1ಯೇಸು ಯೋಹಾನನಿಗಿಂತ ಹೆಚ್ಚು ಶಿಷ್ಯರನ್ನು ಮಾಡಿಕೊಂಡು ಅವರಿಗೆ ದೀಕ್ಷಾಸ್ನಾನ ಮಾಡಿಸುತ್ತಾನೆಂಬ ಸುದ್ದಿಯನ್ನು ಫರಿಸಾಯರು ಕೇಳಿದರೆಂದು ಕರ್ತನಿಗೆ ತಿಳಿದಾಗ,
2(ಆದರೆ ಯೇಸು ತಾನೇ ದೀಕ್ಷಾಸ್ನಾನ ಮಾಡಿಸುತ್ತಿರಲಿಲ್ಲ. ಆತನ ಶಿಷ್ಯರೇ ಮಾಡಿಸುತ್ತಿದ್ದರು),
3ಆತನು ಯೂದಾಯವನ್ನು ಬಿಟ್ಟು ತಿರುಗಿ ಗಲಿಲಾಯಕ್ಕೆ ಹೊರಟು ಹೋದನು.
4ಆತನು ಸಮಾರ್ಯ ಸೀಮೆಯನ್ನು ಹಾದುಹೋಗಬೇಕಾಯಿತು.
5ಹೋಗುವಾಗ ಸಮಾರ್ಯ ಸೀಮೆಗೆ ಸೇರಿದ ಸುಖರೆಂಬ ಊರಿಗೆ ಬಂದನು. ಅದು ಯಾಕೋಬನು ತನ್ನ ಮಗನಾದ ಯೋಸೇಫನಿಗೆ ಕೊಟ್ಟ ಭೂಮಿಯ ಹತ್ತಿರದಲ್ಲಿತ್ತು.
6ಅಲ್ಲಿ ಯಾಕೋಬನು ತೆಗೆಸಿದ ಬಾವಿಯಿತ್ತು. ಯೇಸು ಪ್ರಯಾಣಮಾಡಿದ್ದರಿಂದ ಆಯಾಸಗೊಂಡು ಆ ಬಾವಿಯ ಬಳಿಯಲ್ಲಿ ಹಾಗೆ ಕುಳಿತುಕೊಂಡನು. ಆಗ ಹೆಚ್ಚು ಕಡಿಮೆ ಮಧ್ಯಾಹ್ನವಾಗಿತ್ತು.
7ಸಮಾರ್ಯದವಳಾದ ಒಬ್ಬ ಸ್ತ್ರೀ ನೀರು ಸೇದುವುದಕ್ಕೆ ಬಂದಳು. ಯೇಸು ಆಕೆಯನ್ನು “ನನಗೆ ಕುಡಿಯುವುದಕ್ಕೆ ನೀರನ್ನು ಕೊಡು,” ಎಂದು ಕೇಳಿದನು.
8ಅಷ್ಟರಲ್ಲಿ ಆತನ ಶಿಷ್ಯರು ಊಟಕ್ಕೆ ಬೇಕಾದದ್ದನ್ನು ಕೊಂಡುಕೊಳ್ಳುವುದಕ್ಕಾಗಿ ಪಟ್ಟಣದೊಳಕ್ಕೆ ಹೋಗಿದ್ದರು.
9ಆ ಸಮಾರ್ಯದ ಸ್ತ್ರೀಯು ಆತನಿಗೆ, “ಯೆಹೂದ್ಯನಾದ ನೀನು ಸಮಾರ್ಯದವಳಾದ ನನ್ನನ್ನು ಕುಡಿಯುವುದಕ್ಕೆ ನೀರು ಕೊಡು ಎಂದು ಕೇಳುವುದಾದರೂ ಹೇಗೆ?” ಎಂದು ಹೇಳಿದಳು. ಏಕೆಂದರೆ ಯೆಹೂದ್ಯರಿಗೂ ಸಮಾರ್ಯದವರಿಗೂ ಹೊಕ್ಕುಬಳಕೆ ಇರಲಿಲ್ಲ.