Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಜ್ಞಾನೋ - ಜ್ಞಾನೋ 15

ಜ್ಞಾನೋ 15:4-33

Help us?
Click on verse(s) to share them!
4ಸಂತೈಸುವ ನಾಲಿಗೆ ಜೀವವೃಕ್ಷವು, ಬಲತ್ಕರಿಸುವ ನಾಲಿಗೆ ಮನಮುರಿಯುವುದು.
5ಮೂರ್ಖನು ತಂದೆಯ ಶಿಕ್ಷೆಯನ್ನು ತಿರಸ್ಕರಿಸುವನು, ಗದರಿಕೆಯನ್ನು ಗಮನಿಸುವವನು ಜಾಣನು.
6ಶಿಷ್ಟನ ಮನೆಯಲ್ಲಿ ದೊಡ್ಡ ನಿಧಿ, ದುಷ್ಟನ ಆದಾಯವು ನಷ್ಟಕ್ಕೆ ದಾರಿ.
7ಜ್ಞಾನಿಗಳ ತುಟಿಗಳು ತಿಳಿವಳಿಕೆಯನ್ನು ಬಿತ್ತುವವು. ಜ್ಞಾನಹೀನರ ಹೃದಯವು ಅದನ್ನು ಬಿತ್ತುವುದೇ ಇಲ್ಲ.
8ದುಷ್ಟರ ಯಜ್ಞ ಯೆಹೋವನಿಗೆ ಅಸಹ್ಯ, ಶಿಷ್ಟರ ಬಿನ್ನಹ ಆತನಿಗೆ ಇಷ್ಟ.
9ದುಷ್ಟನ ನಡತೆಯು ಯೆಹೋವನಿಗೆ ಅಸಹ್ಯ, ಧರ್ಮಾಸಕ್ತನು ಆತನಿಗೆ ಪ್ರಿಯ.
10ಧರ್ಮಮಾರ್ಗವನ್ನು ಬಿಟ್ಟವನಿಗೆ ತೀಕ್ಷ್ಣ ಶಿಕ್ಷಣ, ಗದರಿಕೆಯನ್ನು ಕೇಳದವನಿಗೆ ಸಾವು.
11ಪಾತಾಳವೂ, ನಾಶಲೋಕವೂ ಯೆಹೋವನಿಗೆ ಗೋಚರವಾಗಿರುವಲ್ಲಿ ನರವಂಶದವರ ಹೃದಯಗಳು ಆತನಿಗೆ ಮತ್ತೂ ಸ್ಪಷ್ಟ.
12ಧರ್ಮನಿಂದಕನು ಗದರಿಕೆಯನ್ನು ಕೇಳನು, ಜ್ಞಾನಿಗಳ ಸಂಗಡ ಸೇರನು.
13ಹರ್ಷ ಹೃದಯದಿಂದ ಹಸನ್ಮುಖ, ಮನೋವ್ಯಥೆಯಿಂದ ಆತ್ಮಭಂಗ.
14ವಿವೇಕಿಯ ಹೃದಯ ತಿಳಿವಳಿಕೆಯನ್ನು ಹುಡುಕುವುದು, ಮೂಢರ ಬಾಯಿ ಮೂರ್ಖತನವನ್ನು ಮುಕ್ಕುವುದು.
15ದೀನನ ದಿನಗಳೆಲ್ಲಾ ದುಃಖಭರಿತ, ಹರ್ಷಹೃದಯನಿಗೆ ನಿತ್ಯವೂ ಔತಣ.
16ಕಳವಳದಿಂದ ಕೂಡಿದ ಬಹುಧನಕ್ಕಿಂತಲೂ ಯೆಹೋವನ ಭಯದಿಂದ ಕೂಡಿದ ಅಲ್ಪ ಧನವೇ ಲೇಸು.
17ದ್ವೇಷವಿರುವಲ್ಲಿ ಮೃಷ್ಟಾನ್ನಕ್ಕಿಂತಲೂ, ಪ್ರೇಮವಿರುವಲ್ಲಿ ಸೊಪ್ಪಿನ ಊಟವೇ ಉತ್ತಮ.
18ಕೋಪಿಷ್ಠನು ವ್ಯಾಜ್ಯವನ್ನೆಬ್ಬಿಸುವನು, ದೀರ್ಘಶಾಂತನು ಜಗಳವನ್ನು ಶಮನಪಡಿಸುವನು.
19ಸೋಮಾರಿಯ ಮಾರ್ಗ ಮುಳ್ಳುಬೇಲಿ, ಯಥಾರ್ಥವಂತನ ಮಾರ್ಗ ರಾಜಮಾರ್ಗ.
20ಜ್ಞಾನವಂತನಾದ ಮಗನು ತಂದೆಯನ್ನು ಉಲ್ಲಾಸಗೊಳಿಸುವನು, ಜ್ಞಾನಹೀನನು ತಾಯಿಯನ್ನು ತಿರಸ್ಕರಿಸುವನು.
21ಬುದ್ಧಿಹೀನನು ಮೂರ್ಖತನದಲ್ಲಿ ಆನಂದಿಸುವನು, ಬುದ್ಧಿವಂತನು ತನ್ನ ಮಾರ್ಗವನ್ನು ಸರಳಮಾಡಿಕೊಳ್ಳುವನು.
22ಆಲೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು, ಬಹು ಮಂದಿ ಆಲೋಚನಾಪರರು ಇರುವಲ್ಲಿ ಅವು ನೆರವೇರುವವು.
23ತಕ್ಕ ಉತ್ತರಕೊಡುವವನಿಗೆ ಎಷ್ಟೋ ಸಂತೋಷ! ಸಮಯೋಚಿತವಾದ ನುಡಿಯಲ್ಲಿ ಎಷ್ಟೋ ಸ್ವಾರಸ್ಯ!
24ಜೀವದ ಮಾರ್ಗವು ವಿವೇಕಿಯನ್ನು ಮೇಲಕ್ಕೆತ್ತುವುದು; ಅದು ಅವನನ್ನು ಪಾತಾಳದಿಂದ ತಪ್ಪಿಸುವುದು.
25ಯೆಹೋವನು ಗರ್ವಿಷ್ಠನ ಮನೆಯನ್ನು ಕೆಡವಿಬಿಡುವನು; ವಿಧವೆಯ ಮೇರೆಯನ್ನು ನೆಲೆಗೊಳಿಸುವನು.
26ಕುಯುಕ್ತಿಯು ಯೆಹೋವನಿಗೆ ಅಸಹ್ಯ, ನಯನುಡಿಯು ಆತನಿಗೆ ಪ್ರಿಯ.
27ಸೂರೆಮಾಡುವವನು ಸ್ವಂತ ಮನೆಯನ್ನು ಬಾಧಿಸುವನು. ಲಂಚವನ್ನೊಪ್ಪದವನು ಸುಖವಾಗಿ ಬಾಳುವನು.
28ಶಿಷ್ಟನ ಹೃದಯ ವಿವೇಚಿಸಿ ಉತ್ತರಕೊಡುತ್ತದೆ, ದುಷ್ಟನ ಬಾಯಿ ಕೆಟ್ಟದ್ದನ್ನು ಕಾರುತ್ತದೆ.
29ಯೆಹೋವನು ದುಷ್ಟರಿಗೆ ದೂರ, ಶಿಷ್ಟರ ಬಿನ್ನಹಕ್ಕೆ ಹತ್ತಿರ.
30ಹಸನ್ಮುಖ ಹೃದಯಕ್ಕೆ ಆನಂದ, ಶುಭಸಮಾಚಾರ ದೇಹಕ್ಕೆ ಆರೋಗ್ಯ.
31ಜೀವಪ್ರದವಾದ ಗದರಿಕೆಗೆ ಕಿವಿಗೊಡುವವನು, ಜ್ಞಾನಿಗಳ ನಡುವೆ ನೆಲೆಗೊಳ್ಳುವನು.
32ಶಿಕ್ಷೆಯನ್ನು ತಿರಸ್ಕರಿಸುವವನು ತನ್ನನ್ನೇ ನಿರಾಕರಿಸಿಕೊಳ್ಳುವನು, ಗದರಿಕೆಯನ್ನು ಕೇಳುವವನು ಬುದ್ಧಿಯನ್ನು ಪಡೆಯುವನು.
33ಯೆಹೋವನ ಭಯವೇ ಜ್ಞಾನೋಪದೇಶ, ಗೌರವಕ್ಕೆ ಮೊದಲು ವಿನಯ.

Read ಜ್ಞಾನೋ 15ಜ್ಞಾನೋ 15
Compare ಜ್ಞಾನೋ 15:4-33ಜ್ಞಾನೋ 15:4-33