Text copied!
Bibles in Kannada

ನ್ಯಾಯ 5:4-23 in Kannada

Help us?

ನ್ಯಾಯ 5:4-23 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 “ಯೆಹೋವನೇ, ನೀನು ಹೊರಟು ಎದೋಮ್ಯರ ಪ್ರಾಂತ್ಯವಾದ ಸೇಯೀರಿನ ಮಾರ್ಗವಾಗಿ ಪಯಣಮಾಡುತ್ತಾ ಬರುವಾಗ ಭೂಲೋಕವು ಕಂಪಿಸಿತು, ಆಕಾಶವು ನಡುಗಿತು; ಮೇಘಮಂಡಲವು ಮಳೆಗರೆಯಿತು.
5 ಯೆಹೋವನ ಮುಂದೆ ಪರ್ವತಗಳು ಕರಗಿಹೋದವು, ಇಸ್ರಾಯೇಲಿನ ದೇವರಾದ ಯೆಹೋವನ ಎದುರಿಗೆ ಆ ಸೀನಾಯಿಬೆಟ್ಟವೂ ನೀರಾಯಿತು.
6 “ಅನಾತನ ಮಗನಾದ ಶಮ್ಗರನ ಕಾಲದಲ್ಲಿಯೂ, ಯಾಯೇಲಳ ದಿನಗಳಲ್ಲಿಯೂ ರಾಜಮಾರ್ಗಗಳಲ್ಲಿ ಸಂಚಾರವು ನಿಂತುಹೋಯಿತು. ಪ್ರಯಾಣಿಕರು ಅಂಕುಡೊಂಕಾದ ದಾರಿಹಿಡಿದು ಹೋದರು.
7 ದೆಬೋರಳಾದ ನಾನು ಇಸ್ರಾಯೇಲರಲ್ಲಿ ತಾಯಿಯಂತೆ ಎದ್ದುಬರುವವರೆಗೆ ಇಸ್ರಾಯೇಲ್ ಗ್ರಾಮಗಳು ಹಾಳುಬಿದ್ದಿದ್ದವು.
8 ಜನರು ಅನ್ಯದೇವತೆಗಳನ್ನು ಆರಿಸಿಕೊಂಡಿದ್ದರು; ಯುದ್ಧವು ಉರುಬಾಗಿಲವರೆಗೂ ಬಂದಿತ್ತು. ಇಸ್ರಾಯೇಲರ ನಲ್ವತ್ತು ಸಾವಿರ ಸೈನಿಕರ ಮಧ್ಯದಲ್ಲಿ ಗುರಾಣಿ ಬರ್ಜಿಗಳು ಇರಲೇ ಇಲ್ಲ.
9 ನನ್ನ ಹೃದಯವು ಇಸ್ರಾಯೇಲರ ಸೇನಾಧಿಪತಿಗಳಲ್ಲಿಯೂ, ಸ್ವಇಚ್ಛೆಯಿಂದ ಸೈನ್ಯದಲ್ಲಿ ಸೇರಿದ ಜನರಲ್ಲಿಯೂ ಸಂತೋಷಿಸುತ್ತದೆ; ಅವರಿಗೋಸ್ಕರ ಯೆಹೋವನನ್ನು ಕೊಂಡಾಡುತ್ತೇವೆ.
10 “ಬಿಳೀ ಕತ್ತೆಗಳ ಮೇಲೆ ಸವಾರಿಮಾಡುವವರೇ, ರತ್ನಗಂಬಳಿಗಳ ಮೇಲೆ ಕುಳಿತುಕೊಳ್ಳುವವರೇ, ಕಾಲ್ನಡಿಗೆಯಲ್ಲಿ ಪ್ರಯಾಣಿಸುವವರೇ, ಗಾನಮಾಡಿರಿ.
11 ಸೇದುವ ಬಾವಿಗಳ ಬಳಿಯಲ್ಲಿ ಬಿಲ್ಲುಗಾರರ ಧ್ವನಿಗಿಂತ ಗಟ್ಟಿಯಾಗಿ ಯೆಹೋವನ ನೀತಿಸಾಧನೆಯ ವರ್ಣನೆಯನ್ನು ಕೇಳಿರಿ. ಆತನು ತನ್ನ ಪ್ರಜೆಗಳಾಗಿರುವ ಇಸ್ರಾಯೇಲ್ ಗ್ರಾಮಸ್ಥರ ನ್ಯಾಯವನ್ನು ಸ್ಥಾಪಿಸಿದ್ದಾನಲ್ಲಾ. ಆ ಕಾಲದಲ್ಲಿ ಯೆಹೋವನ ಜನರು ಊರುಬಾಗಿಲುಗಳಿಗೆ ಇಳಿದು ಬಂದರು.
12 ‘ಎಚ್ಚರವಾಗು, ದೆಬೋರಳೇ! ಎಚ್ಚರವಾಗು, ಎಚ್ಚರವಾಗು, ಎಚ್ಚರವಾಗಿ ಗಾನಮಾಡು. ಬಾರಾಕನೇ, ಏಳು; ಅಬೀನೋವಮನ ಮಗನೇ, ನೀನು ಸೆರೆಹಿಡಿದವರನ್ನು ಸಾಗಿಸಿಕೊಂಡು ಹೋಗು.’
13 “ಆಗ ಚದರಿಹೋದವರು ನಾಯಕರ ಬಳಿಗೆ ಕೂಡಿಬಂದರು. ಯೆಹೋವನ ಜನರು ವೀರರಾಗಿ ನನ್ನ ಸಹಾಯಕ್ಕೆ ನೆರೆದು ಬಂದರು.
14 ಅಮಾಲೇಕ್ಯರ ಪ್ರದೇಶದಲ್ಲಿ ನೆಲೆಗೊಂಡಿರುವ ಎಫ್ರಾಯೀಮ್ಯರೂ ಅವರ ಜೊತೆಯಲ್ಲಿ ಬೆನ್ಯಾಮೀನ್ಯರೂ ಬಂದರು. ಮಾಕೀರನ ಗೋತ್ರದಿಂದ ಪ್ರಧಾನರೂ ಜೆಬುಲೂನ್ ಕುಲದಿಂದ ದಂಡಧಾರಿಗಳಾದ ಸೇನಾನಾಯಕರೂ
15 ದೆಬೋರಳ ಜೊತೆಯಲ್ಲಿ ಇಸ್ಸಾಕಾರ್ ಕುಲಪ್ರಭುಗಳೂ ಇಸ್ಸಾಕಾರರೊಡನೆ ಬಾರಾಕನೂ ಆಗಮಿಸಿದರು. ಇವರೆಲ್ಲರೂ ಬಾರಾಕನ ಹೆಜ್ಜೆಹಿಡಿದು ತಟ್ಟನೆ ತಗ್ಗಿನ ಪ್ರದೇಶಕ್ಕೆ ಬಂದರು. ರೂಬೇನ್ಯರ ಗೋತ್ರದವರು ಬಹಳಷ್ಟು ತಮ್ಮ ಹೃದಯಗಳಲ್ಲಿ ವಿಶ್ಲೇಷಿಸಿದರೂ ತೀರ್ಮಾನಿಸಲಾಗಲ್ಲಿಲ್ಲ
16 ರೂಬೇನ್ಯರೇ, ನೀವು ಕುರಿಹಟ್ಟಿಗಳಲ್ಲಿ, ಮಂದೆಗಳ ಮಧ್ಯದಲ್ಲಿ ಕೊಳಲೂದುವುದನ್ನು ಕೇಳಬೇಕೆಂದು ಅಲ್ಲಿಯೇ ಕುಳಿತಿರುವುದೇಕೆ? ರೂಬೇನ್ಯರು ಗೋತ್ರದವರು ಬಹಳಷ್ಟು ತಮ್ಮ ಹೃದಯಗಳಲ್ಲಿ ವಿಶ್ಲೇಷಿಸಿದರೂ ತೀರ್ಮಾನಿಸಲಾಗಲ್ಲಿಲ್ಲ.
17 ಗಿಲ್ಯಾದ್ಯರು ಯೊರ್ದನಿನ ಆಚೆಯಲ್ಲೇ ಉಳಿದರು. ದಾನ್ ಕುಲದವರು ಹಡಗುಗಳಲ್ಲಿಯೇ ಉಳಿದದ್ದೇಕೆ? ಆಶೇರ್ ಕುಲದವರು ತಮ್ಮ ರೇವುಗಳನ್ನು ಬಿಡದೆ ಸಮುದ್ರ ತೀರದಲ್ಲಿ ಸುಮ್ಮನೆ ಕುಳಿತುಬಿಟ್ಟರು.
18 ಜೆಬುಲೂನ್ಯರು ತಮ್ಮ ಜೀವವನ್ನು ಮರಣದ ಆಪತ್ತಿಗೆ ಒಪ್ಪಿಸಲು ಸಿದ್ಧರಿದರು, ನಫ್ತಾಲ್ಯರು ಸಹ ರಣರಂಗದಲ್ಲಿಯೇ ಇದ್ದರು.
19 “ಅರಸರು ಬಂದು ಯುದ್ಧಮಾಡಿದರು; ಕಾನಾನ್ಯ ರಾಜರು ಮೆಗಿದ್ದೋ ನೀರಿನ ಕಾಲುವೆಗಳ ಬಳಿಯಲ್ಲಿರುವ ತಾನಾಕದಲ್ಲಿ ಕೂಡಿಬಂದು ಹೋರಾಡಿದರು. ಅವರಿಗೆ ದ್ರವ್ಯವೇನೂ ಸಿಕ್ಕಲಿಲ್ಲ.
20 ನಕ್ಷತ್ರಗಳೂ ಆಕಾಶಪಥದಲ್ಲಿದ್ದು ಸೀಸೆರನೊಡನೆ ಯುದ್ಧಮಾಡಿದವು.
21 ಪೂರ್ವಪ್ರಸಿದ್ಧವಾದ ಕೀಷೋನ್ ಹೊಳೆಯು ಶತ್ರುಗಳನ್ನು ಕೊಚ್ಚಿಕೊಂಡು ಹೋಯಿತು. ನನ್ನ ಮನವೇ ನೀನು ಧೈರ್ಯದಿಂದ ಮುಂದಕ್ಕೆ ಹೊರಡು.
22 ಆಗ ಅತಿವೇಗವಾಗಿ ಓಡುತ್ತಿದ್ದ ಅವರ ಬಲವಾದ ಕುದುರೆಗಳ ಗೊರಸುಗಳ ಪೆಟ್ಟಿನಿಂದ ನೆಲವು ಕಂಪಿಸಿತು.
23 ಮೇರೋಜ್ ಊರನ್ನು ಶಪಿಸಿರೆಂದು ಯೆಹೋವನ ದೂತನು ಹೇಳುತ್ತಾನೆ. ‘ಅದರ ನಿವಾಸಿಗಳು ಯೆಹೋವನ ಸಹಾಯಕ್ಕೆ ಬರಲಿಲ್ಲ. ಯುದ್ಧವೀರರ ಹೋರಾಟದ ವಿರುದ್ಧ ಯೆಹೋವನ ಸಹಾಯಕ್ಕೆ ಬರಲಿಲ್ಲವಲ್ಲಾ; ಅವರನ್ನು ಶಪಿಸೇ ಶಪಿಸಿರಿ!’
ನ್ಯಾಯ 5 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019