Text copied!
Bibles in Kannada

ಕೀರ್ತ 78:29-71 in Kannada

Help us?

ಕೀರ್ತ 78:29-71 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಅವರು ತಿಂದು ಸಂತೃಪ್ತರಾದರು; ಆತನು ಅವರಿಗೆ ಬಯಸಿದ್ದನ್ನು ಕೊಟ್ಟನು.
30 ಅವರ ಇಷ್ಟಭೋಜನವು ಅವರಿಗೆ ಅಸಹ್ಯವಾಗುವುದಕ್ಕಿಂತ ಮೊದಲು, ಅವರು ಅದನ್ನು ಇನ್ನೂ ಸೇವಿಸುತ್ತಿರುವಾಗಲೇ,
31 ದೇವರ ಕೋಪವು ಅವರಿಗೆ ವಿರುದ್ಧವಾಗಿ ಎದ್ದು, ಅವರಲ್ಲಿ ಕೊಬ್ಬಿದವರನ್ನು ವಧಿಸಿ, ಇಸ್ರಾಯೇಲರ ಪ್ರಾಯಸ್ಥರನ್ನು ನೆಲಕ್ಕುರುಳಿಸಿತು.
32 ಇಷ್ಟಾದರೂ ಪುನಃ ಪುನಃ ಪಾಪಮಾಡುತ್ತಾ ಬಂದರು; ಅವರು ಆತನ ಅದ್ಭುತಕೃತ್ಯಗಳನ್ನು ನಂಬದೆ ಹೋದರು.
33 ಆದುದರಿಂದ ಆತನು ಅವರ ಜೀವಿತ ದಿನಗಳನ್ನು ಉಸಿರಿನಂತೆಯೂ, ಅವರ ವರ್ಷಗಳನ್ನು ಭಯದಿಂದಲೂ ಮುಗಿಸಿದನು.
34 ಸಂಹಾರವಾಗುವಾಗೆಲ್ಲಾ ಅವರು ದೇವರನ್ನು ನೆನಸಿ, ಪುನಃ ಆತನ ಪ್ರಸನ್ನತೆಯನ್ನು ಬಯಸಿ,
35 ದೇವರು ತಮ್ಮ ಬಂಡೆಯು, ಪರಾತ್ಪರನಾದ ದೇವರು, ತಮ್ಮ ವಿಮೋಚಕನು ಆಗಿದ್ದಾನೆ ಎಂಬುದನ್ನು ನೆನಪಿಗೆ ತಂದುಕೊಳ್ಳುವರು.
36 ಆದರೆ ಅವರು ಆತನನ್ನು ತಮ್ಮ ಬಾಯಿಂದ ವಂಚಿಸಿ, ತಮ್ಮ ನಾಲಿಗೆಯಿಂದ ಸುಳ್ಳಾಡಿದರು.
37 ಅವರ ಹೃದಯವು ಆತನಲ್ಲಿ ನೆಲೆಗೊಳ್ಳಲಿಲ್ಲ; ಅವರು ಆತನ ನಿಬಂಧನೆಯನ್ನು ನಿಷ್ಠೆಯಿಂದ ಕೈಗೊಳ್ಳಲಿಲ್ಲ.
38 ಆದರೂ ಆತನು ಕರುಣಾಳುವೂ, ಅಪರಾಧಿಗಳನ್ನು ಸಂಹರಿಸದೆ ಕ್ಷಮಿಸುವವನೂ ಆಗಿ, ತನ್ನ ಸಿಟ್ಟನ್ನೆಲ್ಲಾ ಏರಗೊಡಿಸದೆ, ಅದನ್ನು ಹಲವು ಸಾರಿ ತಡೆಯುತ್ತಾ ಬಂದನು.
39 ಅವರು ಮಾಂಸಮಾತ್ರದವರೂ, ಶ್ವಾಸವನ್ನು ತಿರುಗಿ ಪಡೆಯದವರಾಗಿದ್ದಾರೆ ಎಂಬುದನ್ನು ನೆನಪುಮಾಡಿಕೊಳ್ಳುತ್ತಿದ್ದನು.
40 ಅರಣ್ಯದಲ್ಲಿ ಅವರು ಎಷ್ಟೋ ಸಾರಿ ಅವಿಧೇಯರಾಗಿ, ಅಲ್ಲಿ ಆತನನ್ನು ನೋಯಿಸಿದರು.
41 ಆತನನ್ನು ಪದೇಪದೇ ಪರೀಕ್ಷಿಸಿ, ಇಸ್ರಾಯೇಲರ ಸದಮಲಸ್ವಾಮಿಯನ್ನು ಕೋಪಕ್ಕೆ ಗುರಿಮಾಡಿದರು.
42 ಅವರು ಆತನ ಭುಜಬಲವನ್ನೂ, ತಮ್ಮನ್ನು ಶತ್ರುಗಳಿಂದ ಬಿಡಿಸಿದ ಸಮಯವನ್ನೂ,
43 ಆತನು ಐಗುಪ್ತದಲ್ಲಿ ಮಾಡಿದ ಮಹತ್ಕಾರ್ಯಗಳನ್ನು, ಸೋನ್ ಸೀಮೆಯಲ್ಲಿ ನಡೆಸಿದ ಅದ್ಭುತಗಳನ್ನೂ ಮರೆತುಬಿಟ್ಟರು.
44 ಅವರು ಹಳ್ಳದ ನೀರನ್ನು ಕುಡಿಯಲಾಗದಂತೆ, ಆತನು ಅಲ್ಲಿನ ನದಿಗಳನ್ನು ರಕ್ತವನ್ನಾಗಿ ಮಾರ್ಪಡಿಸಿದನು.
45 ಅವರನ್ನು ನಾಶಮಾಡುವ ವಿಷದ ಹುಳಗಳನ್ನು, ಹಾಳುಮಾಡುವ ಕಪ್ಪೆಗಳನ್ನು ಕಳುಹಿಸಿಕೊಟ್ಟನು.
46 ಅವರ ಬೆಳೆಗಳನ್ನು ಜಿಟ್ಟೆಹುಳಗಳಿಗೂ, ಕಷ್ಟಫಲವನ್ನು ಮಿಡತೆಗಳಿಗೂ ಕೊಟ್ಟುಬಿಟ್ಟನು.
47 ಅವರ ದ್ರಾಕ್ಷಾಲತೆಗಳನ್ನು ಆನೆಕಲ್ಲಿನಿಂದಲೂ, ಅತ್ತಿಮರಗಳನ್ನು ಕಲ್ಮಳೆಯಿಂದಲೂ ಹಾಳುಮಾಡಿದನು.
48 ಅವರ ದನಗಳನ್ನು ಕಲ್ಮಳೆಗೂ, ಕುರಿಹಿಂಡುಗಳನ್ನು ಸಿಡಿಲಿಗೂ ಒಪ್ಪಿಸಿದನು.
49 ಆತನು ಅವರ ಮೇಲೆ ತನ್ನ ಕೋಪರೌದ್ರಗಳನ್ನು, ಉಗ್ರಹಿಂಸೆಗಳನ್ನು ಸಂಹಾರಕ ದೂತಗಣವನ್ನೋ ಎಂಬಂತೆ ಕಳುಹಿಸಿದನು.
50 ತನ್ನ ರೌದ್ರಕ್ಕೆ ಎಡೆಗೊಟ್ಟು ಅವರನ್ನು ಬದುಕಗೊಡಿಸದೆ, ಅವರ ಜೀವವನ್ನು ಮರಣವ್ಯಾಧಿಗೆ ಆಹುತಿಕೊಟ್ಟನು.
51 ಹಾಮನ ವಂಶದವರ ಪ್ರಥಮಫಲವಾಗಿರುವ ಐಗುಪ್ತ್ಯರ ಚೊಚ್ಚಲಮಕ್ಕಳನ್ನು ಸಂಹರಿಸಿದನು.
52 ಆತನು ಕುರಿಗಳನ್ನೋ ಎಂಬಂತೆ ತನ್ನ ಜನವನ್ನು ಹೊರತಂದು, ಅಡವಿಯಲ್ಲಿ ಹಿಂಡನ್ನು ಪೋಷಿಸಿ ನಡೆಸಿದನು.
53 ಆತನು ಸುರಕ್ಷಿತವಾಗಿ ನಡೆಸಿದ್ದರಿಂದ ಅವರು ಭಯಪಡಲಿಲ್ಲ; ಅವರ ಶತ್ರುಗಳನ್ನು ಸಮುದ್ರವು ಮುಚ್ಚಿಬಿಟ್ಟಿತು;
54 ಅವರನ್ನು ತನ್ನ ಪವಿತ್ರದೇಶಕ್ಕೆ ಅಂದರೆ ತನ್ನ ಭುಜಬಲದಿಂದ ಸಂಪಾದಿಸಿದ ಈ ಪರ್ವತಸೀಮೆಗೆ ಕರೆದುಕೊಂಡು ಬಂದನು.
55 ಜನಾಂಗಗಳನ್ನು ಅವರ ಮುಂದಿನಿಂದ ಓಡಿಸಿಬಿಟ್ಟು, ಅವರ ದೇಶವನ್ನು ಇಸ್ರಾಯೇಲ್ ಗೋತ್ರಗಳಿಗೆ ಸ್ವತ್ತಾಗಿರುವಂತೆ ಹಂಚಿಕೊಟ್ಟು, ಆ ಜನಾಂಗಗಳ ಬಿಡಾರಗಳಲ್ಲಿ ಅವರನ್ನು ನೆಲೆಗೊಳಿಸಿದನು.
56 ಆದರೂ ಅವರು ಪರಾತ್ಪರನಾದ ದೇವರನ್ನು ಪರೀಕ್ಷಿಸಿ ಅವಿಧೇಯರಾದರು. ಆತನ ವಿಧಿಗಳನ್ನು ಕೈಗೊಳ್ಳದೆ,
57 ಆತನಿಗೆ ವಿಮುಖರಾಗಿ ತಮ್ಮ ಹಿರಿಯರಂತೆ ದ್ರೋಹಿಗಳಾದರು. ಮೋಸದ ಬಿಲ್ಲಿನಂತೆ ತಿರುಗಿಕೊಂಡರು.
58 ಅವರು ತಮ್ಮ ಪೂಜಾಸ್ಥಳಗಳಿಂದ ಆತನನ್ನು ಬೇಸರಗೊಳಿಸಿ, ವಿಗ್ರಹಗಳಿಂದ ರೇಗಿಸಿದರು.
59 ದೇವರು ಇದನ್ನು ತಿಳಿದು ರೌದ್ರನಾಗಿ ಇಸ್ರಾಯೇಲರನ್ನು ಸಂಪೂರ್ಣವಾಗಿ ನಿರಾಕರಿಸಿಬಿಟ್ಟನು.
60 ತಾನು ಜನರ ಮಧ್ಯದಲ್ಲಿ ವಾಸಿಸುವುದಕ್ಕೋಸ್ಕರ, ಶಿಲೋವ್ ಪಟ್ಟಣದಲ್ಲಿ ಹಾಕಿಸಿದ ನಿವಾಸಸ್ಥಾನವನ್ನು ತ್ಯಜಿಸಿಬಿಟ್ಟು,
61 ತನ್ನ ಪ್ರತಾಪವನ್ನು ಸೆರೆಯಾಗುವುದಕ್ಕೂ, ಮಹಿಮೆಯನ್ನು ವಿರೋಧಿಗಳಿಗೂ ಒಪ್ಪಿಸಿಬಿಟ್ಟನು.
62 ಆತನು ತನ್ನ ಪ್ರಜೆಯನ್ನು ಖಡ್ಗಕ್ಕೆ ಗುರಿಮಾಡಿ, ತನ್ನ ಬಾಧ್ಯತೆಯ ಮೇಲೆ ಉಗ್ರನಾದನು.
63 ಅವರ ಯೌವನಸ್ಥರು ಅಗ್ನಿಗೆ ಆಹುತಿಯಾದರು; ಅವರ ಕನ್ಯೆಯರು ವಿವಾಹವಾಗಲಿಲ್ಲ.
64 ಯಾಜಕರು ಕತ್ತಿಯಿಂದ ಸಂಹೃತರಾದರು; ಇವರ ವಿಧವೆಯರು ದುಃಖಕ್ರಿಯೆಗಳನ್ನು ನೆರವೇರಿಸಲಿಲ್ಲ.
65 ಆ ವರೆಗೆ ನಿದ್ರಿಸುವವನಂತೆಯೂ, ದ್ರಾಕ್ಷಾರಸದಿಂದ ಮೈಮರೆತ ವೀರನಂತೆಯೂ ಇದ್ದ ಕರ್ತನು ಫಕ್ಕನೆ ಎಚ್ಚೆತ್ತು,
66 ತನ್ನ ಶತ್ರುಗಳನ್ನು ಸದೆಬಡಿದು, ನಿತ್ಯನಿಂದೆಗೆ ಅವರನ್ನು ಗುರಿಮಾಡಿದನು.
67 ಯೋಸೇಫನ ಕುಲದ ಗುಡಾರವನ್ನು ತಿರಸ್ಕರಿಸಿ, ಎಫ್ರಾಯೀಮ್ ಕುಲವನ್ನು ತ್ಯಜಿಸಿ,
68 ಯೆಹೂದ ಕುಲವನ್ನೂ ಮತ್ತು ತನ್ನ ಪ್ರಿಯವಾದ ಚೀಯೋನ್ ಗಿರಿಯನ್ನೂ ಆರಿಸಿಕೊಂಡನು.
69 ಆತನು ತನ್ನ ಆಲಯವನ್ನು ಪರ್ವತದಂತೆಯೂ, ತಾನು ಸ್ಥಾಪಿಸಿದ ಭೂಮಿಯಂತೆಯೂ ಶಾಶ್ವತವಾಗಿ ಕಟ್ಟಿದನು.
70 ಇದಲ್ಲದೆ ಆತನು ತನ್ನ ಸೇವಕನಾದ ದಾವೀದನನ್ನು ಆರಿಸಿಕೊಂಡು, ಕುರಿಹಟ್ಟಿಯಿಂದ ತೆಗೆದುಕೊಂಡು,
71 ಕುರಿಮರಿಗಳನ್ನು ರಕ್ಷಿಸುವ ಕೆಲಸದಿಂದ ಬಿಡಿಸಿ, ಅವನನ್ನು ತನ್ನ ಪ್ರಜೆಗಳಾದ ಯಾಕೋಬ್ಯರನ್ನು ಅಂದರೆ ತನ್ನ ಸ್ವತ್ತಾಗಿರುವ ಇಸ್ರಾಯೇಲರನ್ನು ಸಾಕುವುದಕ್ಕೆ ನೇಮಿಸಿದನು.
ಕೀರ್ತ 78 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019