Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯೋಹಾ - ಯೋಹಾ 5

ಯೋಹಾ 5:14-38

Help us?
Click on verse(s) to share them!
14ಇದಾದ ಮೇಲೆ ಯೇಸು ಅವನನ್ನು ದೇವಾಲಯದಲ್ಲಿ ಕಂಡು, “ನಿನಗೆ ಸ್ವಸ್ಥವಾಯಿತಲ್ಲಾ;ಇನ್ನು ಮೇಲೆ ಪಾಪ ಮಾಡಬೇಡ, ನಿನಗೆ ಹೆಚ್ಚಿನ ಕೇಡು ಬಂದೀತು” ಎಂದನು.
15ಆ ಮನುಷ್ಯನು ಅಲ್ಲಿಂದ ಹೋಗಿ, ತನ್ನನ್ನು ಸ್ವಸ್ಥಪಡಿಸಿದಾತನು ಯೇಸುವೇ ಎಂದು ಯೆಹೂದ್ಯರಿಗೆ ತಿಳಿಸಿದನು.
16ಆದಕಾರಣ ಯೆಹೂದ್ಯರು, ಯೇಸು ಸಬ್ಬತ್ ದಿನಗಳಲ್ಲಿ ಇಂಥಾ ಕಾರ್ಯಗಳನ್ನು ಮಾಡುತ್ತಾನಲ್ಲಾ ಎಂದು ಆತನನ್ನು ಹಿಂಸಿಸತೊಡಗಿದರು.
17ಅದಕ್ಕೆ ಯೇಸು ಅವರಿಗೆ, “ನನ್ನ ತಂದೆಯು ಇಂದಿನವರೆಗೂ ಕೆಲಸ ಮಾಡುತ್ತಿದ್ದಾನೆ, ನಾನೂ ಕೆಲಸ ಮಾಡುತ್ತೇನೆ” ಎಂದು ಹೇಳಿದನು.
18ಯೇಸು ಈ ಮಾತನ್ನು ಹೇಳಿದ್ದರಿಂದ, ಆತನು ಸಬ್ಬತ್ ದಿನವನ್ನು ಅಲಕ್ಷ್ಯಮಾಡಿದ್ದಲ್ಲದೇ, ದೇವರನ್ನು ತನ್ನ ಸ್ವಂತ ತಂದೆ ಎಂದು ಹೇಳಿ ತನ್ನನ್ನು ದೇವರಿಗೆ ಸರಿಸಮಾನ ಮಾಡಿಕೊಂಡನೆಂದು ಯೆಹೂದ್ಯರು ಆತನನ್ನು ಕೊಲ್ಲುವುದಕ್ಕೆ ಇನ್ನಷ್ಟು ಪ್ರಯತ್ನಪಟ್ಟರು.
19ಯೇಸು ಅವರಿಗೆ, “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ತಂದೆಯು ಮಾಡುವುದನ್ನು ಕಂಡು ಮಗನು ಮಾಡುತ್ತಾನೆಯೇ, ಹೊರತು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು. ಏಕೆಂದರೆ ಆತನು ಯಾವುದನ್ನೆಲ್ಲಾ ಮಾಡುವನೋ ಹಾಗೆಯೇ ಮಗನೂ ಮಾಡುತ್ತಾನೆ.
20ಏಕೆಂದರೆ, ತಂದೆಯು ಮಗನನ್ನು ಪ್ರೀತಿಸುತ್ತಾನೆ, ತಾನು ಮಾಡುವುದನ್ನೆಲ್ಲಾ ಅವನಿಗೆ ತೋರಿಸುತ್ತಾನೆ. ಇದಲ್ಲದೆ ಇವುಗಳಿಗಿಂತ ಮಹತ್ತಾದ ಕೆಲಸಗಳನ್ನು ಆತನಿಗೆ ತೋರಿಸುವನು. ಅವುಗಳನ್ನು ನೋಡಿ ನಿಮಗೆ ಆಶ್ಚರ್ಯವಾಗುವುದು.
21ತಂದೆಯು ಹೇಗೆ ಸತ್ತವರನ್ನು ಎಬ್ಬಿಸಿ ಬದುಕಿಸುತ್ತಾನೋ ಹಾಗೆಯೇ ಮಗನು ಸಹ ತನಗೆ ಬೇಕಾದವರನ್ನು ಬದುಕಿಸುತ್ತಾನೆ.
22ಇದಲ್ಲದೆ ತಂದೆಯು ಯಾರಿಗೂ ತೀರ್ಪುಮಾಡುವುದಿಲ್ಲ, ಆದರೆ ಎಲ್ಲಾ ತೀರ್ಪನ್ನು ಮಗನಿಗೆ ಕೊಟ್ಟಿದ್ದಾನೆ.
23ಎಲ್ಲರೂ ತಂದೆಯನ್ನು ಯಾವ ರೀತಿಯಲ್ಲಿ ಗೌರವಿಸುವರೋ ಅದೇ ರೀತಿಯಲ್ಲಿ ಮಗನನ್ನೂ ಗೌರವಿಸಬೇಕೆಂದು ಹಾಗೆ ಮಾಡಿದ್ದಾನೆ. ಮಗನನ್ನು ಗೌರವಿಸದವನು ಆತನನ್ನು ಕಳುಹಿಸಿದ ತಂದೆಯನ್ನು ಗೌರವಿಸಲಾರನು.
24ನಿಮಗೆ ನಿಜನಿಜವಾಗಿ ಹೇಳುತ್ತೇನೆ ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿದಾತನನ್ನು ನಂಬುವವನು ನಿತ್ಯ ಜೀವವನ್ನು ಹೊಂದಿದ್ದಾನೆ, ಅವನು ಖಂಡನೆಗೆ ಗುರಿಯಾಗುವುದಿಲ್ಲ, ಮರಣದಿಂದ ಪಾರಾಗಿ ಜೀವದಲ್ಲಿ ಸೇರಿದ್ದಾನೆ.
25ನಿಮಗೆ ನಿಜನಿಜವಾಗಿ ಹೇಳುತ್ತೇನೆ ಸತ್ತವರು ದೇವಕುಮಾರನ ಸ್ವರವನ್ನು ಕೇಳುವ ಕಾಲ ಬರುತ್ತದೆ, ಅದು ಈಗಾಗಲೇ ಬಂದಿದೆ, ಕೇಳಿದವರು ಬದುಕುವರು.
26ತಂದೆಯು ತಾನು ಹೇಗೆ ಸ್ವತಃ ಜೀವವುಳ್ಳವನಾಗಿದ್ದಾನೋ, ಹಾಗೆಯೇ ಮಗನೂ ಸ್ವತಃ ಜೀವವುಳ್ಳವನಾಗಿರುವಂತೆ ಮಾಡಿದ್ದಾನೆ.
27ಮಗನು ಮನುಷ್ಯಕುಮಾರನಾಗಿರುವುದರಿಂದ ನ್ಯಾಯತೀರ್ಪು ಮಾಡುವ ಅಧಿಕಾರವನ್ನೂ ತಂದೆ ಆತನಿಗೆ ಕೊಟ್ಟಿದ್ದಾನೆ.
28ಅದಕ್ಕೆ ಆಶ್ಚರ್ಯಪಡಬೇಡಿರಿ. ಒಂದು ಕಾಲ ಬರುತ್ತದೆ, ಆಗಸಮಾಧಿಗಳಲ್ಲಿರುವವರೆಲ್ಲಾ ಆತನ ಸ್ವರವನ್ನು ಕೇಳಿ,
29ಎದ್ದು ಹೊರಗೆ ಬರುವರು. ಒಳ್ಳೆಯದನ್ನು ಮಾಡಿದವರಿಗೆ ನಿತ್ಯಜೀವಕ್ಕಾಗಿ ಪುನರುತ್ಥಾನವಾಗುವುದು. ಕೆಟ್ಟದ್ದನ್ನು ಮಾಡಿದವರು ಖಂಡನೆಗಾಗಿ ಪುನರುತ್ಥಾನವನ್ನೂ ಹೊಂದುವರು.
30“ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು ತಂದೆಯು ಹೇಳಿದ್ದನ್ನು ನಾನು ಕೇಳಿ ನ್ಯಾಯತೀರಿಸುತ್ತೇನೆ ಮತ್ತು ಸ್ವಂತ ಚಿತ್ತ ನೆರವೇರಬೇಕೆಂದು ಅಪೇಕ್ಷಿಸದೆ ನನ್ನನ್ನು ಕಳುಹಿಸಿದಾತನ ಚಿತ್ತ ನೆರವೇರಬೇಕೆಂದು ನಾನು ಬಯಸುವುದರಿಂದ ನಾನು ಮಾಡುವ ತೀರ್ಪು ನ್ಯಾಯವಾಗಿದೆ.
31ನನ್ನ ವಿಷಯವಾಗಿ ನಾನೇ ಸಾಕ್ಷಿ ಹೇಳಿಕೊಂಡರೆ ನನ್ನ ಸಾಕ್ಷಿಯು ಸತ್ಯವಾದದ್ದಲ್ಲ.
32ನನ್ನ ವಿಷಯವಾಗಿ ಸಾಕ್ಷಿ ಹೇಳುವವನು ಮತ್ತೊಬ್ಬನಿದ್ದಾನೆ. ಆತನು ನನ್ನ ವಿಷಯವಾಗಿ ಹೇಳುವ ಸಾಕ್ಷಿಯು ನಿಜವೆಂದು ನಾನು ಬಲ್ಲೆನು.
33ನೀವು ಯೋಹಾನನ ಬಳಿಗೆ ದೂತರನ್ನು ಕೇಳಿಕೊಂಡು ಬರುವುದಕ್ಕೆ ಕಳುಹಿಸಿದಿರಿ. ಅವನು ಸತ್ಯಕ್ಕೆ ಸಾಕ್ಷಿ ಹೇಳಿದನು.
34ನಾನಂತೂ ನನಗೆ ಬೇಕಾದ ಸಾಕ್ಷಿಯನ್ನು ಮನುಷ್ಯರಿಂದ ಸ್ವೀಕರಿಸುವುದಿಲ್ಲ. ಆದರೂ ನಿಮಗೆ ರಕ್ಷಣೆಯಾಗಬೇಕೆಂದು ಇದನ್ನು ನಿಮಗೆ ಹೇಳಿದ್ದೇನೆ.
35ಯೋಹಾನನು ಉರಿಯುವ ದೀಪದಂತೆ ಪ್ರಕಾಶಿಸಿದನು. ಅವನು ಕೊಡುವ ಬೆಳಕಿನಲ್ಲಿ ಸ್ವಲ್ಪ ಕಾಲ ಅತ್ಯಾನಂದಪಡುವುದಕ್ಕೆ ಮನಸ್ಸು ಮಾಡಿದಿರಿ.
36ನನಗಂತೂ ಯೋಹಾನನ ಸಾಕ್ಷಿಗಿಂತ ದೊಡ್ಡದಾದಸಾಕ್ಷಿ ಉಂಟು. ಹೇಗೆಂದರೆ, ಪೂರೈಸುವುದಕ್ಕೆ ತಂದೆಯು ನನಗೆ ಕೊಟ್ಟಿರುವ ಕೆಲಸಗಳೇ, ಅಂದರೆ ನಾನು ಮಾಡುವ ಈ ಕೆಲಸಗಳೇ ತಂದೆಯು ನನ್ನನ್ನು ಕಳುಹಿಸಿದ್ದಾನೆಂದು ನನ್ನ ವಿಷಯವಾಗಿ ಸಾಕ್ಷಿ ಕೊಡುತ್ತವೆ.
37ಇದಲ್ಲದೆ ನನ್ನನ್ನು ಕಳುಹಿಸಿಕೊಟ್ಟ ತಂದೆಯು ನನ್ನ ವಿಷಯವಾಗಿ ಸಾಕ್ಷಿ ಹೇಳಿದ್ದಾನೆ. ನೀವು ಎಂದಾದರೂ ಆತನ ಸ್ವರವನ್ನು ಕೇಳಿದ್ದೂ ಇಲ್ಲ, ಆತನ ರೂಪವನ್ನು ನೋಡಿದ್ದೂ ಇಲ್ಲ.
38ಆತನ ವಾಕ್ಯವು ನಿಮ್ಮಲ್ಲಿ ನೆಲೆಗೊಂಡಿಲ್ಲ. ಏಕೆಂದರೆ ಆತನು ಕಳುಹಿಸಿದಾತನನ್ನು ನೀವು ನಂಬದೇ ಇದ್ದೀರಿ.

Read ಯೋಹಾ 5ಯೋಹಾ 5
Compare ಯೋಹಾ 5:14-38ಯೋಹಾ 5:14-38