Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಅ. ಕೃ. - ಅ. ಕೃ. 19

ಅ. ಕೃ. 19:12-28

Help us?
Click on verse(s) to share them!
12ಜನರು ಅವನ ಮೈಮೇಲಿನಿಂದ ಕೈವಸ್ತ್ರಗಳನ್ನೂ, ರುಮಾಲುಗಳನ್ನೂ ತಂದು ರೋಗಿಗಳ ಮೇಲೆ ಹಾಕಲು ಅವರ ರೋಗಗಳು ವಾಸಿಯಾದವು, ದುರಾತ್ಮಗಳೂ ಬಿಟ್ಟುಹೋದವು.
13ದುರಾತ್ಮಗಳನ್ನೂ ಬಿಡಿಸುವವರೆನಿಸಿಕೊಂಡು, ದೇಶಸಂಚಾರಿಗಳಾದ ಯೆಹೂದ್ಯರಿದ್ದರು. ಅವರಲ್ಲಿ ಕೆಲವರು ದುರಾತ್ಮ ಪೀಡಿತರ ಮೇಲೆ; “ಪೌಲನು ಸಾರುವ ಯೇಸುವಿನ ಆಣೆ” ಎಂದು ಹೇಳಿ ಕರ್ತನಾದ ಯೇಸುವಿನ ಹೆಸರನ್ನು ಪ್ರಯೋಗಮಾಡುವುದಕ್ಕೆ ತೊಡಗಿದರು.
14ಮುಖ್ಯಯಾಜಕ ಸ್ಕೇವನೆಂಬ ಒಬ್ಬ ಯೆಹೂದ್ಯನ ಏಳು ಮಂದಿ ಮಕ್ಕಳೂ ಹಾಗೆ ಮಾಡುತ್ತಿದ್ದರು.
15ಆದರೆ ದುರಾತ್ಮವು ಅವರಿಗೆ; “ಯೇಸುವಿನ ಗುರುತು ನನಗುಂಟು, ಪೌಲನನ್ನೂ ಬಲ್ಲೆನು, ಆದರೆ ನೀವು ಯಾರು?” ಎಂದು ಹೇಳಿತು;
16ಮತ್ತು ದುರಾತ್ಮ ಹಿಡಿದಿದ್ದ ಆ ಮನುಷ್ಯನು ಅವರ ಮೇಲೆ ಹಾರಿ ಬಿದ್ದು, ಅವರನ್ನೂ ಸೋಲಿಸಿ ಸದೆಬಡಿದಿದ್ದರಿಂದ ಅವರು ಗಾಯಗೊಂಡು ಬೆತ್ತಲೆಯಾಗಿ ಆ ಮನೆಯೊಳಗಿಂದ ಓಡಿಹೋದರು.
17ಈ ಸಂಗತಿಯು ಎಫೆಸದಲ್ಲಿ ವಾಸವಾಗಿದ್ದ ಎಲ್ಲಾ ಯೆಹೂದ್ಯರಿಗೂ, ಗ್ರೀಕರಿಗೂ ತಿಳಿದುಬಂದಾಗ ಅವರೆಲ್ಲರೂ ಭಯಭೀತರಾದರು. ಮತ್ತು ಕರ್ತನಾದ ಯೇಸುವಿನ ಹೆಸರು ಪ್ರಖ್ಯಾತಿಗೆ ಬಂದಿತು.
18ಆತನನ್ನು ನಂಬಿದವರಲ್ಲಿ ಅನೇಕರು ಪಶ್ಚಾತ್ತಾಪದಿಂದ ಬಂದು ತಮ್ಮ ತಮ್ಮ ಪಾಪಕೃತ್ಯಗಳನ್ನು ಒಪ್ಪಿಕೊಂಡರು.
19ಇದಲ್ಲದೆ ಮಾಟ ಮಂತ್ರಗಳನ್ನು ನಡಿಸಿದವರಲ್ಲಿ ಅನೇಕರು ತಮ್ಮ ಮಾಟಮಂತ್ರಗಳ ಪುಸ್ತಕಗಳನ್ನು ತಂದು, ಕೂಡಿಸಿ ಎಲ್ಲರ ಮುಂದೆ ಸುಟ್ಟುಬಿಟ್ಟರು. ಅವುಗಳ ಮೌಲ್ಯವನ್ನು ಲೆಕ್ಕಮಾಡಿ ಐವತ್ತು ಸಾವಿರ ಬೆಳ್ಳಿ ನಾಣ್ಯ ಆಯಿತೆಂದು ತಿಳಿದುಕೊಂಡರು.
20ಈ ರೀತಿಯಾಗಿ ಕರ್ತನ ವಾಕ್ಯವು ಬಹಳವಾಗಿ ಹೆಚ್ಚುತ್ತಾ ಪ್ರಬಲವಾಯಿತು.
21ಈ ಸಂಗತಿಗಳು ಆದ ಮೇಲೆ ಪೌಲನು ತಾನು ಮಕೆದೋನ್ಯದಲ್ಲಿಯೂ, ಅಖಾಯದಲ್ಲಿಯೂ ಸಂಚಾರಮಾಡಿ ಯೆರೂಸಲೇಮಿಗೆ ಹೋಗಬೇಕೆಂದು ಮನಸ್ಸಿನಲ್ಲಿ ಯೋಚಿಸಿ; “ಅಲ್ಲಿಗೆ ಹೋದ ಮೇಲೆ ರೋಮಾಪುರವನ್ನು ಸಹ ನೋಡಬೇಕೆಂದು” ಹೇಳಿದನು.
22ಆದರೆ ಅವನು ತನಗೆ ಸೇವೆಮಾಡುವವರಲ್ಲಿ ಇಬ್ಬರಾದ ತಿಮೊಥೆಯನನ್ನೂ ಮತ್ತು ಎರಸ್ತನನ್ನೂ ಮಕೆದೋನ್ಯಕ್ಕೆ ಕಳುಹಿಸಿ ತಾನು ಆಸ್ಯಸೀಮೆಯಲ್ಲಿ ಕೆಲವು ಕಾಲ ತಂಗಿದನು.
23ಆ ಕಾಲದಲ್ಲಿ ಈ ಮಾರ್ಗದ ವಿಷಯವಾಗಿ ಬಹಳ ಗಲಭೆ ಹುಟ್ಟಿತು.
24ಹೇಗೆಂದರೆ, ದೇಮೇತ್ರಿಯನೆಂಬ ಒಬ್ಬ ಅಕ್ಕಸಾಲಿಗನು ಬೆಳ್ಳಿಯಿಂದ ಅರ್ತೆಮೀ ದೇವಿಯ ಗುಡಿಯಂತೆ ಸಣ್ಣಸಣ್ಣ ಗುಡಿಗಳನ್ನು ಮಾಡಿಸುವವನಾಗಿದ್ದು ಆ ಕಸುಬಿನವರಿಗೆ ಬಹಳ ಲಾಭವನ್ನು ಕೊಡುತ್ತಿದ್ದನು.
25ಅವನು ಅವರನ್ನೂ ಮತ್ತು ಆ ಕಸುಬಿಗೆ ಸಂಬಂಧಪಟ್ಟ ಕೆಲಸದವರನ್ನೂ ಒಟ್ಟಿಗೆ ಕರೆಸಿ ಅವರಿಗೆ; “ಜನರೇ, ಈ ಕೆಲಸದಿಂದ ನಮಗೆ ಐಶ್ವರ್ಯ ಉಂಟಾಗುತ್ತದೆಂದು ನೀವು ಬಲ್ಲಿರಿ.
26ಆದರೆ ಕೈಯಿಂದ ಮಾಡಿದ ಮೂರ್ತಿಗಳು ದೇವರುಗಳಲ್ಲವೆಂದು ಆ ಪೌಲನು ಹೇಳಿ ಎಫೆಸದಲ್ಲಿ ಮಾತ್ರವಲ್ಲದೆ ಹೆಚ್ಚುಕಡಿಮೆ ಆಸ್ಯಸೀಮೆಯಲ್ಲೆಲ್ಲಾ ಬಹಳ ಜನರನ್ನು ಒಡಂಬಡಿಸಿ ತಿರುಗಿಸಿಬಿಟ್ಟಿದ್ದಾನೆ ಎಂಬುದನ್ನು ನೀವು ನೋಡುತ್ತಿದ್ದೀರಿ, ಕೇಳುತ್ತಿದ್ದೀರಿ.
27ಇದರಿಂದ ನಮ್ಮ ಉದ್ಯೋಗಕ್ಕೆ ಕುಂದು ಬರುವುದಲ್ಲದೆ ಅರ್ತೆಮೀ ಮಹಾದೇವಿಯ ದೇವಸ್ಥಾನವು ಗಣನೆಗೆ ಬಾರದೆಹೋಗುವ ಹಾಗೆಯೂ, ಎಲ್ಲಾ ಆಸ್ಯಸೀಮೆಯೂ, ಲೋಕವೆಲ್ಲಾ ಪೂಜಿಸುವ ಈ ದೇವಿಯ ವೈಭವಕ್ಕೆ ಹಾನಿಬರುವ ಹಾಗೆ ಗಂಡಾಂತರವುಂಟಾಗುತ್ತದೆಂದು” ಹೇಳಿದನು.
28ಅವರು ಈ ಮಾತುಗಳನ್ನು ಕೇಳಿ ಕೋಪಗೊಂಡು; “ಎಫೆಸದವರ ಅರ್ತೆಮೀದೇವಿ ಮಹಾದೇವಿ” ಎಂದು ಅರ್ಭಟಿಸಿದರು.

Read ಅ. ಕೃ. 19ಅ. ಕೃ. 19
Compare ಅ. ಕೃ. 19:12-28ಅ. ಕೃ. 19:12-28