Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಅ. ಕೃ. - ಅ. ಕೃ. 10

ಅ. ಕೃ. 10:24-44

Help us?
Click on verse(s) to share them!
24ಮರುದಿನ ಅವನು ಕೈಸರೈಯಕ್ಕೆ ಬಂದು ಸೇರಿದನು. ಕೊರ್ನೆಲ್ಯನು ತನ್ನ ಬಂಧುಬಳಗದವರನ್ನೂ ಮತ್ತು ಅಪ್ತಮಿತ್ರರನ್ನೂ ಕರೆಯಿಸಿ ಪೇತ್ರನಿಗಾಗಿ ಎದುರುನೋಡುತ್ತಿದ್ದನು.
25ಪೇತ್ರನು ಬಂದಾಗ ಕೊರ್ನೆಲ್ಯನು ಅವನನ್ನು ಎದುರುಗೊಂಡು ಅವನ ಪಾದಕ್ಕೆ ಬಿದ್ದು ನಮಸ್ಕಾರ ಮಾಡಿದನು.
26ಆದರೆ ಪೇತ್ರನು; “ಏಳು, ನಾನೂ ಸಹಾ ಮನುಷ್ಯನೇ” ಎಂದು ಹೇಳಿ, ಅವನನ್ನು ಎತ್ತಿ,
27ಅವನ ಸಂಗಡ ಸಂಭಾಷಣೆಮಾಡುತ್ತಾ ಮನೆಯೊಳಕ್ಕೆ ಬಂದನು.
28ಅಲ್ಲಿ ಬಹು ಜನರು ಸೇರಿ ಬಂದಿರುವುದನ್ನು ಕಂಡು ಅವರಿಗೆ; “ಯೆಹೂದ್ಯರು, ಅನ್ಯ ಜನರೊಂದಿಗೆ ಸಂಪರ್ಕ ಇಟ್ಟುಕೊಳ್ಳುವುದು, ಅವರೊಂದಿಗೆ ವ್ಯವಹರಿಸುವುದು ಯೆಹೂದ್ಯರ ಸಂಪ್ರದಾಯಕ್ಕೆ ನಿಷಿದ್ಧವಾಗಿದೆ ಎಂಬುದು ನಿಮಗೆ ತಿಳಿದಿದೆ. ನನಗಂತೂ ಯಾವ ಮನುಷ್ಯನನ್ನೂ ಹೊಲೆಯಾದವನು, ಇಲ್ಲವೆ ಅಶುದ್ಧನು ಎಂದು ಅನ್ನಬಾರದೆಂದು ದೇವರು ತೋರಿಸಿಕೊಟ್ಟಿದ್ದಾನೆ.
29ಆದಕಾರಣ ನೀವು ನನ್ನನ್ನು ಕರೆಕಳುಹಿಸಿದಾಗ ನಾನು ಯಾವ ಎದುರುಮಾತನ್ನೂ ಆಡದೆ ಬಂದೆನು. ಈಗ ನೀವು ನನ್ನನ್ನು ಕರೆಯಿಸಿದ ಉದ್ದೇಶವೇನು ಎಂದು ನನಗೆ ತಿಳಿಸಬೇಕು” ಎಂದು ಕೇಳಿದನು.
30ಅದಕ್ಕೆ ಕೊರ್ನೇಲ್ಯನು; “ನಾನು ನಾಲ್ಕು ದಿನಗಳ ಹಿಂದೆ ಇದೇ ಹೊತ್ತಿನಲ್ಲಿ ಮೂರನೇ ಗಳಿಗೆಯ ದೇವರ ಪ್ರಾರ್ಥನೆಯನ್ನು ನನ್ನ ಮನೆಯಲ್ಲಿ ಮಾಡುತ್ತಿದ್ದಾಗ ಹೊಳೆಯುವ ವಸ್ತ್ರವನ್ನು ಧರಿಸಿಕೊಂಡಿದ್ದ ಒಬ್ಬ ಮನುಷ್ಯನು ನನ್ನೆದುರಿಗೆ ನಿಂತುಕೊಂಡು;
31ಕೊರ್ನೆಲ್ಯನೇ ‘ನಿನ್ನ ಪ್ರಾರ್ಥನೆಯನ್ನು ದೇವರು ಕೇಳಿದ್ದಾನೆ, ನಿನ್ನ ದಾನಧರ್ಮಗಳು ದೇವರ ಸನ್ನಿಧಾನದಲ್ಲಿ ನೆನಪಿಗೆ ಬಂದವು.
32ನೀನು ಯಾರನ್ನಾದರು ಯೊಪ್ಪಕ್ಕೆ ಕಳುಹಿಸಿ ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರೆಯಿಸಬೇಕು, ಅವನು ಚಮ್ಮಾರನಾದ ಸೀಮೋನನ ಮನೆಯಲ್ಲಿ ಇಳುಕೊಂಡಿದ್ದಾನೆ; ಆ ಮನೆ ಸಮುದ್ರ ತೀರದ ಸಮೀಪವಿದೆ’ ಅಂದನು.
33ನಾನು ತಡಮಾಡದೆ ನಿಮ್ಮ ಹತ್ತಿರ ಜನರನ್ನು ಕಳುಹಿಸಿದೆನು. ನೀವು ಬಂದದ್ದು ಒಳ್ಳೆಯದಾಯಿತು. ಹೀಗಿರುವುದರಿಂದ ಕರ್ತನು ನಿನಗೆ ಅಪ್ಪಣೆಕೊಟ್ಟಿರುವ ಎಲ್ಲಾ ಮಾತುಗಳನ್ನು ಕೇಳುವುದಕ್ಕೆ ನಾವೆಲ್ಲರು ಈಗ ದೇವರ ಸನ್ನಿಧಾನದಲ್ಲಿ ಸೇರಿಬಂದಿದ್ದೇವೆ” ಅಂದನು.
34ಆಗ ಪೇತ್ರನು ಉಪದೇಶಮಾಡಲಾರಂಭಿಸಿ ಹೇಳಿದ್ದೇನಂದರೆ; “ನಿಜವಾಗಿಯೂ, ದೇವರು ಪಕ್ಷಪಾತಿಯಲ್ಲ,
35ಯಾವ ಜನಾಂಗದವರೇ ಆಗಲಿ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ.
36ಎಲ್ಲಾ ಜನರಿಗೂ ಕರ್ತನಾಗಿರುವ ಯೇಸು ಕ್ರಿಸ್ತನ ಮೂಲಕ ದೇವರು ಸಮಾಧಾನದ ಶುಭಸಮಾಚಾರವನ್ನು ಪ್ರಕಟಿಸುತ್ತಾ ಇಸ್ರಾಯೇಲ್ ಜನರಿಗೆ ಅನುಗ್ರಹಿಸಿದ ವಾಕ್ಯವು ನಿಮಗೇ ತಿಳಿದಿದೆ.
37ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಯೋಹಾನನು ಸಾರಿದ ತರುವಾಯ ಈ ವಾಕ್ಯವು ಗಲಿಲಾಯದಿಂದ ಪ್ರಾರಂಭವಾಗಿ, ಯೂದಾಯದಲ್ಲೆಲ್ಲಾ ಪ್ರಬಲವಾಯಿತು.
38ದೇವರು ನಜರೇತಿನ ಯೇಸುವನ್ನು ಪವಿತ್ರಾತ್ಮದಿಂದಲೂ, ಬಲದಿಂದಲೂ ಅಭಿಷೇಕಿಸಿದನು; ದೇವರು ಆತನ ಸಂಗಡ ಇದ್ದುದರಿಂದ ಆತನು ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾ; ಸೈತಾನನಿಂದ ಬಾಧಿಸಲ್ಪಟ್ಟವರನ್ನು ಗುಣಪಡಿಸುತ್ತಾ ಸಂಚರಿಸಿದನು; ಇದೆಲ್ಲಾ ನಿಮಗೆ ಗೊತ್ತಾಗಿರುವ ಸಂಗತಿಯೇ.
39ಆತನು ಯೆಹೂದ್ಯರ ಸೀಮೆಯಲ್ಲಿಯೂ, ಯೆರೂಸಲೇಮಿನಲ್ಲಿಯೂ ಮಾಡಿದ ಎಲ್ಲಾ ಕಾರ್ಯಗಳಿಗೆ ನಾವು ಸಾಕ್ಷಿಗಳಾಗಿದ್ದೇವೆ.
40ಆತನನ್ನು ಮರದ ಕಂಬಕ್ಕೆ ತೂಗುಹಾಕಿ ಕೊಂದರು. ದೇವರು ಆತನನ್ನು ಮೂರನೆಯ ದಿನದಲ್ಲಿ ಎಬ್ಬಿಸಿ, ಪ್ರತ್ಯಕ್ಷನಾಗುವಂತೆ ಮಾಡಿದನು.
41ಆತನು ಎಲ್ಲರಿಗೂ ಪ್ರತ್ಯಕ್ಷನಾಗದೆ, ದೇವರು ಮುಂಚಿತವಾಗಿ ಆರಿಸಿಕೊಂಡಿದ್ದ ಸಾಕ್ಷಿಗಳಾದ ನಮಗೆ ಪ್ರತ್ಯಕ್ಷನಾದನು. ಆತನು ಸತ್ತವರೊಳಗಿಂದ ಜೀವಿತನಾಗಿ ಎದ್ದು ಬಂದ ಮೇಲೆ ನಾವು ಆತನ ಸಂಗಡ ಊಟ ಮಾಡಿದೆವು.
42ಆತನೇ ಜೀವವಿರುವವರಿಗೂ, ಸತ್ತವರಿಗೂ ನ್ಯಾಯಾಧಿಪತಿಯಾಗಿ ದೇವರಿಂದ ನೇಮಕವಾದವನು ಎಂಬುದನ್ನು ಜನರಿಗೆ ಸಾರಿ, ಸಾಕ್ಷಿ ಹೇಳಬೇಕೆಂದು ದೇವರು ನಮಗೆ ಅಪ್ಪಣೆಕೊಟ್ಟನು.
43ಆತನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನು ಆತನ ಹೆಸರಿನ ಮೂಲಕವಾಗಿ ಪಾಪ ಕ್ಷಮಾಪಣೆಯನ್ನು ಹೊಂದುವನೆಂದು ಆತನ ವಿಷಯದಲ್ಲಿ ಪ್ರವಾದಿಗಳೆಲ್ಲರು ಸಾಕ್ಷಿ ಹೇಳಿದ್ದಾರೆ” ಅಂದನು.
44ಪೇತ್ರನು, ಈ ವಾಕ್ಯಗಳನ್ನು ಇನ್ನೂ ಹೇಳುತ್ತಿರುವಾಗಲೇ, ಅವನ ವಾಕ್ಯಗಳನ್ನು ಕೇಳಿದವರೆಲ್ಲರ ಮೇಲೆ ಪವಿತ್ರಾತ್ಮನು ಇಳಿದನು.

Read ಅ. ಕೃ. 10ಅ. ಕೃ. 10
Compare ಅ. ಕೃ. 10:24-44ಅ. ಕೃ. 10:24-44