಂದು ಇಸ್ರಾಯೇಲ್ಯರ ಸಂಗಡ ಯುದ್ಧಕ್ಕೆ ಸನ್ನದ್ಧರಾದರು.
15 ಆ ದಿನದಲ್ಲಿ ಆಯಾ ಊರುಗಳಿಂದ ಯುದ್ಧಸನ್ನದ್ಧರಾಗಿ ಸೇರಿಬಂದ ಬೆನ್ಯಾಮೀನ್ಯರ ಸಂಖ್ಯೆಯು ಇಪ್ಪತ್ತಾರು ಸಾವಿರವಾಗಿತ್ತು. ಇವರಲ್ಲದೆ ಗಿಬೆಯದಲ್ಲಿಯೇ ಏಳು ನೂರು ಮಂದಿ ಯುದ್ಧವೀರರಿದ್ದರು.
16 ಈ ಎಲ್ಲಾ ಜನರಲ್ಲಿ ಏಳುನೂರು ಜನರು ಎಡಚರಾದ ಯುದ್ಧವೀರರಿದ್ದರು. ಅವರಲ್ಲಿ ಪ್ರತಿಯೊಬ್ಬರು ಕೂದಲೆಳೆಯಷ್ಟು ಗುರಿತಪ್ಪದ ಹಾಗೆ ಕವಣೆಯನ್ನು ಹೊಡೆಯುವುದರಲ್ಲಿ ನಿಪುಣರಾಗಿದ್ದರು.
17 ಬೆನ್ಯಾಮೀನ್ಯರಲ್ಲದ ಇಸ್ರಾಯೇಲರಲ್ಲಿ ನಾಲ್ಕು ಲಕ್ಷ ಯೋಧರಿದ್ದರು; ಇವರೆಲ್ಲರೂ ವೀರರಾಗಿದ್ದರು.
18 ಇಸ್ರಾಯೇಲ್ಯರು ಬೇತೇಲಿಗೆ ಹೋಗಿ, “ಬೆನ್ಯಾಮೀನ್ಯರ ಮೇಲೆ ಯುದ್ಧಕ್ಕೆ ನಮ್ಮಲ್ಲಿ ಮೊದಲು ಯಾರು ಹೋಗಬೇಕು?” ಎಂದು ದೇವರಾದ ಯೆಹೋವನನ್ನು ಕೇಳಲು ಆತನು, “ಮೊದಲು ಯೆಹೂದ ಕುಲದವರು ಹೋಗಲಿ” ಎಂದು ಹೇಳಿದನು.
19 ಇಸ್ರಾಯೇಲ್ಯರು ಬೆಳಗ್ಗೆ ಹೊರಟುಹೋಗಿ ಗಿಬೆಯದ ಎದುರಿನಲ್ಲಿ ಪಾಳೆಯಮಾಡಿಕೊಂಡು,
20 ಬೆನ್ಯಾಮೀನ್ಯರೊಡನೆ ಯುದ್ಧಮಾಡುವುದಕ್ಕೋಸ್ಕರ ಸಿದ್ಧರಾಗಿ, ಗಿಬೆಯದ ಎದುರಿನಲ್ಲಿ ವ್ಯೂಹಕಟ್ಟಿ ನಿಂತರು.
21 ಆ ದಿನದಲ್ಲಿ ಬೆನ್ಯಾಮೀನ್ಯರು ಗಿಬೆಯದಿಂದ ಹೊರಗೆ ಬಂದು ಇಸ್ರಾಯೇಲ್ಯರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ನೆಲಕ್ಕುರುಳಿಸಿದರು.
22 ಇಸ್ರಾಯೇಲ್ಯರು ತಿರುಗಿ ಧೈರ್ಯ ತಂದುಕೊಂಡು ಮೊದಲನೆಯ ದಿನದಲ್ಲಿ ವ್ಯೂಹಕಟ್ಟಿದ ಸ್ಥಳದಲ್ಲೇ ತಿರುಗಿ ವ್ಯೂಹಕಟ್ಟಿ ಯುದ್ಧಕ್ಕೆ ನಿಂತರು.
23 ಇಸ್ರಾಯೇಲ್ಯರು ಹೋಗಿ ಯೆಹೋವನ ಮುಂದೆ ಅಳುತ್ತಾ, “ನಾವು ತಿರುಗಿ ನಮ್ಮ ಬಂಧುಗಳಾದ ಬೆನ್ಯಾಮೀನ್ಯರೊಡನೆ ಯುದ್ಧಮಾಡಬೇಕೋ?” ಎಂದು ಕೇಳಲು, ಆತನು, “ಹೋಗಿ ಯುದ್ಧಮಾಡಿರಿ” ಅಂದನು.
24 ಆದ್ದರಿಂದ ಅವರು ಎರಡನೆಯ ದಿನದಲ್ಲಿಯೂ ಯುದ್ಧಕ್ಕೆ ಸಿದ್ಧರಾಗಿ ಬೆನ್ಯಾಮೀನ್ಯರ ಸಮೀಪಕ್ಕೆ ಬಂದರು.
25 ಬೆನ್ಯಾಮೀನ್ಯರು ಎರಡನೆಯ ದಿನದಲ್ಲಿಯೂ ಗಿಬೆಯದಿಂದ ಹೊರಗೆ ಬಂದು ಇಸ್ರಾಯೇಲ್ಯರಲ್ಲಿ ಹದಿನೆಂಟು ಸಾವಿರ ಮಂದಿ ಯುದ್ಧವೀರರನ್ನು ನೆಲಕ್ಕೆ ಉರುಳಿಸಿದರು.
26 ಆಗ ಇಸ್ರಾಯೇಲ್ಯರೆಲ್ಲರೂ, ಎಲ್ಲಾ ಜನರೂ ಬೇತೇಲಿಗೆ ಹೋಗಿ ಅಲ್ಲಿ ಯೆಹೋವನ ಮುಂದೆ ಅಳುತ್ತಾ ಬಿದ್ದು ಸಾಯಂಕಾಲದ ವರೆಗೆ ಉಪವಾಸಮಾಡಿದರು. ಅಲ್ಲಿ ಅವರು ಆತನಿಗೆ ಸರ್ವಾಂಗಹೋಮಗಳನ್ನೂ, ಸಮಾಧಾನ ಯಜ್ಞಗಳನ್ನೂ ಸಮರ್ಪಿಸಿದರು.
27 ಆ ಕಾಲದಲ್ಲಿ ಯೆಹೋವನ ಒಡಂಬಡಿಕೆಯ ಮಂಜೂಷವು ಆ ಊರೊಳಗಿತ್ತು;
28 ಆರೋನನ ಮೊಮ್ಮಗನೂ, ಎಲ್ಲಾಜಾರನ ಮಗನೂ ಆದ ಫೀನೆಹಾಸನು ಯಾಜಕಸೇವೆಮಾಡುತ್ತಿದ್ದನು. ಹೀಗಿರುವುದರಿಂದ ಇಸ್ರಾಯೇಲ್ಯರು, “ನಾವು ನಮ್ಮ ಬಂಧುಗಳಾದ ಬೆನ್ಯಾಮೀನ್ಯರೊಡನೆ ಯುದ್ಧಕ್ಕೆ ಹೋಗಬೇಕೋ, ಬೇಡವೋ?” ಎಂದು ಯೆಹೋವನನ್ನು ಕೇಳಿದರು. ಆತನು ಅವರಿಗೆ, “ಹೋಗಿರಿ, ನಾಳೆ ಅವರನ್ನು ನಿಮ್ಮ ಕೈಗೆ ಒಪ್ಪಿಸುವೆನು” ಅಂದನು.
29 ಆಗ ಇಸ್ರಾಯೇಲ್ಯರು ಗಿಬೆಯದ ಸುತ್ತಲೂ ಕೆಲವರನ್ನು ಹೊಂಚು ಹಾಕುವುದಕ್ಕೆ ಇರಿಸಿ,
30 ಉಳಿದವರು ಬೆನ್ಯಾಮೀನ್ಯರ ಸಂಗಡ ಕಾದಾಡುವುದಕ್ಕೋಸ್ಕರ ಮುಂಚಿನಂತೆ ಮೂರನೆಯ ದಿನದಲ್ಲಿಯೂ ಗಿಬೆಯದ ಸಮೀಪದಲ್ಲಿ ವ್ಯೂಹಕಟ್ಟಿದರು.
31 ಬೆನ್ಯಾಮೀನ್ಯರು ಇಸ್ರಾಯೇಲ್ಯರೊಡನೆ ಯುದ್ಧಮಾಡವುದಕ್ಕಾಗಿ ಪಟ್ಟಣವನ್ನು ಬಿಟ್ಟು ಊರೊಳಕ್ಕೆ ಬಂದರು. ಅವರು ಮೊದಲಿನಂತೆ ಜನರನ್ನು ಕೊಲ್ಲುವುದಕ್ಕೆ ಪ್ರಾರಂಭಿಸಿ ಬೇತೇಲಿಗೂ, ಬೈಲಿನಲ್ಲಿರುವ ಗಿಬೆಯಕ್ಕೂ ಹೋಗುವ ರಾಜಮಾರ್ಗಗಳಲ್ಲಿ ಸುಮಾರು ಮೂವತ್ತು ಮಂದಿಯನ್ನು ಹತಮಾಡಿದರು.
32 ಬೆನ್ಯಾಮೀನ್ಯರು, “ಅವರು ಮುಂಚಿನಂತೆ ಈಗಲೂ ಸೋತುಹೋಗುತ್ತಾರೆ” ಎಂದು ಅಂದುಕೊಂಡರು. ಇಸ್ರಾಯೇಲ್ಯರಾದರೋ, “ಅವರು ತಮ್ಮ ಪಟ್ಟಣಕ್ಕೆ ದೂರವಾಗುವಂತೆ ನಾವು ಸ್ವಲ್ಪ ದೂರ ಓಡಿಹೋಗೋಣ” ಎಂದು ಮಾತನಾಡಿಕೊಂಡು,
33 ತಾವು ಮೊದಲು ನಿಂತ ಸ್ಥಳದಿಂದ ಓಡತೊಡಗಿದರು. ಬಾಳ್‌ತಾಮರಿಗೆ ಮುಟ್ಟಿದ ಕೂಡಲೆ ಅಲ್ಲಿ ನಿಂತು ತಿರುಗಿ ಯುದ್ಧವನ್ನು ಪ್ರಾರಂಭಿಸಿದರು. ಅಷ್ಟರಲ್ಲಿ ಹೊಂಚಿ ನೋಡುತ್ತಿದ್ದವರು ತಾವು ಅಡಗಿಕೊಂಡಿದ್ದ ಗಿಬೆಯದ ಮೈದಾನದಿಂದ ಎದ್ದು
34 ಪಟ್ಟಣದ ಮುಂದೆ ಬಂದರು; ಅವರು ಸುಮಾರು ಹತ್ತು ಸಾವಿರ ಮಂದಿ ಯುದ್ಧವೀರರು. ಯುದ್ಧವು ಬಹುಘೋರವಾಯಿತು. ತಮಗೆ ಅಪಾಯವು ಒದಗಿ ಬಂದಿದೆ ಎಂಬುದು ಬೆನ್ಯಾಮೀನ್ಯರಿಗೆ ಇನ್ನೂ ಗೊತ್ತಾಗಿರಲಿಲ್ಲ.
ನ್ಯಾಯ 20 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019