Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಕೀರ್ತ - ಕೀರ್ತ 78

ಕೀರ್ತ 78:24-51

Help us?
Click on verse(s) to share them!
24ಸ್ವರ್ಗಧಾನ್ಯವಾದ ಮನ್ನವನ್ನು ಅವರಿಗೋಸ್ಕರ ಸುರಿಸಿ, ಉಣ್ಣಲಿಕ್ಕೆ ಕೊಟ್ಟನು.
25ಅವರಲ್ಲಿ ಪ್ರತಿಯೊಬ್ಬನು ದೇವದೂತರ ಆಹಾರವನ್ನು ಸೇವಿಸಿದನು. ಆತನು ಅವರಿಗೆ ಭೋಜನವನ್ನು ಸಂತೃಪ್ತಿಯಾಗಿ ಅನುಗ್ರಹಿಸಿದನು.
26ಆತನು ಗಗನಮಂಡಲದಲ್ಲಿ ಮೂಡಣ ಗಾಳಿಯನ್ನು ಉಂಟುಮಾಡಿ, ಪ್ರತಾಪದಿಂದ ತೆಂಕಣ ಗಾಳಿಯನ್ನೂ ಹೊಡೆದುಕೊಂಡು ಬಂದು,
27ಧೂಳಿನಷ್ಟು ಮಾಂಸವೃಷ್ಟಿಯನ್ನು ಸುರಿಸಿದನು; ಸಮುದ್ರದ ಮರಳಿನಷ್ಟು ಪಕ್ಷಿಗಳು ಅವರಿದ್ದಲ್ಲಿ ಬೀಳುವಂತೆ ಮಾಡಿದನು.
28ಅವು ಪಾಳೆಯದ ಮಧ್ಯದಲ್ಲಿಯೇ ಅವರ ಬಿಡಾರಗಳ ಸುತ್ತಲೂ ಬಿದ್ದವು.
29ಅವರು ತಿಂದು ಸಂತೃಪ್ತರಾದರು; ಆತನು ಅವರಿಗೆ ಬಯಸಿದ್ದನ್ನು ಕೊಟ್ಟನು.
30ಅವರ ಇಷ್ಟಭೋಜನವು ಅವರಿಗೆ ಅಸಹ್ಯವಾಗುವುದಕ್ಕಿಂತ ಮೊದಲು, ಅವರು ಅದನ್ನು ಇನ್ನೂ ಸೇವಿಸುತ್ತಿರುವಾಗಲೇ,
31ದೇವರ ಕೋಪವು ಅವರಿಗೆ ವಿರುದ್ಧವಾಗಿ ಎದ್ದು, ಅವರಲ್ಲಿ ಕೊಬ್ಬಿದವರನ್ನು ವಧಿಸಿ, ಇಸ್ರಾಯೇಲರ ಪ್ರಾಯಸ್ಥರನ್ನು ನೆಲಕ್ಕುರುಳಿಸಿತು.
32ಇಷ್ಟಾದರೂ ಪುನಃ ಪುನಃ ಪಾಪಮಾಡುತ್ತಾ ಬಂದರು; ಅವರು ಆತನ ಅದ್ಭುತಕೃತ್ಯಗಳನ್ನು ನಂಬದೆ ಹೋದರು.
33ಆದುದರಿಂದ ಆತನು ಅವರ ಜೀವಿತ ದಿನಗಳನ್ನು ಉಸಿರಿನಂತೆಯೂ, ಅವರ ವರ್ಷಗಳನ್ನು ಭಯದಿಂದಲೂ ಮುಗಿಸಿದನು.
34ಸಂಹಾರವಾಗುವಾಗೆಲ್ಲಾ ಅವರು ದೇವರನ್ನು ನೆನಸಿ, ಪುನಃ ಆತನ ಪ್ರಸನ್ನತೆಯನ್ನು ಬಯಸಿ,
35ದೇವರು ತಮ್ಮ ಬಂಡೆಯು, ಪರಾತ್ಪರನಾದ ದೇವರು, ತಮ್ಮ ವಿಮೋಚಕನು ಆಗಿದ್ದಾನೆ ಎಂಬುದನ್ನು ನೆನಪಿಗೆ ತಂದುಕೊಳ್ಳುವರು.
36ಆದರೆ ಅವರು ಆತನನ್ನು ತಮ್ಮ ಬಾಯಿಂದ ವಂಚಿಸಿ, ತಮ್ಮ ನಾಲಿಗೆಯಿಂದ ಸುಳ್ಳಾಡಿದರು.
37ಅವರ ಹೃದಯವು ಆತನಲ್ಲಿ ನೆಲೆಗೊಳ್ಳಲಿಲ್ಲ; ಅವರು ಆತನ ನಿಬಂಧನೆಯನ್ನು ನಿಷ್ಠೆಯಿಂದ ಕೈಗೊಳ್ಳಲಿಲ್ಲ.
38ಆದರೂ ಆತನು ಕರುಣಾಳುವೂ, ಅಪರಾಧಿಗಳನ್ನು ಸಂಹರಿಸದೆ ಕ್ಷಮಿಸುವವನೂ ಆಗಿ, ತನ್ನ ಸಿಟ್ಟನ್ನೆಲ್ಲಾ ಏರಗೊಡಿಸದೆ, ಅದನ್ನು ಹಲವು ಸಾರಿ ತಡೆಯುತ್ತಾ ಬಂದನು.
39ಅವರು ಮಾಂಸಮಾತ್ರದವರೂ, ಶ್ವಾಸವನ್ನು ತಿರುಗಿ ಪಡೆಯದವರಾಗಿದ್ದಾರೆ ಎಂಬುದನ್ನು ನೆನಪುಮಾಡಿಕೊಳ್ಳುತ್ತಿದ್ದನು.
40ಅರಣ್ಯದಲ್ಲಿ ಅವರು ಎಷ್ಟೋ ಸಾರಿ ಅವಿಧೇಯರಾಗಿ, ಅಲ್ಲಿ ಆತನನ್ನು ನೋಯಿಸಿದರು.
41ಆತನನ್ನು ಪದೇಪದೇ ಪರೀಕ್ಷಿಸಿ, ಇಸ್ರಾಯೇಲರ ಸದಮಲಸ್ವಾಮಿಯನ್ನು ಕೋಪಕ್ಕೆ ಗುರಿಮಾಡಿದರು.
42ಅವರು ಆತನ ಭುಜಬಲವನ್ನೂ, ತಮ್ಮನ್ನು ಶತ್ರುಗಳಿಂದ ಬಿಡಿಸಿದ ಸಮಯವನ್ನೂ,
43ಆತನು ಐಗುಪ್ತದಲ್ಲಿ ಮಾಡಿದ ಮಹತ್ಕಾರ್ಯಗಳನ್ನು, ಸೋನ್ ಸೀಮೆಯಲ್ಲಿ ನಡೆಸಿದ ಅದ್ಭುತಗಳನ್ನೂ ಮರೆತುಬಿಟ್ಟರು.
44ಅವರು ಹಳ್ಳದ ನೀರನ್ನು ಕುಡಿಯಲಾಗದಂತೆ, ಆತನು ಅಲ್ಲಿನ ನದಿಗಳನ್ನು ರಕ್ತವನ್ನಾಗಿ ಮಾರ್ಪಡಿಸಿದನು.
45ಅವರನ್ನು ನಾಶಮಾಡುವ ವಿಷದ ಹುಳಗಳನ್ನು, ಹಾಳುಮಾಡುವ ಕಪ್ಪೆಗಳನ್ನು ಕಳುಹಿಸಿಕೊಟ್ಟನು.
46ಅವರ ಬೆಳೆಗಳನ್ನು ಜಿಟ್ಟೆಹುಳಗಳಿಗೂ, ಕಷ್ಟಫಲವನ್ನು ಮಿಡತೆಗಳಿಗೂ ಕೊಟ್ಟುಬಿಟ್ಟನು.
47ಅವರ ದ್ರಾಕ್ಷಾಲತೆಗಳನ್ನು ಆನೆಕಲ್ಲಿನಿಂದಲೂ, ಅತ್ತಿಮರಗಳನ್ನು ಕಲ್ಮಳೆಯಿಂದಲೂ ಹಾಳುಮಾಡಿದನು.
48ಅವರ ದನಗಳನ್ನು ಕಲ್ಮಳೆಗೂ, ಕುರಿಹಿಂಡುಗಳನ್ನು ಸಿಡಿಲಿಗೂ ಒಪ್ಪಿಸಿದನು.
49ಆತನು ಅವರ ಮೇಲೆ ತನ್ನ ಕೋಪರೌದ್ರಗಳನ್ನು, ಉಗ್ರಹಿಂಸೆಗಳನ್ನು ಸಂಹಾರಕ ದೂತಗಣವನ್ನೋ ಎಂಬಂತೆ ಕಳುಹಿಸಿದನು.
50ತನ್ನ ರೌದ್ರಕ್ಕೆ ಎಡೆಗೊಟ್ಟು ಅವರನ್ನು ಬದುಕಗೊಡಿಸದೆ, ಅವರ ಜೀವವನ್ನು ಮರಣವ್ಯಾಧಿಗೆ ಆಹುತಿಕೊಟ್ಟನು.
51ಹಾಮನ ವಂಶದವರ ಪ್ರಥಮಫಲವಾಗಿರುವ ಐಗುಪ್ತ್ಯರ ಚೊಚ್ಚಲಮಕ್ಕಳನ್ನು ಸಂಹರಿಸಿದನು.

Read ಕೀರ್ತ 78ಕೀರ್ತ 78
Compare ಕೀರ್ತ 78:24-51ಕೀರ್ತ 78:24-51