9 ಅದನ್ನು ಅವರು ಕೇಳಿ ಹಿರಿಯರು ಮೊದಲುಗೊಂಡು ಎಲ್ಲರೂ ಒಬ್ಬೊಬ್ಬರಾಗಿ ಹೊರಟು ಹೋದರು; ಆಗ ಯೇಸು ಒಬ್ಬನೇ ಉಳಿದನು. ಆ ಸ್ತ್ರೀಯು ಅಲ್ಲಿಯೇ ನಿಂತಿದ್ದಳು.
10 ಯೇಸು ನೆಟ್ಟಗೆ ಕುಳಿತುಕೊಂಡು ಆಕೆಗೆ, “ಸ್ತ್ರೀಯೇ, ಅವರು ಎಲ್ಲಿಗೆ ಹೋದರು? ನಿನ್ನನ್ನು ಖಂಡಿಸುವುದಕ್ಕೆ ಯಾರೂ ಉಳಿಯಲಿಲ್ಲವೋ?” ಎಂದನು.
11 ಅದಕ್ಕೆ ಆಕೆಯು “ಕರ್ತನೇ, ಯಾರೂ ಶಿಕ್ಷೆ ವಿಧಿಸಲಿಲ್ಲ” ಎಂದಳು. ಯೇಸು ಆಕೆಗೆ “ನಾನೂ ಸಹ ನಿನ್ನನ್ನು ಶಿಕ್ಷೆ ವಿಧಿಸುವುದಿಲ್ಲ, ಹೋಗು, ಇನ್ನು ಮುಂದೆ ಪಾಪಮಾಡಬೇಡ” ಎಂದು ಹೇಳಿದನು.
12 ಯೇಸು ಪುನಃ ಜನರೊಂದಿಗೆ ಮಾತನಾಡುತ್ತಾ, “ನಾನೇ ಲೋಕದ ಬೆಳಕಾಗಿದ್ದೇನೆ. ನನ್ನನ್ನು ಹಿಂಬಾಲಿಸುವವನು ಎಂದಿಗೂ ಕತ್ತಲೆಯಲ್ಲಿ ನಡೆಯುವುದಿಲ್ಲ, ಆದರೆ ಅವನು ಜೀವದ ಬೆಳಕನ್ನು ಹೊಂದಿರುವನು” ಎಂದು ಹೇಳಿದನು.
13 ಫರಿಸಾಯರು ಆತನಿಗೆ “ನಿನ್ನ ವಿಷಯವಾಗಿ ನೀನೇ ಸಾಕ್ಷಿ ಹೇಳುತ್ತಿರುವೆ, ನಿನ್ನ ಸಾಕ್ಷಿಯು ನಿಜವಲ್ಲ” ಎಂದು ಹೇಳಲು
14 ಯೇಸು ಅವರಿಗೆ “ನನ್ನ ವಿಷಯವಾಗಿ ನಾನು ಸಾಕ್ಷಿನೀಡಿದರೂ, ನನ್ನ ಸಾಕ್ಷಿ ಸತ್ಯವಾದದ್ದು. ನಾನು ಎಲ್ಲಿಂದ ಬಂದೆ ಮತ್ತು ಎಲ್ಲಿಗೆ ಹೋಗುತ್ತೇನೆ ಎಂದು ನನಗೆ ತಿಳಿದಿದೆ, ಆದರೆ ನಾನು ಎಲ್ಲಿಂದ ಬಂದೆನೋ ಇಲ್ಲವೆ ಎಲ್ಲಿಗೆ ಹೋಗುತ್ತೇನೋ ಎಂಬುದು ನಿಮಗೆ ತಿಳಿಯದು.
15 ನೀವು ಶಾರೀರಿಕ ರೀತಿಯಲ್ಲಿ ತೀರ್ಪು ಮಾಡುತ್ತೀರಿ, ನಾನು ಯಾರಿಗೂ ತೀರ್ಪು ಮಾಡುವುದಿಲ್ಲ.
16 ನಾನು ತೀರ್ಪು ಮಾಡಿದರೂ ನನ್ನ ತೀರ್ಪು ಸತ್ಯವಾದದ್ದೇ. ಏಕೆಂದರೆ ನಾನು ಒಬ್ಬಂಟಿಗನಲ್ಲ, ನನ್ನನ್ನು ಕಳುಹಿಸಿಕೊಟ್ಟ ನನ್ನ ತಂದೆಯೂ ನನ್ನ ಜೊತೆಯಲ್ಲಿ ಇದ್ದಾನೆ.
17 ಇಬ್ಬರ ಸಾಕ್ಷಿಯು ಸತ್ಯವಾದದ್ದು ಎಂದು ನಿಮ್ಮ ಧರ್ಮಶಾಸ್ತ್ರದಲ್ಲಿಯೇ ಬರೆದಿದೆ.
18 ನನ್ನ ವಿಷಯವಾಗಿ ಸಾಕ್ಷಿ ನೀಡುವವನು ನಾನೇ ಮತ್ತು ನನ್ನನ್ನು ಕಳುಹಿಸಿದ ತಂದೆಯೂ ನನ್ನ ವಿಷಯವಾಗಿ ಸಾಕ್ಷಿ ನೀಡುತ್ತಾನೆ” ಎಂದನು.
19 ಅವರು, “ನಿನ್ನ ತಂದೆ ಎಲ್ಲಿದ್ದಾನೆ?” ಎಂದರು. ಅದಕ್ಕೆ ಯೇಸು, “ನೀವು ನನ್ನನ್ನೂ ತಿಳಿದಿಲ್ಲ ಹಾಗೂ ನನ್ನ ತಂದೆಯನ್ನೂ ತಿಳಿದಿಲ್ಲ. ನೀವು ನನ್ನನ್ನು ತಿಳಿದಿದ್ದರೆ ನನ್ನ ತಂದೆಯನ್ನೂ ಸಹ ತಿಳಿದಿರುವಿರಿ” ಎಂದು ಉತ್ತರ ಕೊಟ್ಟನು.
20 ಯೇಸು ದೇವಾಲಯದ ಕಾಣಿಕೆಯ ಪೆಟ್ಟಿಗೆಗಳು ಇರುವ ಸ್ಥಳದಲ್ಲಿ ಬೋಧನೆ ಮಾಡುತ್ತಿರುವಾಗ ಈ ಮಾತುಗಳನ್ನು ಹೇಳಿದನು. ಆದರೆ ಆತನ ಸಮಯ ಇನ್ನೂ ಬಾರದೆ ಇದ್ದ ಕಾರಣ ಯಾರೂ ಆತನನ್ನು ಬಂಧಿಸಲಿಲ್ಲ.
21 ಯೇಸು ತಿರುಗಿ ಅವರಿಗೆ, “ನಾನು ಹೋಗುತ್ತೇನೆ, ನೀವು ನನ್ನನ್ನು ಹುಡುಕುವಿರಿ ಮತ್ತು ನೀವು ನಿಮ್ಮ ಪಾಪದಲ್ಲೇ ಸಾಯುವಿರಿ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ” ಎಂದನು.
22 ಅದಕ್ಕೆ ಯೆಹೂದ್ಯರು, “ನಾವು ಹೋಗುವಲ್ಲಿಗೆ ನೀವು ಬರಲಾರಿರೆಂದು ಹೇಳುತ್ತಾನಲ್ಲಾ? ಇವನು ತನ್ನನ್ನು ತಾನೇ ಕೊಂದುಕೊಳ್ಳಬೇಕೆಂದಿದ್ದಾನೋ?” ಎಂದು ಮಾತನಾಡಿಕೊಂಡರು.
23 ಆತನು ಅವರಿಗೆ, “ನೀವು ಕೆಳಗಿನವರು; ನಾನು ಮೇಲಿನಿಂದ ಬಂದವನು. ನೀವು ಈ ಲೋಕದವರು; ನಾನು ಈ ಲೋಕದವನಲ್ಲ.
24 ಆದುದರಿಂದ ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರೆಂದು ನಿಮಗೆ ನಾನು ಹೇಳಿದೆನು. ನೀವುನನ್ನನ್ನು ಯಾರೆಂದು ನಂಬದೆ ಹೋದರೆ ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ” ಎಂದು ಹೇಳಿದನು.
25 ಆಗ ಅವರು ಆತನಿಗೆ, “ನೀನು ಯಾರು?” ಎನ್ನಲೂ, ಯೇಸು ಅವರಿಗೆ, “ಮೊದಲಿನಿಂದಲೇನಾನು ನಿಮಗೆ ಹೇಳಿದಂಥದ್ದೇ.
26 ನಿಮ್ಮ ವಿಷಯವಾಗಿ ಮಾತನಾಡುವುದಕ್ಕೂ, ನಿಮ್ಮ ಮೇಲೆ ತೀರ್ಪು ಮಾಡುವುದಕ್ಕೂ ಅನೇಕ ಸಂಗತಿಗಳು ನನಗುಂಟು. ಆದರೆ ನನ್ನನ್ನು ಕಳುಹಿಸಿ ಕೊಟ್ಟಾತನು ಸತ್ಯವಂತನು. ಆತನಿಂದ ನಾನು ಕೇಳಿದವುಗಳನ್ನೇ ಲೋಕಕ್ಕೆ ಹೇಳುತ್ತೇನೆ” ಎಂದನು.
27 ಆತನು ತಂದೆಯ ಕುರಿತಾಗಿ ಅವರೊಂದಿಗೆ ಮಾತನಾಡಿದನೆಂದು ಅವರು ಗ್ರಹಿಸಲಿಲ್ಲ.
28 ಹೀಗಿರಲಾಗಿ ಯೇಸು ಅವರಿಗೆ, “ನೀವು ಮನುಷ್ಯಕುಮಾರನನ್ನು ಮೇಲಕ್ಕೆತ್ತಿದಾಗ, ನಾನೇ ಆತನೆಂದೂ, ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನೆಂದು ನೀವು ತಿಳಿದುಕೊಳ್ಳುವಿರಿ. ಆದರೆ ನನ್ನ ತಂದೆಯು ನನಗೆ ಬೋಧಿಸಿದ ಸಂಗತಿಗಳನ್ನೇ ಮಾತನಾಡುತ್ತೇನೆ.
29 ನನ್ನನ್ನು ಕಳುಹಿಸಿಕೊಟ್ಟಾತನು ನನ್ನ ಸಂಗಡ ಇದ್ದಾನೆ. ನಾನು ಆತನಿಗೆ ಮೆಚ್ಚಿಕೆಯಾದದ್ದನ್ನು ಯಾವಾಗಲೂ ಮಾಡುವುದರಿಂದ, ಆತನು ನನ್ನನ್ನು ಒಬ್ಬಂಟಿಗನಾಗಿ ಬಿಡುವುದಿಲ್ಲ” ಎಂದನು.
30 ಆತನು ಈ ಮಾತುಗಳನ್ನು ಹೇಳುತ್ತಿದ್ದಾಗಲೇ ಅನೇಕರು ಆತನಲ್ಲಿ ನಂಬಿಕೆಯಿಟ್ಟರು.
31 ಆಗ ಯೇಸು ತನ್ನನ್ನು ನಂಬಿದ ಯೆಹೂದ್ಯರಿಗೆ, “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡಿರುವುದಾದರೆ, ನಿಜವಾಗಿಯೂ ನೀವು ನನ್ನ ಶಿಷ್ಯರಾಗಿರುವಿರಿ.
32 ಇದಲ್ಲದೆ ನೀವು ಸತ್ಯವನ್ನು ತಿಳಿದುಕೊಳ್ಳುವಿರಿ ಮತ್ತು ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವುದು” ಎಂದು ಹೇಳಿದನು.
33 ಅದಕ್ಕವರು ಆತನಿಗೆ, “ನಾವು ಅಬ್ರಹಾಮನ ಸಂತಾನದವರು ಮತ್ತು ನಾವು ಎಂದೂ ಯಾರಿಗೂ ದಾಸರಾಗಿಲ್ಲ, ನಿಮಗೆ ಬಿಡುಗಡೆಯಾಗುವುದೆಂದು ನೀನು ಹೇಳುವುದಾದರೂ ಹೇಗೆ?” ಎಂದು ಪ್ರಶ್ನಿಸಿದರು.
34 ಅದಕ್ಕೆ ಯೇಸು, “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಪಾಪ ಮಾಡುವವರೆಲ್ಲರು ಪಾಪಕ್ಕೆ ದಾಸರಾಗಿದ್ದಾರೆ.
35 ದಾಸನು ಮನೆಯಲ್ಲಿ ಶಾಶ್ವತವಾಗಿ ಇರುವುದಿಲ್ಲ, ಆದರೆ ಮಗನು ಶಾಶ್ವತವಾಗಿ ಇರುತ್ತಾನೆ.
36 ಆದುದರಿಂದ ಮಗನು ನಿಮ್ಮನ್ನು ಬಿಡುಗಡೆ ಮಾಡಿದರೆ, ನಿಜವಾಗಿಯೂ ನಿಮಗೆ ಬಿಡುಗಡೆಯಾಗುವುದು.
37 ನೀವು ಅಬ್ರಹಾಮನ ಸಂತಾನದವರೆಂದು ನಾನು ಬಲ್ಲೆನು, ಆದರೂ ನನ್ನ ವಾಕ್ಯಕ್ಕೆ ನಿಮ್ಮಲ್ಲಿ ಸ್ಥಳವಿಲ್ಲದ ಕಾರಣ ನೀವು ನನ್ನನ್ನು ಕೊಲ್ಲುವುದಕ್ಕೆ ನೋಡುತ್ತಿದ್ದೀರಿ.
38 ನಾನುತಂದೆಯ ಬಳಿಯಲ್ಲಿ ನೋಡಿದ್ದನ್ನೇ ಮಾತನಾಡುತ್ತೇನೆ, ನೀವು ತಂದೆಯಿಂದ ಕೇಳಿದ್ದನ್ನೇ ಮಾಡಿರಿ” ಎಂದನು.
39 ಅದಕ್ಕೆ ಅವರು, “ನಮ್ಮ ತಂದೆಯು ಅಬ್ರಹಾಮನೇ” ಎಂದರು. ಅದಕ್ಕೆ ಯೇಸು ಅವರಿಗೆ, “ನೀವು ಅಬ್ರಹಾಮನ ಮಕ್ಕಳಾಗಿದ್ದರೆ, ಅಬ್ರಹಾಮನು ಮಾಡಿದಂಥ ಕೃತ್ಯಗಳನ್ನು ಮಾಡುತ್ತಿದ್ದೀರಿ.
40 ಆದರೂ, ನೀವು ಹಾಗೆ ಮಾಡದೇ ದೇವರಿಂದ ಕೇಳಿದ ಸತ್ಯವನ್ನು ನಿಮಗೆ ಹೇಳಿದವನಾದ ನನ್ನನ್ನು ಕೊಲ್ಲುವುದಕ್ಕೆ ಹುಡುಕುತ್ತಿದ್ದೀರಿ. ಅಬ್ರಹಾಮನು ಹೀಗೆ ಮಾಡಲಿಲ್ಲ.
41 ನೀವು ನಿಮ್ಮ ತಂದೆಯ ಕಾರ್ಯಗಳನ್ನು ಮಾಡುತ್ತಿದ್ದೀರಿ” ಎಂದನು. ಅದಕ್ಕವರು, “ನಾವು ವ್ಯಭಿಚಾರದಿಂದ ಹುಟ್ಟಿದವರಲ್ಲ. ನಮಗೆ ಒಬ್ಬನೇ ತಂದೆ, ಆತನು ದೇವರೇ” ಎಂದರು.
42 ಯೇಸು ಅವರಿಗೆ, “ದೇವರು ನಿಮಗೆ ತಂದೆಯಾಗಿದ್ದರೆ, ನೀವು ನನ್ನನ್ನು ಪ್ರೀತಿಸುತ್ತಿದ್ದಿರಿ, ಏಕೆಂದರೆ ನಾನು ದೇವರಿಂದಲೇ ಹೊರಟು ಲೋಕಕ್ಕೆ ಬಂದವನಾಗಿದ್ದೇನೆ. ನನ್ನಷ್ಟಕ್ಕೆ ನಾನೇ ಬರಲಿಲ್ಲ, ಆದರೆ ದೇವರೇ ನನ್ನನ್ನು ಕಳುಹಿಸಿದ್ದಾನೆ.
43 ನೀವು ನನ್ನ ಮಾತನ್ನು ಯಾಕೆ ಗ್ರಹಿಸುತ್ತಿಲ್ಲ? ಏಕೆಂದರೆ ನೀವು ನನ್ನ ವಾಕ್ಯಕ್ಕೆ ಕಿವಿಗೊಡದೆ ಇರುವುದರಿಂದಲೇ.
44 ಸೈತಾನನು ನಿಮ್ಮ ತಂದೆ, ನೀವು ಆತನಿಗೆ ಸೇರಿದವರಾಗಿದ್ದು ನಿಮ್ಮ ತಂದೆಯ ದುರಾಶೆಗಳನ್ನೇ ನೀವು ಮಾಡಬಯಸುತ್ತೀರಿ. ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯದಲ್ಲಿ ನೆಲೆಗೊಂಡಿಲ್ಲ. ಏಕೆಂದರೆ ಅವನಲ್ಲಿ ಸತ್ಯವೇ ಇಲ್ಲ. ಅವನು ತನ್ನ ಸ್ವಭಾವಕ್ಕನುಸಾರವಾಗಿ ಸುಳ್ಳಾಡುತ್ತಾನೆ, ಏಕೆಂದರೆ ಅವನು ಸುಳ್ಳುಗಾರನೂ ಮತ್ತು ಸುಳ್ಳಿನ ತಂದೆಯೂ ಆಗಿದ್ದಾನೆ.
45 ಆದರೂ, ನಾನು ಸತ್ಯವನ್ನು ಹೇಳುವವನಾಗಿದ್ದರೂ ನೀವು ನನ್ನನ್ನು ನಂಬುವುದಿಲ್ಲ.
46 ನನ್ನಲ್ಲಿ ಪಾಪವಿದೆಯೆಂದು ಸಮರ್ಥಿಸಬಲ್ಲವರು ನಿಮ್ಮಲ್ಲಿ ಯಾರಿದ್ದಾರೆ? ನಾನು ಸತ್ಯವನ್ನೇ ಹೇಳುವುದಾದರೆ, ನೀವು ನನ್ನನ್ನು ಯಾಕೆ ನಂಬುವುದಿಲ್ಲ?
47 ದೇವರಿಗೆ ಸೇರಿದವನು ದೇವರ ವಾಕ್ಯಕ್ಕೆ ಕಿವಿಗೊಡುತ್ತಾನೆ. ನೀವು ದೇವರಿಗೆ ಸೇರಿದವರಲ್ಲದ ಕಾರಣ ನೀವು ದೇವರ ವಾಕ್ಯಕ್ಕೆ ಕಿವಿಗೊಡುವುದಿಲ್ಲ” ಎಂದು ಹೇಳಿದನು.
48 ಅದಕ್ಕೆ ಯೆಹೂದ್ಯರು, “ನೀನು ಸಮಾರ್ಯದವನು ಮತ್ತು ನಿನಗೆ ದೆವ್ವಹಿಡಿದಿದೆ ಎಂದು ನಾವು ಹೇಳುವುದು ಸರಿಯಲ್ಲವೋ?” ಎಂದು ಕೇಳಿದರು.
49 ಅದಕ್ಕೆ ಯೇಸು; “ನನಗೆ ದೆವ್ವ ಹಿಡಿದಿಲ್ಲ. ನಾನು ನನ್ನ ತಂದೆಯನ್ನು ಗೌರವಿಸುತ್ತೇನೆ, ಆದರೆ ನೀವು ನನಗೆ ಅವಮಾನಪಡಿಸುತ್ತೀದ್ದಿರಿ.
50 ನಾನು ನನ್ನ ಮಹಿಮೆಯನ್ನು ಹುಡುಕುವುದಿಲ್ಲ, ಮಹಿಮೆಯನ್ನು ಹುಡುಕುವಾತನು ಒಬ್ಬನಿದ್ದಾನೆ, ಆತನೇ ನ್ಯಾಯಾಧಿಪತಿ.
51 ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಯಾವನಾದರೂ ನನ್ನ ವಾಕ್ಯಕ್ಕೆ ವಿಧೇಯನಾದರೆ ಅವನು ನಿತ್ಯಮರಣವನ್ನು ಅನುಭವಿಸುವುದಿಲ್ಲ” ಅಂದನು.