Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಅ. ಕೃ. - ಅ. ಕೃ. 12

ಅ. ಕೃ. 12:3-18

Help us?
Click on verse(s) to share them!
3ಇದು ಯೆಹೂದ್ಯರಿಗೆ ಮೆಚ್ಚಿಕೆಯಾಗಿದೆ ಎಂದು ತಿಳಿದು, ಅಷ್ಟಕ್ಕೆ ನಿಲ್ಲದೆ ಪೇತ್ರನನ್ನೂ ಬಂಧಿಸಿದನು. ಆ ಕಾಲದಲ್ಲಿ ಪಸ್ಕಹಬ್ಬ ಅಂದರೆ ಹುಳಿಯಿಲ್ಲದ ರೊಟ್ಟಿಯ ಹಬ್ಬ ನಡೆಯುತ್ತಿತ್ತು.
4ಅವನನ್ನು ಪಸ್ಕ ಹಬ್ಬವಾದ ಮೇಲೆ ಜನರ ಮುಂದೆ ತರಿಸಬೇಕೆಂಬ ಯೋಚನೆಯಿಂದ ಸೆರೆಯಲ್ಲಿ ಹಾಕಿಸಿ ಅವನನ್ನು ಕಾಯಲಿಕ್ಕೆ ನಾಲ್ಕು ನಾಲ್ಕು ಸಿಪಾಯಿಗಳಿದ್ದ ನಾಲ್ಕು ಗುಂಪುಗಳ ವಶಕ್ಕೆ ಕೊಟ್ಟನು.
5ಪೇತ್ರನು ಸೆರೆಮನೆಯೊಳಗೆ ಕಾವಲಲ್ಲಿದ್ದಾಗ, ಸಭೆಯವರು ಅವನಿಗೋಸ್ಕರ ಆಸಕ್ತಿಯಿಂದ ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದರು.
6ಹೆರೋದನು ಅವನನ್ನು ಜನರ ಮುಂದೆ ತರಿಸಬೇಕೆಂದಿದ್ದ ದಿನದ ಹಿಂದಿನ ರಾತ್ರಿಯಲ್ಲಿ, ಪೇತ್ರನು ಎರಡು ಸರಪಣಿಗಳಿಂದ ಕಟ್ಟಲ್ಪಟ್ಟವನಾಗಿ, ಇಬ್ಬರು ಸಿಪಾಯಿಗಳ ನಡುವೆ ನಿದ್ದೆಮಾಡುತ್ತಿದ್ದನು. ಕಾವಲುಗಾರರು ಬಾಗಿಲ ಮುಂದೆ ನಿಂತು ಸೆರೆಮನೆಯನ್ನು ಕಾಯುತ್ತಿದ್ದರು.
7ಫಕ್ಕನೆ ಕರ್ತನ ದೂತನು ಪೇತ್ರನೆದುರಿಗೆ ನಿಂತನು; ಅವನಿದ್ದ ಕೋಣೆಯಲ್ಲಿ ಬೆಳಕು ಹೊಳೆಯಿತು. ಅವನು ಪೇತ್ರನ ಪಕ್ಕೆಯನ್ನು ತಟ್ಟಿ ಎಬ್ಬಿಸಿ; “ತಟ್ಟನೆ ಏಳು” ಅಂದನು. ಆಗಲೇ ಅವನ ಕೈಗಳಿಗೆ ಹಾಕಿದ್ದ ಸರಪಣಿಗಳು ಕಳಚಿಬಿದ್ದವು.
8ಆ ದೂತನು ಅವನಿಗೆ; “ನಡುಕಟ್ಟಿಕೊಂಡು, ನಿನ್ನ ಕೆರಗಳನ್ನು ಮೆಟ್ಟಿಕೋ” ಎಂದು ಹೇಳಲು, ಅವನು ಹಾಗೆಯೇ ಮಾಡಿದನು. “ನಿನ್ನ ಮೇಲಂಗಿಯನ್ನು ಹಾಕಿಕೊಂಡು ನನ್ನ ಹಿಂದೆ ಬಾ” ಅಂದನು.
9ಅವನು ಹೊರಗೆ ಬಂದು ಆ ದೂತನ ಹಿಂದೆಯೇ ಹೋಗುತ್ತಾ, ದೂತನ ಮೂಲಕವಾಗಿ ನಡೆದ ಸಂಗತಿ ನಿಜವಾದದ್ದೆಂದು ತಿಳಿಯದೆ ತಾನು ನೋಡಿದ್ದು ಕನಸು ಎಂದು ತಿಳಿದನು.
10ಅವರು ಮೊದಲನೆಯ ಮತ್ತು ಎರಡನೆಯ ಕಾವಲುಗಳನ್ನು ದಾಟಿ, ಪಟ್ಟಣಕ್ಕೆ ಹೋಗುವ ಕಬ್ಬಿಣದ ಬಾಗಿಲಿಗೆ ಬಂದಾಗ ಅದು ತನ್ನಷ್ಟಕ್ಕೆ ತಾನೇ ಅವರಿಗೆ ತೆರೆಯಿತು; ಅವರು ಹೊರಗೆ ಬಂದು ಒಂದು ಬೀದಿಯನ್ನು ದಾಟಿದರು; ಕೂಡಲೇ ಆ ದೂತನು ಅವನನ್ನು ಬಿಟ್ಟು ಹೋದನು.
11ಆಗ ಪೇತ್ರನು ಎಚ್ಚರಗೊಂಡು; “ಕರ್ತನು ತನ್ನ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ, ಯೆಹೂದ್ಯಜನರು ನನಗೆ ಮಾಡಬೇಕೆಂದಿದ್ದ ಕೇಡಿನಿಂದಲೂ, ನನ್ನನ್ನು ಬಿಡಿಸಿದನೆಂದು ನನಗೀಗ ನಿಜವಾಗಿ ತಿಳಿಯಿತು” ಎಂದು ಅಂದುಕೊಂಡನು.
12ಆತನು ಇದನ್ನು ತಿಳಿದುಕೊಂಡ ತರುವಾಯ, ಅವನು ಮಾರ್ಕನೆನಿಸಿಕೊಳ್ಳುವ ಯೋಹಾನನ ತಾಯಿಯಾದ ಮರಿಯಳ ಮನೆಗೆ ಬಂದನು. ಅಲ್ಲಿ ಅನೇಕರು ಕೂಡಿಬಂದು ಪ್ರಾರ್ಥನೆಮಾಡುತ್ತಿದ್ದರು.
13ಪೇತ್ರನು ಬಾಗಿಲಿನ ಕದವನ್ನು ತಟ್ಟಲು ರೋದೆ ಎಂಬ ಒಬ್ಬ ಕೆಲಸದವಳು ನೋಡುವುದಕ್ಕೆ ಬಂದಳು.
14ಅವಳು ಪೇತ್ರನ ಧ್ವನಿಯನ್ನು ಗುರುತುಹಿಡಿದು ಅತಿಯಾದ ಆನಂದದಿಂದ ಬಾಗಿಲನ್ನು ತೆರೆಯದೆ ಒಳಕ್ಕೆ ಓಡಿಹೋಗಿ; “ಪೇತ್ರನು ಬಾಗಿಲ ಮುಂದೆ ನಿಂತಿದ್ದಾನೆ” ಎಂದು ತಿಳಿಸಿದಳು. ಅವರು ಅವಳಿಗೆ; “ನಿನಗೆ ಹುಚ್ಚು ಹಿಡಿದದೆ” ಎಂದು ಹೇಳಿದರು.
15ಆದರೆ ಅವಳು ತಾನು ಹೇಳಿದಂತೆಯೇ ಅದೆ ಎಂದು ದೃಢವಾಗಿ ಹೇಳುತ್ತಾ ಇರಲು, ಅದಕ್ಕೆ ಅವರು; “ಅವನ ದೂತನಾಗಿರಬೇಕು” ಅಂದರು.
16ಆದರೆ ಪೇತ್ರನು ಬಾಗಿಲು ತಟ್ಟುತ್ತಲೇ ಇರಲು, ಅವರು ಬಾಗಿಲನ್ನು ತೆರೆದು ಅವನನ್ನು ಕಂಡು ಬೆರಗಾದರು.
17ಅವನು ಸುಮ್ಮನಿರಿ ಎಂದು ಅವರಿಗೆ ಕೈಸನ್ನೆ ಮಾಡಿ ತನ್ನನ್ನು ಕರ್ತನು ಸೆರೆಮನೆಯೊಳಗಿಂದ ಹೊರಗೆ ಕರೆದುಕೊಂಡು ಬಂದ ರೀತಿಯನ್ನು ವಿವರಿಸಿ; “ಈ ಸಂಗತಿಗಳನ್ನು ಯಾಕೋಬನಿಗೂ, ಸಹೋದರರೆಲ್ಲರಿಗೂ ತಿಳಿಸಿರೆಂದು” ಹೇಳಿ ಬೇರೆ ಸ್ಥಳಕ್ಕೆ ಹೊರಟುಹೋದನು.
18ಬೆಳಗಾದ ಮೇಲೆ ಪೇತ್ರನು ಏನಾದನೆಂದು ಸಿಪಾಯಿಗಳಲ್ಲಿ ಬಹಳ ಕಳವಳ ಉಂಟಾಯಿತು.

Read ಅ. ಕೃ. 12ಅ. ಕೃ. 12
Compare ಅ. ಕೃ. 12:3-18ಅ. ಕೃ. 12:3-18