5ವಕ್ರಬುದ್ಧಿಯುಳ್ಳವನ ಮಾರ್ಗದಲ್ಲಿ ಮುಳ್ಳುಗಳೂ, ಉರುಲುಗಳೂ ತುಂಬಿವೆ, ತನ್ನನ್ನು ರಕ್ಷಿಸಿಕೊಳ್ಳುವವನು ಅವುಗಳಿಗೆ ದೂರವಾಗಿರುವನು.
6ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಮಕ್ಕಳನ್ನು ಶಿಕ್ಷಿಸು, ಮುಪ್ಪಿನಲ್ಲಿಯೂ ಓರೆಯಾಗರು.
7ಬಲ್ಲಿದನು ಬಡವನಿಗೆ ಒಡೆಯ, ಸಾಲಗಾರನು ಸಾಲಕೊಟ್ಟವನಿಗೆ ಸೇವಕ.
8ಕೆಟ್ಟತನವನ್ನು ಬಿತ್ತುವವನು ಕೇಡನ್ನೇ ಕೊಯ್ಯುವನು, ಹೆಮ್ಮೆಯಿಂದ ಹಿಡಿದ ದಂಡವು ಅವನ ಕೈಯಿಂದ ಬಿದ್ದುಹೋಗುವುದು.
9ದಯಾದೃಷ್ಟಿಯವನು ಆಶೀರ್ವಾದವನ್ನು ಪಡೆಯುವನು, ತನ್ನ ಆಹಾರವನ್ನು ಬಡವರಿಗೆ ಕೊಡುತ್ತಾನಲ್ಲವೆ.
10ಧರ್ಮನಿಂದಕನನ್ನು ಓಡಿಸಿಬಿಟ್ಟರೆ ಜಗಳವು ತೊಲಗುವುದು, ಹೌದು, ವ್ಯಾಜ್ಯವು ತೀರಿ ಅವಮಾನವು ಇಲ್ಲವಾಗುವುದು.
11ಹೃದಯಶುದ್ಧಿಯನ್ನು ಅಪೇಕ್ಷಿಸುವ ಮತ್ತು ಸವಿಮಾತನಾಡುವ ಮನುಷ್ಯನಿಗೆ ರಾಜನ ಸ್ನೇಹವು ದೊರೆಯುವುದು.
12ಯೆಹೋವನ ಕಣ್ಣು ತಿಳಿವಳಿಕೆಗೆ ಕಾವಲು, ಆತನು ವಂಚಕನ ಮಾತುಗಳನ್ನು ಕೆಡವಿಬಿಡುವನು.
13“ಹೊರಗೆ ಸಿಂಹವಿದೆ, ನನ್ನನ್ನು ಬೀದಿಯಲ್ಲಿ ಕೊಂದ್ದಿತು” ಎಂಬುದು ಸೋಮಾರಿಯ ನೆವ.