Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಅರಣ್ಯ - ಅರಣ್ಯ 15

ಅರಣ್ಯ 15:19-41

Help us?
Click on verse(s) to share them!
19ನೀವು ಭೂಮಿಯಿಂದ ಬೆಳೆದ ಬೆಳೆಯನ್ನು ಉಪಯೋಗಿಸುವಾಗ, ಸ್ವಲ್ಪವನ್ನು ಯೆಹೋವನಿಗೋಸ್ಕರ ಕಾಣಿಕೆಯಾಗಿ ಪ್ರತ್ಯೇಕಿಸಬೇಕು.
20ನೀವು ಕಣದಲ್ಲಿ ತುಳಿಸಿದ ದವಸದಲ್ಲಿ ಸ್ವಲ್ಪವನ್ನು ಯೆಹೋವನದೆಂದು ಪ್ರತ್ಯೇಕಿಸುವ ಪ್ರಕಾರವೇ ಕಣಕದಿಂದ ಮಾಡುವ ಮೊದಲನೆಯ ರೊಟ್ಟಿಯನ್ನೂ ಕಾಣಿಕೆಯಾಗಿ ಪ್ರತ್ಯೇಕಿಸಬೇಕು.
21“‘ನೀವೂ ಮತ್ತು ನಿಮ್ಮ ಸಂತತಿಯವರೂ ಕಣಕದಿಂದ ಮಾಡುವ ಮೊದಲನೆಯ ರೊಟ್ಟಿಯನ್ನು ಯೆಹೋವನಿಗೋಸ್ಕರ ಕಾಣಿಕೆಯಾಗಿ ಪ್ರತ್ಯೇಕಿಸಬೇಕು.
22ನಾನು ಮೋಶೆಗೆ ಹೇಳಿದ ಈ ಎಲ್ಲಾ ಆಜ್ಞೆಗಳಿಗೆ ನೀವು ವಿಧೇಯರಾಗಿರದಿದ್ದರೆ,
23ಆತನು ನಿಮಗೆ ಆಜ್ಞೆಗಳನ್ನು ಕೊಟ್ಟ ದಿನದಿಂದ ಮೊದಲುಗೊಂಡು ನಿಮಗೂ ಮತ್ತು ನಿಮ್ಮ ಸಂತತಿಗೂ ಮೋಶೆಯ ಮುಖಾಂತರ ಆಜ್ಞಾಪಿಸಿದಂತೆ ನೀವು ಮಾಡದೆ ಹೋದರೆ,
24ಯಾವಾಗಲಾದರೂ ಸಮೂಹದವರು ತಿಳಿಯದೆ ಮೀರಿ ದ್ರೋಹಿಗಳಾದರೆ, ಸರ್ವಸಮೂಹದವರೆಲ್ಲರು ಒಟ್ಟಾಗಿ ಯೆಹೋವನಿಗೆ ಸುವಾಸನೆಯನ್ನು ಉಂಟುಮಾಡುವುದಕ್ಕಾಗಿ ಸರ್ವಾಂಗಹೋಮವಾಗಿ ಒಂದು ಹೋರಿಯನ್ನೂ, ನೈವೇದ್ಯಕ್ಕಾಗಿ ಅದಕ್ಕೆ ನೇಮಿತವಾದ ಧಾನ್ಯದ್ರವ್ಯಗಳನ್ನೂ ಮತ್ತು ಪಾನದ್ರವ್ಯಗಳನ್ನೂ, ದೋಷಪರಿಹಾರ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು.
25ಯಾಜಕನು ಇಸ್ರಾಯೇಲರ ಸರ್ವಸಮೂಹದವರಿಗೋಸ್ಕರ ದೋಷಪರಿಹಾರವನ್ನು ಮಾಡಿದಾಗ ಅವರಿಗೆ ಕ್ಷಮಾಪಣೆಯಾಗುವುದು. ಅವರು ಆ ತಪ್ಪನ್ನು ತಿಳಿಯದೆ ಮಾಡಿದುದರಿಂದ ಮತ್ತು ಅವರು ಅದನ್ನು ಪರಿಹರಿಸುವುದಕ್ಕಾಗಿ ಯೆಹೋವನ ಸನ್ನಿಧಿಯಲ್ಲಿ ಕಾಣಿಕೆಯಾಗಿ ಸರ್ವಾಂಗ ಹೋಮವನ್ನೂ, ದೋಷಪರಿಹಾರಕ ಯಜ್ಞವನ್ನೂ ಮಾಡಿಸಿದ್ದರಿಂದ,
26ಜನರೆಲ್ಲರೂ ಆ ತಪ್ಪನ್ನು ತಿಳಿಯದೆ ಮಾಡಿದ್ದರಿಂದ, ಇಸ್ರಾಯೇಲರ ಸರ್ವಸಮೂಹದವರಿಗೂ, ಅವರಲ್ಲಿ ಇಳಿದುಕೊಂಡಿರುವ ಅನ್ಯದೇಶದವರಿಗೂ ಕ್ಷಮಾಪಣೆಯಾಗುವುದು.
27“‘ಯಾವನಾದರೂ ತಿಳಿಯದೆ ತಪ್ಪು ಮಾಡಿದರೆ ಅವನು ದೋಷಪರಿಹಾರಕ ಯಜ್ಞಕ್ಕಾಗಿ ಒಂದು ವರ್ಷದ ಆಡನ್ನು ಸಮರ್ಪಿಸಬೇಕು.
28ತಿಳಿಯದೆ ತಪ್ಪು ಮಾಡಿದವನಿಗೋಸ್ಕರ ಯಾಜಕನು ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡಿದಾಗ ಅವನಿಗೆ ಕ್ಷಮಾಪಣೆಯಾಗುವುದು.
29ಈ ವಿಷಯದಲ್ಲಿ ಇಸ್ರಾಯೇಲರಲ್ಲಿರುವ ಸ್ವದೇಶದವರಿಗೂ, ಅನ್ಯದೇಶದವರಿಗೂ ಒಂದೇ ನಿಯಮವಿರಬೇಕು,
30ಆದರೆ ಸ್ವದೇಶದವನಾಗಲಿ, ಅನ್ಯದೇಶದವನಾಗಲಿ ಯಾವನಾದರೂ ಮನಃಪೂರ್ವಕವಾಗಿ ಹಟದಿಂದ ಪಾಪವನ್ನು ಮಾಡಿದರೆ ಅವನು ಯೆಹೋವನನ್ನು ದೂಷಿಸಿದವನಾದುದರಿಂದ ಕುಲದಿಂದ ಹೊರಗೆ ಹಾಕಬೇಕು.
31ಆ ಮನುಷ್ಯನು ಯೆಹೋವನ ಮಾತನ್ನು ತಾತ್ಸಾರಮಾಡಿ ಆತನ ಆಜ್ಞೆಯನ್ನು ಮೀರಿದುದರಿಂದ ಕುಲದಿಂದ ಹೊರಗೆ ಹಾಕಬೇಕು. ಅವನು ತನ್ನ ಪಾಪದ ಫಲವನ್ನು ಅನುಭವಿಸಲಿ.’”
32ಇಸ್ರಾಯೇಲರು ಮರುಭೂಮಿಯಲ್ಲಿ ಇದ್ದಾಗ ಒಬ್ಬನು ಸಬ್ಬತ್ ದಿನದಲ್ಲಿ ಕಟ್ಟಿಗೆ ಕೂಡಿಸುವುದನ್ನು ಕಂಡರು.
33ಅದನ್ನು ನೋಡಿದವರು ಅವನನ್ನು ಮೋಶೆ, ಆರೋನರ ಮತ್ತು ಸರ್ವಸಮೂಹದವರ ಬಳಿಗೆ ಹಿಡಿದುಕೊಂಡು ಬಂದರು.
34ಅಂಥವನಿಗೆ ವಿಧಿಸಬೇಕಾದ ಶಿಕ್ಷೆಯ ವಿಷಯದಲ್ಲಿ ಆ ವರೆಗೂ ನಿಯಮವೇ ಇರಲಿಲ್ಲವಾದ ಕಾರಣ ಅವರು ಅವನನ್ನು ಕಾವಲಲ್ಲಿಟ್ಟರು.
35ತರುವಾಯ ಯೆಹೋವನು ಮೋಶೆಗೆ, “ಆ ಮನುಷ್ಯನಿಗೆ ಮರಣಶಿಕ್ಷೆಯಾಗಬೇಕು; ಸರ್ವಸಮೂಹದವರ ಪಾಳೆಯದ ಹೊರಗೆ ಅವನನ್ನು ಕಲ್ಲೆಸೆದು ಕೊಲ್ಲಬೇಕು” ಎಂದು ಆಜ್ಞಾಪಿಸಿದನು.
36ಯೆಹೋವನು ಮೋಶೆಗೆ ಅಪ್ಪಣೆಕೊಟ್ಟಂತೆ ಸರ್ವಸಮೂಹದವರು ಆ ಮನುಷ್ಯನನ್ನು ಪಾಳೆಯದ ಹೊರಗೆ ಹಿಡಿದುಕೊಂಡುಹೋಗಿ ಕಲ್ಲೆಸೆದು ಕೊಂದರು.
37ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
38“ನೀನು ಇಸ್ರಾಯೇಲರ ಸಂತತಿಯವರ ಸಂಗಡ ಮಾತನಾಡಿ, ಅವರು ತಮ್ಮ ವಸ್ತ್ರಗಳ ಮೂಲೆಗಳಲ್ಲಿ ಗೊಂಡೆಗಳನ್ನು ಕಟ್ಟಿಕೊಳ್ಳಬೇಕು, ಪ್ರತಿಯೊಂದು ಗೊಂಡೆಯೂ ಒಂದೊಂದು ನೀಲಿ ದಾರದಿಂದ ಕಟ್ಟಿರಬೇಕು ಎಂದು ಅವರಿಗೆ ಆಜ್ಞಾಪಿಸು.
39ಆ ಗೊಂಡೆಗಳ ಉಪಯೋಗವೇನೆಂದರೆ, ನೀವು ಅವುಗಳನ್ನು ನೋಡುವಾಗ ನನ್ನ ಆಜ್ಞೆಗಳನ್ನೆಲ್ಲಾ ನೆನಪಿಗೆ ತಂದುಕೊಂಡು ಅದನ್ನು ನಡೆಸಬೇಕು ಮತ್ತು ನೀವು ಪೂರ್ವದಲ್ಲಿ ನನಗೆ ದೇವದ್ರೋಹಿಗಳಾಗಿ ಮನಸ್ಸಿಗೂ, ಕಣ್ಣಿಗೂ ತೋರಿದಂತೆ
40ದಾರಿ ತಪ್ಪಿ ನಡೆದ ಪ್ರಕಾರ ಇನ್ನು ಮುಂದೆ ನಡೆಯದೆ, ನನ್ನ ಆಜ್ಞೆಗಳನ್ನೆಲ್ಲಾ ಲಕ್ಷಿಸಿ ಅನುಸರಿಸಿ ನಿಮ್ಮ ದೇವರಿಗೆ ಪ್ರತಿಷ್ಠಿತರಾಗಿರಬೇಕೆಂಬುದೇ.
41ನಿಮ್ಮ ದೇವರಾದ ಯೆಹೋವನು ನಾನೇ, ನಿಮ್ಮ ದೇವರಾಗುವುದಕ್ಕಾಗಿ ನಿಮ್ಮನ್ನು ಐಗುಪ್ತ ದೇಶದೊಳಗಿಂದ ಬರಮಾಡಿದ ನಿಮ್ಮ ದೇವರಾದ ಯೆಹೋವನು ನಾನೇ.”

Read ಅರಣ್ಯ 15ಅರಣ್ಯ 15
Compare ಅರಣ್ಯ 15:19-41ಅರಣ್ಯ 15:19-41