Text copied!
Bibles in Kannada

ಅರಣ್ಯ 16:34-48 in Kannada

Help us?

ಅರಣ್ಯ 16:34-48 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 ಅವರ ಸುತ್ತಲಿದ್ದ ಇಸ್ರಾಯೇಲರೆಲ್ಲರೂ ಹೆದರಿಕೊಂಡು, “ಭೂಮಿಯು ನಮ್ಮನ್ನೂ ಸಹ ನುಂಗಿಬಿಟ್ಟೀತು!” ಎಂದು ಹೇಳಿ ಓಡಿಹೋದರು.
35 ನಂತರ ಯೆಹೋವನ ಬಳಿಯಿಂದ ಬೆಂಕಿಹೊರಟು, ಧೂಪವನ್ನು ಅರ್ಪಿಸುತ್ತಿದ್ದ ಆ ಇನ್ನೂರೈವತ್ತು ಮಂದಿಯನ್ನು ದಹಿಸಬಿಟ್ಟಿತು.
36 ಆಗ ಯೆಹೋವನು ಮೋಶೆಯ ಸಂಗಡ ಮಾತನಾಡಿ
37 “ಯಾಜಕನಾದ ಆರೋನನ ಮಗನಾದ ಎಲ್ಲಾಜಾರನಿಗೆ, ಧೂಪಾರತಿಗಳು ಪರಿಶುದ್ಧವಾಗಿರುವುದರಿಂದ ದಹಿಸಲ್ಪಟ್ಟವರ ಮಧ್ಯದಿಂದ ಆ ಧೂಪಾರತಿಗಳನ್ನು ತೆಗೆಯಬೇಕೆಂದು ಆಜ್ಞಾಪಿಸು ಮತ್ತು ನೀನು ಅವುಗಳಲ್ಲಿರುವ ಕೆಂಡಗಳನ್ನು ದೂರ ಚೆಲ್ಲು.
38 ತಮ್ಮ ಪಾಪಗಳಿಂದ ಪ್ರಾಣವನ್ನು ಕಳೆದುಕೊಂಡ ಆ ದೋಷಿಗಳ ಧೂಪಾರತಿಗಳು ಯೆಹೋವನ ಸನ್ನಿಧಿಗೆ ತಂದ ಕಾರಣ ಅವು ಪರಿಶುದ್ಧವಾದವು. ಆದುದರಿಂದ ಅವುಗಳನ್ನು ತಗಡುಗಳನ್ನಾಗಿ ಮಾಡಿ, ಯಜ್ಞವೇದಿಗೆ ಮುಚ್ಚಳವನ್ನು ಮಾಡಿಸಬೇಕು. ಇಸ್ರಾಯೇಲರಿಗೆ ಅವು ಗುರುತುಗಳಾಗಿರಬೇಕು” ಎಂದು ಹೇಳಿದನು.
39 ಆಗ ಯಾಜಕನಾದ ಎಲ್ಲಾಜಾರನು ಯೆಹೋವನು ಮೋಶೆಯ ಮೂಲಕ ಹೇಳಿದ ಅಪ್ಪಣೆಯ ಪ್ರಕಾರ ದಹಿಸಿಹೋದವರು ಅರ್ಪಿಸಿದ ಆ ತಾಮ್ರದ ಧೂಪಾರತಿಗಳನ್ನು ತೆಗೆದುಕೊಂಡು ತಗಡುಗಳಾಗಿ ಮಾಡಿಸಿ, ಯಜ್ಞವೇದಿಯನ್ನು ಮುಚ್ಚಿದನು.
40 ಆರೋನನ ಸಂತಾನಕ್ಕೆ ಸೇರದ ಬೇರೆ ಜನರು ಯೆಹೋವನ ಸನ್ನಿಧಿಗೆ ಬಂದು ಧೂಪವನ್ನು ಸಮರ್ಪಿಸಬಾರದು. ಸಮರ್ಪಿಸಿದರೆ ಕೋರಹನಿಗೂ ಮತ್ತು ಅವನ ಸಮೂಹದವರಿಗೂ ಆದ ಸ್ಥಿತಿಯೇ ಇವರಿಗೂ ಉಂಟಾಗುವುದೆಂಬುದನ್ನು ಇಸ್ರಾಯೇಲರಿಗೆ ಜ್ಞಾಪಿಸುವುದಕ್ಕೆ ಗುರುತಾಯಿತು.
41 ಮರುದಿನ ಇಸ್ರಾಯೇಲರ ಸರ್ವಸಮೂಹದವರು ಮೋಶೆ ಮತ್ತು ಆರೋನರ ಮೇಲೆ ಗುಣುಗುಟ್ಟಿ, “ನೀವೇ ಯೆಹೋವನ ಜನರನ್ನು ಸಾಯಿಸಿದಿರಿ” ಎಂದು ಹೇಳುವವರಾದರು.
42 ಸರ್ವಸಮೂಹದವರೆಲ್ಲರೂ ಹೀಗೆ ಮೋಶೆ ಮತ್ತು ಆರೋನರಿಗೆ ವಿರುದ್ಧವಾಗಿ ಸೇರಿ ಬಂದಾಗ ದೇವದರ್ಶನದ ಗುಡಾರದ ಮೇಲೆ, ಮೇಘವು ಆವರಿಸಿಕೊಂಡಿತು ಮತ್ತು ಯೆಹೋವನ ತೇಜಸ್ಸು ಅಲ್ಲಿ ಕಾಣಿಸಿತು.
43 ಮೋಶೆ ಮತ್ತು ಆರೋನರು ದೇವದರ್ಶನದ ಗುಡಾರದ ಮುಂಭಾಗಕ್ಕೆ ಬಂದರು.
44 ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
45 “ನೀವಿಬ್ಬರೂ ಸಮೂಹದವರಲ್ಲಿ ಇರದೆ ಬೇರೆ ನಿಲ್ಲಬೇಕು. ನಾನು ಒಂದು ಕ್ಷಣಮಾತ್ರದಲ್ಲಿ ಅವರನ್ನು ದಹಿಸಿಬಿಡುತ್ತೇನೆ” ಎಂದು ಹೇಳಿದನು. ಆಗ ಮೋಶೆ ಮತ್ತು ಆರೋನರು ಬೋರಲುಬಿದ್ದರು.
46 ಮೋಶೆಯು ಆರೋನನಿಗೆ, “ಯೆಹೋವನ ಕೋಪದಿಂದ ಈ ಜನರೊಳಗೆ ಘೋರವ್ಯಾಧಿಯು ಪ್ರಾರಂಭವಾಯಿತು. ನೀನು ಧೂಪಾರತಿಯನ್ನು ತೆಗೆದುಕೊಂಡು ಅದರಲ್ಲಿ ಯಜ್ಞವೇದಿಯಿಂದ ಕೆಂಡಗಳನ್ನು ಇಟ್ಟು ಧೂಪಹಾಕಿ, ಸಮೂಹದವರ ಬಳಿಗೆ ಬೇಗ ಹೋಗಿ ಅವರಿಗೋಸ್ಕರ ದೋಷಪರಿಹಾರವನ್ನು ಮಾಡಬೇಕು” ಎಂದು ಹೇಳಿದನು.
47 ಮೋಶೆ ಹೇಳಿದಂತೆ ಆರೋನನು ಧೂಪಾರತಿಯನ್ನು ತೆಗೆದುಕೊಂಡು ಸಮೂಹದವರ ಮಧ್ಯಕ್ಕೆ ಓಡಿದಾಗ ಘೋರವ್ಯಾಧಿಯು ಜನರೊಳಗೆ ಪ್ರಾರಂಭವಾಗಿತ್ತು. ಆದುದರಿಂದ ಅವನು ಧೂಪಹಾಕಿ ಜನರಿಗೋಸ್ಕರ ದೋಷಪರಿಹಾರವನ್ನು ಮಾಡಿದನು.
48 ಅವನು ಸತ್ತವರಿಗೂ, ಬದುಕುವವರಿಗೂ ಮಧ್ಯದಲ್ಲಿ ನಿಂತುಕೊಂಡುದರಿಂದ ಆ ವ್ಯಾಧಿಯು ಶಮನವಾಯಿತು.
ಅರಣ್ಯ 16 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019