4 ಬದಲಾಗಿ, “ನಿನ್ನ ಮಾತಿನಲ್ಲೇ ನೀನು ನೀತಿವಂತನೆಂದು ವ್ಯಕ್ತವಾಗಬೇಕು, ವ್ಯಾಜ್ಯವೆದ್ದಾಗ ನೀನು ವಿಜಯಶಾಲಿ ಆಗಬೇಕು.” ಎಂದು ಗ್ರಂಥಗಳಲ್ಲಿ ಬರೆದಿರುವ ಹಾಗೆಯೇ, ಎಲ್ಲಾ ಮಾನವರು ಸುಳ್ಳುಗಾರರಾದರೂ, ದೇವರು ಮಾತ್ರ ಸತ್ಯವಂತನೇ.
5 ಆದರೆ ನಮ್ಮ ಅನ್ಯಾಯದ ನಡವಳಿಕೆಯಿಂದ ದೇವರು ನೀತಿವಂತನೆಂದು ಪ್ರಸಿದ್ಧಿಗೆ ಬರುವುದಾದರೆ ನಾವು ಏನು ಹೇಳೋಣ? ಉಗ್ರದಂಡನೆಯನ್ನು ಮಾಡುವ ದೇವರು ಅನ್ಯಾಯಗಾರನೋ? ಎಂದಿಗೂ ಇಲ್ಲ. ಈ ಮಾತನ್ನು ಮನುಷ್ಯನ ರೀತಿಯಲ್ಲಿ ಆಡುತ್ತಿದ್ದೇನೆ.
6 ದೇವರು ಅನ್ಯಾಯಗಾರನಾಗಿದ್ದರೆ ಲೋಕಕ್ಕೆ ನ್ಯಾಯ ತೀರ್ಪಾಗುವುದಾದರೂ ಹೇಗೆ?
7 ನನ್ನ ಸುಳ್ಳಿನಿಂದ ದೇವರ ಸತ್ಯವು ಪ್ರಸಿದ್ಧಿಗೆ ಬಂದು ಆತನ ಮಹಿಮೆ ಹೆಚ್ಚಾಗುವುದಾದರೆ ಇನ್ನು ನನ್ನನ್ನು ಪಾಪಿಯೆಂದು ಪರಿಗಣಿಸುವುದು ಯಾಕೆ?
8 “ಒಳ್ಳೆಯದಾಗುವಂತೆ, ಕೆಟ್ಟದ್ದನ್ನೇ ಏಕೆ ಮಾಡಬಾರದು?” ಈ ರೀತಿ ಸ್ವತಃ ನಾನೇ ಬೋಧಿಸುತ್ತಿರುವುದಾಗಿ ಕೆಲವರು ನನ್ನನ್ನು ದೂಷಿಸಿ ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಅಂಥವರಿಗೆ ತಕ್ಕ ಶಿಕ್ಷೆಯಾಗುವುದು ನ್ಯಾಯಸಮ್ಮತವಾದುದು.
9 ಹಾಗಾದರೆ ಏನು ಹೇಳಬೇಕು? ನಾವು ಅನ್ಯರಿಗಿಂತ ಶ್ರೇಷ್ಠರೋ? ಎಷ್ಟು ಮಾತ್ರಕ್ಕೂ ಇಲ್ಲ. ಯೆಹೂದ್ಯರೇ ಆಗಲಿ ಗ್ರೀಕರೇ ಆಗಲಿ ಎಲ್ಲರೂ ಪಾಪಕ್ಕೆ ಒಳಗಾಗಿ ಅಪರಾಧಿಗಳಾಗಿದ್ದಾರೆಂದು ಮೊದಲೇ ತೋರಿಸಿಕೊಟ್ಟಿದ್ದೇವಲ್ಲಾ.
10 ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ, “ನೀತಿವಂತನು ಇಲ್ಲ, ಒಬ್ಬನಾದರೂ ಇಲ್ಲ;
11 ತಿಳಿವಳಿಕೆಯುಳ್ಳವನು ಇಲ್ಲ, ದೇವರನ್ನು ಹುಡುಕುವವನು ಇಲ್ಲ.
12 ಎಲ್ಲರೂ ದಾರಿತಪ್ಪಿ ನಡೆಯುತ್ತಾ, ಕೆಟ್ಟುಹೋಗಿದ್ದಾರೆ. ಒಳ್ಳೆಯದನ್ನು ಮಾಡುವವನು ಇಲ್ಲ, ಒಬ್ಬನಾದರೂ ಇಲ್ಲ.
13 ಅವರ ಗಂಟಲು ತೆರೆದಿರುವ ಸಮಾಧಿಯಾಗಿದೆ. ಅವರು ನಾಲಿಗೆಯಿಂದ ವಂಚನೆಯ ಮಾತುಗಳನ್ನಾಡುತ್ತಾರೆ. ಅವರ ತುಟಿಯ ಹಿಂದೆ ಹಾವಿನ ವಿಷವಿದೆ.
14 ಅವರ ಬಾಯಿ ಶಾಪದಿಂದಲೂ ಕ್ರೋಧದ ಮಾತುಗಳಿಂದಲೂ, ತುಂಬಿದೆ.
15 ಅವರ ಕಾಲುಗಳು ರಕ್ತವನ್ನು ಸುರಿಸಲು ಆತುರಪಡುತ್ತವೆ.
16 ಅವರು ಹೋದ ದಾರಿಗಳಲ್ಲಿ ನಾಶಸಂಕಟಗಳು ಪೀಡೆಗಳು ಉಂಟಾಗುತ್ತವೆ.
17 ಸಮಾಧಾನದ ಮಾರ್ಗವನ್ನೇ ಅರಿಯರು.
18 ಅವರ ದೃಷ್ಟಿಯಲ್ಲಿ ದೇವರ ಭಯವೇ ಇಲ್ಲ” ಎಂದು ಹೀಗೆ ಬರೆದಿದೆಯಲ್ಲಾ.
19 ಧರ್ಮಶಾಸ್ತ್ರದ ನುಡಿಗಳೆಲ್ಲವು ಆ ಶಾಸ್ತ್ರಕ್ಕೆ ಒಳಗಾದವರಿಗೆ ಹೇಳಿವೆಯೆಂದು ಬಲ್ಲೆವಷ್ಟೆ. ಹೀಗೆ ಎಲ್ಲರ ಬಾಯಿ ಕಟ್ಟಿಹೋಗುವುದು. ಲೋಕವೆಲ್ಲಾ ದೇವರ ಮುಂದೆ ಅಪರಾಧಿಯಾಗಿ ನಿಲ್ಲುವುದು.
20 ಯಾಕೆಂದರೆ ಯಾವ ಮನುಷ್ಯನಾದರೂ ನೇಮನಿಷ್ಠೆಗಳನ್ನು ಅನುಸರಿಸಿ ದೇವರ ಸನ್ನಿಧಿಯಲ್ಲಿ ನೀತಿವಂತನೆಂದು ನಿರ್ಣಯಿಸಲ್ಪಡುವುದಿಲ್ಲ. ಧರ್ಮಶಾಸ್ತ್ರದಿಂದ ಪಾಪದ ಅರಿವು ಉಂಟಾಗುತ್ತದಷ್ಟೆ.
21 ಈಗಲಾದರೋ ದೇವರಿಂದ ದೊರಕುವ ನೀತಿಯು ನಂಬುವವರೆಲ್ಲರಿಗೆ ಧರ್ಮಶಾಸ್ತ್ರ ನಿಯಮಗಳಿಲ್ಲದೆ ಪ್ರಕಟವಾಗಿದೆ. ಅದು ಮೋಶೆಯ ಧರ್ಮಶಾಸ್ತ್ರದಿಂದಲೂ ಪ್ರವಾದಿಗಳ ನುಡಿಗಳಿಂದಲೂ ಸಾಕ್ಷಿಗೊಂಡಿರುತ್ತವೆ.
22 ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವುದರ ಮೂಲಕವೇ ವಿಶ್ವಾಸಿಗಳೆಲ್ಲರಿಗೆ ದೇವರ ನೀತಿಯು ಉಂಟಾಗುತ್ತದೆ. ಇದರಲ್ಲಿ ಯಾವ ತಾರತಮ್ಯವನ್ನು ಮಾಡುವುದಿಲ್ಲ.
23 ಎಲ್ಲರೂ ಪಾಪ ಮಾಡಿ ದೇವರ ಮಹಿಮೆಯನ್ನು ಹೊಂದದೇ ಹೋಗಿದ್ದಾರೆ.
24 ಅವರು ನೀತಿವಂತರೆಂದು ನಿರ್ಣಯ ಹೊಂದುವುದು ದೇವರ ಉಚಿತಾರ್ಥವಾದ ಕೃಪೆಯಿಂದಲೇ ಅದು ಕ್ರಿಸ್ತ ಯೇಸುವಿನಿಂದಾದ ಪಾಪ ವಿಮೋಚನೆಯ ಮೂಲಕವಾಗಿ ಆಗುವುದು.
25 ಪೂರ್ವ ಕಾಲದಲ್ಲಿ ಮಾನವರ ಪಾಪವನ್ನು ದಂಡಿಸದೆ ತಾಳ್ಮೆಯಿಂದಿದ್ದ ದೇವರು, ನಂಬಿಕೆಯುಳ್ಳವರಿಗೆ ಪಾಪಕ್ಷಮೆಯನ್ನು ತರುವ ಸಲುವಾಗಿ ಯೇಸುಕ್ರಿಸ್ತನನ್ನು ರಕ್ತಧಾರೆ ಎರೆಯುವಂತೆ ಮಾಡಿದನು.