17 “ನೀನು ಆರೋನನಿಗೆ ಹೀಗೆ ಆಜ್ಞಾಪಿಸು, ‘ನಿನ್ನ ಸಂತತಿಯವರ ಎಲ್ಲಾ ತಲಾಂತರಗಳಲ್ಲಿಯೂ ಯಾವ ಅಂಗವಿಕಲನೂ ದೇವರ ಆಹಾರವನ್ನು ಸಮರ್ಪಿಸುವುದಕ್ಕೆ ನನ್ನ ಸನ್ನಿಧಿಗೆ ಬರಬಾರದು; ಅಂಗವಿಕಲನು ಈ ಕಾರ್ಯವನ್ನು ವಹಿಸಿಕೊಳ್ಳಲೇ ಬಾರದು.
18 ಅವನು ಕುರುಡನಾಗಲಿ, ಕುಂಟನಾಗಲಿ, ವಿಕಾರ ಮುಖವುಳ್ಳವನಾಗಲಿ,
19 ವಿಪರೀತ ಅವಯವಗಳುಳ್ಳವನಾಗಲಿ, ಕೈಕಾಲು ಮುರಿದವನಾಗಲಿ,
20 ಗೂನು ಇಲ್ಲವೇ ಕುಬ್ಜರಾಗಲಿ, ಹೂಗಣ್ಣ ಅಥವಾ ಕಾಯಿಗಣ್ಣನಾಗಲಿ, ಕಜ್ಜಿ, ತುರಿಗಳುಳ್ಳವನಾಗಲಿ,
21 ನಪುಂಸಕನಾಗಲಿ, ಬೇರೆ ಯಾವ ಕಳಂಕವಿದ್ದವನಾಗಲಿ ಯೆಹೋವನಿಗೆ ಹೋಮದ್ರವ್ಯಗಳನ್ನು ಸಮರ್ಪಿಸುವುದಕ್ಕೆ ಸನ್ನಿಧಿಗೆ ಬರಬಾರದು. ಅಂಥವನು ದೇಹದಲ್ಲಿ ದೋಷವಿರುವುದರಿಂದ ದೇವರ ಆಹಾರವನ್ನು ಸಮರ್ಪಿಸಲೇಬಾರದು.
22 ದೇವರಿಗೆ ನೈವೇದ್ಯವಾದ ಆಹಾರದಲ್ಲಿ ಪರಿಶುದ್ಧವಾದದ್ದನ್ನು ಮತ್ತು ಮಹಾಪರಿಶುದ್ಧವಾದುದನ್ನು ಅವನು ಊಟಮಾಡಬಹುದು.
23 ಅವನಿಗೆ ಕಳಂಕವಿರುವುದರಿಂದ ತೆರೆಯನ್ನು ದಾಟಿ ಒಳಗೆ ಬರಬಾರದು; ಯಜ್ಞವೇದಿಯ ಬಳಿಗೆ ಬರಬಾರದು; ನನ್ನ ಪವಿತ್ರಸ್ಥಾನಗಳ ಗೌರವಕ್ಕೆ ಅವನಿಂದ ಕುಂದು ಉಂಟಾಗಬಾರದು; ಆ ಸ್ಥಾನಗಳನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡ ಯೆಹೋವನು ನಾನು’” ಎಂದು ಹೇಳಿದನು.
24 ಮೋಶೆಯು ಆರೋನನಿಗೂ, ಅವನ ಮಕ್ಕಳಿಗೂ ಮತ್ತು ಇಸ್ರಾಯೇಲರೆಲ್ಲರಿಗೂ ಈ ಆಜ್ಞೆಗಳನ್ನು ತಿಳಿಸಿದನು.