9ಆ ಜನಾಂಗವು ಸಿಂಹದಂತೆ ಕಾಲುಮುದುರಿ ಹೊಂಚುಹಾಕಿಕೊಂಡಿದೆ, ಮೃಗೇಂದ್ರನಿಗೆ ಸಮನಾದ ಆ ಜನರನ್ನು ಕೆಣಕುವುದು ಯಾರಿಂದಾದೀತು? ಇಸ್ರಾಯೇಲರೇ, ನಿಮ್ಮನ್ನು ಆಶೀರ್ವದಿಸುವವನಿಗೆ ಆಶೀರ್ವಾದವೂ, ಶಪಿಸುವವನಿಗೆ ಶಾಪವೂ ಉಂಟಾಗುವುದು” ಎಂದನು.
10ಆಗ ಬಾಲಾಕನು ಬಿಳಾಮನ ಮೇಲೆ ಕೋಪಗೊಂಡು ಚಪ್ಪಾಳೆಹೊಡೆದು ಅವನಿಗೆ, “ನನ್ನ ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆದೆನು. ಆದರೆ ಇಗೋ, ನೀನು ಅವರನ್ನು ಮೂರು ಸಾರಿಯೂ ಆಶೀರ್ವದಿಸಿದೆ.
11ಆದಕಾರಣ ನನ್ನನ್ನು ಬಿಟ್ಟು ನಿನ್ನ ಊರಿಗೆ ಹೋಗಿಬಿಡು. ನಿನ್ನನ್ನು ಬಹಳವಾಗಿ ಸನ್ಮಾನಿಸಿ ಘನಪಡಿಸುವೆನೆಂದು ಹೇಳಿಕೊಂಡೆನು. ಆದರೆ ನಿನಗೆ ಸನ್ಮಾನಮಾಡದಂತೆ ಯೆಹೋವನು ಅಡ್ಡಿಮಾಡಿದ್ದಾನೆ” ಎಂದು ಹೇಳಿದನು.
12ಅದಕ್ಕೆ ಬಿಳಾಮನು ಬಾಲಾಕನಿಗೆ, “ನೀನು ನನ್ನ ಬಳಿ ಕಳುಹಿಸಿದ ಸೇವಕನಿಗೆ,
13‘ಬಾಲಾಕನು ನನಗೆ ತನ್ನ ಮನೇ ತುಂಬುವಷ್ಟು ಬೆಳ್ಳಿಬಂಗಾರವನ್ನು ದಾನಮಾಡಿದರೂ ನಾನು ಯೆಹೋವನ ಆಜ್ಞೆಯನ್ನು ಮೀರಿ ನನ್ನ ಇಷ್ಟದಂತೆ ಒಳ್ಳೇಯದನ್ನಾದರೂ, ಕೆಟ್ಟದ್ದನ್ನಾದರೂ ಮಾಡಲಾರೆ. ಯೆಹೋವನು ಏನು ಹೇಳುತ್ತಾನೋ ಅದನ್ನೇ ಮಾತನಾಡುವೆನು ಎಂದು ಹೇಳಲಿಲ್ಲವೋ?’
14ಈಗ ನಾನು ನನ್ನ ಜನರ ಬಳಿಗೆ ಹೋಗುತ್ತೇನೆ. ಆದರೆ ಕಡೆಗೆ ಆ ಜನರು ನಿನ್ನ ಜನರಿಗೆ ಮುಂದಿನ ದಿನಗಳಲ್ಲಿ ಏನು ಮಾಡುವರೋ ಅದನ್ನು ನಿನಗೆ ತಿಳಿಸುತ್ತೇನೆ” ಎಂದನು.
15ಬಿಳಾಮನು ಪದ್ಯರೂಪವಾಗಿ ಪ್ರವಾದಿಸಿದನು, “ಬೆಯೋರನ ಮಗನಾದ ಬಿಳಾಮನಿಗುಂಟಾದ ದೈವೋಕ್ತಿ, ಮನೋದೃಷ್ಟಿಯಿಂದ ನೋಡುವ ಪುರುಷನು ನುಡಿದದ್ದು.